‘ಭಾರತ್ ಮಾತಾ ಕೀ ಜೈ’ ಮತ್ತು ‘ಜೈ ಹಿಂದ್’ ಎಂಬ ಘೋಷಣೆಯನ್ನು ಮೊದಲ ಬಾರಿಗೆ ಮುಸ್ಲಿಮರು ಕೂಗಿದ್ದು, ಮುಸ್ಲಿಮರು ಮೊದಲು ಕೂಗಿದ ಕಾರಣಕ್ಕೆ ಸಂಘ ಪರಿವಾರವು ಈ ಘೋಷಣೆಯನ್ನು ಕೈಬಿಡುತ್ತದೆಯೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದರು.
ಕೇರಳದ ಮಲಪ್ಪುರಂನಲ್ಲಿ ಸಿಎಎ ವಿರುದ್ಧದ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ, ಸಿಪಿಐಎಂ ನಾಯಕ ಪಿಣರಾಯಿ ವಿಜಯನ್, “ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಭಾರತದ ಇತಿಹಾಸದಲ್ಲಿ ಮುಸ್ಲಿಂ ಆಡಳಿತಗಾರರು, ಅಧಿಕಾರಿಗಳು ಕೂಡಾ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲೇ ಇತಿಹಾಸದ ಬಗ್ಗೆ ಮಾತನಾಡಿದ ವಿಜಯನ್, “ಅಜಿಮುಲ್ಲಾ ಖಾನ್ ಎಂಬ ಮುಸ್ಲಿಂ ವ್ಯಕ್ತಿ ‘ಭಾರತ್ ಮಾತಾ ಕಿ ಜೈ’ ಎಂದು ಮೊದಲ ಬಾರಿಗೆ ಕೂಗಿದ್ದಾರೆ. ಇಲ್ಲಿಗೆ ಬಂದ ಕೆಲವು ಸಂಘಪರಿವಾರದ ಮುಖಂಡರು ತಮ್ಮ ಮುಂದೆ ಇರುವವರಿಗೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಲು ಹೇಳಿದ್ದಾರೆ. ಈ ಘೋಷಣೆಯನ್ನು ರೂಪಿಸಿದವರು ಯಾರು? ಅವರ ಹೆಸರು ಅಜೀಮುಲ್ಲಾ ಖಾನ್ ಎಂದು ಸಂಘಪರಿವಾರಕ್ಕೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ” ಎಂದರು.
ಇದನ್ನು ಓದಿದ್ದೀರಾ? ಕೇರಳದಲ್ಲಿ ಸಿಎಎ ಜಾರಿ ಮಾಡಲ್ಲ: ಸಿಎಂ ಪಿಣರಾಯಿ ವಿಜಯನ್
ಹಾಗೆಯೇ, “ಈ ಘೋಷಣೆಯನ್ನು ಮೊದಲ ಬಾರಿಗೆ ಮುಸ್ಲಿಮರು ಕೂಗಿದ್ದು ಎಂಬ ಕಾರಣಕ್ಕೆ ಈ ಘೋಷಣೆ ಕೂಗುವುದನ್ನು ನಿಲ್ಲಿಸುತ್ತಾರೋ ಇಲ್ಲವೋ ತಿಳಿದಿಲ್ಲ ಎಂದ ಕೇರಳ ಸಿಎಂ, ಜೈ ಹಿಂದ್ ಎಂಬ ಘೋಷಣೆಯನ್ನು ಮೊದಲ ಬಾರಿಗೆ ರಾಯಭಾರಿ ಅಬಿದ್ ಹಸನ್ ಎಂಬವರು ಕೂಗಿದ್ದರು” ಎಂದು ತಿಳಿಸಿದರು.
“ಸಂಸ್ಕೃತದಲ್ಲಿದ್ದ 50 ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಮೊಘಲ್ ದೊರೆ ಶಹಜಹಾನ್ರ ಮಗ ದಾರಾ ಶಿಕೋ ಅನುವಾದ ಮಾಡಿದ್ದು, ಈ ಮೂಲಕ ಭಾರತದ ಕೃತಿ ವಿಶ್ವದಾದ್ಯಂತ ಪರಿಚಿತವಾಗಲು ಸಹಾಯ ಮಾಡಿದರು” ಎಂದು ಈ ಸಂದರ್ಭದಲ್ಲೇ ಪಿಣರಾಯಿ ವಿಜಯನ್ ವಿವರಿಸಿದರು.
ಇನ್ನು ಸಿಎಎ ಬಗ್ಗೆ ಮಾತನಾಡಿದ ಕೇರಳ ಸಿಎಂ, “ಸಿಎಎ ಜಾರಿ ಮಾಡುವ ಮೂಲಕ ಆರ್ಎಸ್ಎಸ್ ನೇತೃತ್ವದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಮುಸ್ಲಿಮರನ್ನು ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು.
“ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಶೋಷಣೆಗೆ ಒಳಗಾಗಿ ಬಂದವರಿಗೆ ಭಾರತದ ನಾಗರಿಕತೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ನಿಜವಾಗಿ ಭಾರತಕ್ಕೆ ವಲಸೆ ಬಂದವರನ್ನು ಅಕ್ರಮ ವಲಸಿಗರು ಎಂದು ಬಿಂಬಿಸುವುದು ಅವರ ಮುಖ್ಯ ಉದ್ದೇಶ” ಎಂದು ದೂರಿದರು.





