ವೇಡನ್ ಎಂದೇ ಖ್ಯಾತರಾಗಿರುವ ಮಲಯಾಳಂನ ಜನಪ್ರಿಯ ರ್ಯಾಪರ್ ಹಿರಂದಾಸ್ ಮುರಳಿ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವೇಡನ್ ವಿರುದ್ಧ ದಾಖಲಿಸಲಾಗಿರುವ ಎರಡನೇ ಪ್ರಕರಣ ಇದಾಗಿದೆ. ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇರಳ ಹೈಕೋರ್ಟ್ ‘ಮಧ್ಯಂತರ ಜಾಮೀನು’ ನೀಡಿದೆ.
2ನೇ ಪ್ರಕರಣ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ರ ಅಡಿಯಲ್ಲಿ ಎಫ್ಐಆರ್ ಮಾಡಲಾಗಿದ್ದು, ಈ ಸೆಕ್ಷನ್ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗಕ್ಕೆ ಸಂಬಂಧಿಸಿದೆ.
ಆರೋಪಿಸಲಾಗಿರುವ ಘಟನೆಯು 2020ರಲ್ಲಿ ನಡೆದದ್ದು ಎಂದು ವರದಿಗಳಾಗಿವೆ. ದೂರುದಾರೆಯು ರಾಜ್ಯದ ಹೊರಗೆ ಇರುವುದರಿಂದ ಹೇಳಿಕೆಯನ್ನು ಇನ್ನೂ ದಾಖಲಿಸಿಲ್ಲ.
ದೂರುದಾರೆಯು ಮೊದಲಿಗೆ ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ನಂತರ ದೂರನ್ನು ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 21ರಂದು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿರಿ: ಪಾಟ್ನಾದಲ್ಲಿ ಮಕ್ಕಳ ಹತ್ಯೆ; ಪ್ರತಿಭಟನೆಗೆ ಹೆದರಿ ಆರೋಗ್ಯ ಸಚಿವ ಪರಾರಿ
ಮೊದಲ ಪ್ರಕರಣ: ಯುವ ಮಹಿಳಾ ವೈದ್ಯೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೋಝಿಕ್ಕೋಡ್ನ ತ್ರಿಕ್ಕಕ್ಕರ ಪೊಲೀಸರು ವೇಡನ್ ವಿರುದ್ಧ ಅತ್ಯಾಚಾರ ಆರೋಪದ ಅಡಿ ಪ್ರಕರಣ ದಾಖಲಿಸಿದ್ದರು. ಜುಲೈ 31ರಿಂದಲೂ ವೇಡನ್ ತಲೆಮರೆಸಿಕೊಂಡಿದ್ದರು. “ವೇಡನ್ 2021ರಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಮತ್ತು ಆಗಸ್ಟ್ 2021ರಿಂದ ಮಾರ್ಚ್ 2023ರ ನಡುವೆ ಮದುವೆಯ ನೆಪದಲ್ಲಿ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
ಮಧ್ಯಂತರ ಜಾಮೀನು
ವೈದ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಡನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೇರಳ ಹೈಕೋರ್ಟ್ ಆಗಸ್ಟ್ 19ರಂದು ಕೈಗೆತ್ತಿಕೊಂಡಿತ್ತು. ಪೊಲೀಸರು ವೇಡನ್ ಅವರನ್ನು ಬಂಧಿಸದಂತೆ ಮಧ್ಯಂತರ ಆದೇಶವನ್ನೂ ಹೊರಡಿಸಿತ್ತು. ಜಾಮೀನು ಅರ್ಜಿಯನ್ನು ಪರಿಗಣಿಸುವವರೆಗೆ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಹೇಳಿತ್ತು. ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ಮತ್ತೆ ಕೈಗೆತ್ತಿಕೊಂಡ ಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠವು, ‘ವೇಡನ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದರೂ, ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ವೇಡನ್ ತಮ್ಮ ಜಾಮೀನು ಅರ್ಜಿಯಲ್ಲಿ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. “ನನ್ನನ್ನು ಇಂತಹ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಇದು ತನ್ನ ಖ್ಯಾತಿಗೆ ಧಕ್ಕೆ ತರುವ ಮತ್ತು ಸುಳ್ಳು ದೂರುಗಳನ್ನು ದಾಖಲಿಸುವ ಮೂಲಕ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ ವ್ಯಕ್ತಿಗಳಿಂದ ಮಾಡಿದ ಪಿತೂರಿಯಾಗಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ಯೋಗಿ ರಾಜ್ಯದಲ್ಲಿ ವರದಕ್ಷಿಣೆ ದೌರ್ಜನ್ಯ | ಒಂದೇ ವಾರದಲ್ಲಿ ಇಬ್ಬರು ಮಹಿಳೆಯರಿಗೆ ಬೆಂಕಿ ಹಚ್ಚಿ ಕ್ರೌರ್ಯ
“ಆ ಮಹಿಳೆ ನನ್ನನ್ನು ಅಭಿಮಾನಿಯಾಗಿ ಸಂಪರ್ಕಿಸಿದ್ದಳು. ನಮ್ಮ ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು. ಹೊಂದಾಣಿಕೆಯ ಕೊರತೆಯಿಂದಾಗಿ ಆಕೆ ದೂರವಾದಳು. ನಂತರ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ” ಎಂದು ವೇಡನ್ ಆರೋಪಿಸಿದ್ದಾರೆ.
ಯುವ ವೈದ್ಯೆಯು ವೇಡನ್ ಅವರ ಜಾತಿಗೆ ಸಂಬಂಧಪಟ್ಟವರಾಗಿದ್ದಾರೆ. ಇಬ್ಬರ ನಡುವೆ ಮೊದಲಿನಿಂದಲೂ ದೈಹಿಕ ಸಂಬಂಧವಿತ್ತು ಎಂಬ ಸಂಗತಿ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ‘ಇದು ಸಮ್ಮತಿಯ ಸಂಬಂಧವೇ?’ ಎಂಬುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. “ಮತ್ತೊಬ್ಬ ಮಹಿಳೆಯ ದೂರಿನ ಆಧಾರದ ಮೇಲೆ ವೇಡನ್ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂಬುದು ಪ್ರಸ್ತುತ ಪ್ರಕರಣದಲ್ಲಿ ಪರಿಗಣಿಸಬೇಕಾದ ವಿಷಯವಲ್ಲ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.





