ಅತ್ಯಾಚಾರ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ 18 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಮಧ್ಯಾಹ್ನ ಮುರ್ವಾಲ್ ಗ್ರಾಮದಲ್ಲಿ ಯುವತಿ ತನ್ನ ಮೇಲೆ ಅತ್ಯಾಚಾರ ಮಾಡಲು ಬಂದ ವ್ಯಕ್ತಿಯ ಕೊಲೆ ಮಾಡಿದ್ದಾರೆ.
ಮಧ್ಯಾಹ್ನ 3.30ರ ಸುಮಾರಿಗೆ ಸುಖರಾಜ್ ಪ್ರಜಾಪತಿ (50) ಮೃತದೇಹವು ಮನೆಯಲ್ಲಿ ಪತ್ತೆಯಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರಾಜೇಂದ್ರ ಸಿಂಗ್ ರಾಜವತ್ ಹೇಳಿದ್ದಾರೆ. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ ಎಂದೂ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರಪ್ರದೇಶ: ದಲಿತ ಮಹಿಳೆಯ ಮೇಲೆ ಅತ್ಯಾಚಾರ
ವಿಚಾರಣೆಯ ವೇಳೆ “ಆ ವ್ಯಕ್ತಿ ನನ್ನ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಈ ವೇಳೆ ನನ್ನನ್ನು ನಾನು ರಕ್ಷಿಸಿಕೊಳ್ಳಲು ಮನೆಯಲ್ಲಿದ್ದ ಹರಿತ ಆಯುಧದಿಂದ ಹೊಡೆದೆ. ಇದರಿಂದಾಗಿ ಆತ ಮೃತಪಟ್ಟ” ಎಂದು ಯುವತಿ ಹೇಳಿದ್ದಾಳೆ.
ಕಾನೂನು ಹೇಳುವುದೇನು?
ಪ್ರಸ್ತುತ ಜಾರಿಯಲ್ಲಿರುವ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಮಹಿಳೆಯು ತನ್ನ ರಕ್ಷಣೆಗಾಗಿ ಎದುರಾಳಿಯ ಮೇಲೆ ದಾಳಿ ಮಾಡಿದಾಗ ಎದುರಾಳಿ ಮೃತಪಟ್ಟರೆ ಅದನ್ನು ಕೊಲೆ ಎಂದು ಪರಿಗಣಿಸಲಾಗುವುದಿಲ್ಲ. ಆತ್ಮರಕ್ಷಣೆ ಅಥವಾ ಇತರರ ರಕ್ಷಣೆಗಾಗಿ ಮಾಡುವ ಹತ್ಯೆಯನ್ನು ಸಮರ್ಥನೀಯ ನರಹತ್ಯೆ (Justifiable Homicide) ಎಂದು ಪರಿಗಣಿಸಲಾಗುತ್ತದೆ. ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಪ್ರಯತ್ನ ನಡೆದಾಗ, ಆಸಿಡ್ ಎಸೆಯುವ ಅಥವಾ ಆಸಿಡ್ ಹಾಕಲು ಯತ್ನಿಸುವ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಲು ಎದುರಾಳಿಯ ಮೇಲೆ ದಾಳಿ ನಡೆಸುವುದು ಅಪರಾಧವಾಗುವುದಿಲ್ಲ.
ಆದರೆ ಬಿಎನ್ಎಸ್ ಸೆಕ್ಷನ್ 37 / ಹಿಂದಿನ IPC 99 ಈ ಸಂಬಂಧ ಕೆಲವು ಮಿತಿಗಳಿವೆ. ಎದುರಾಳಿಯು ಕೇವಲ ಸಣ್ಣ ಪುಟ್ಟ ತಳ್ಳಾಟ ಮಾಡುತ್ತಿದ್ದರೆ ಅಥವಾ ಬಯ್ಯುತ್ತಿದ್ದಾಗ ಆತನನ್ನು ಕೊಲ್ಲುವ ಹಕ್ಕು ಇರುವುದಿಲ್ಲ. ಅಂದರೆ ಎದುರಾಳಿಯ ದಾಳಿಯ ತೀವ್ರತೆಗೆ ತಕ್ಕಷ್ಟೇ ಪ್ರತಿರೋಧ ಇರಬೇಕು ಎಂದು ಕಾನೂನು ಹೇಳುತ್ತದೆ. ಹಾಗೆಯೇ ದಾಳಿ ಮಾಡುವ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಸಮಯವಿದ್ದಾಗ ಅಥವಾ ಹತ್ತಿರದಲ್ಲಿ ಪೊಲೀಸರ ನೆರವು ಲಭ್ಯವಿದ್ದಾಗ ಸ್ವತಃ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ.





