ಉತ್ತರ ದೆಹಲಿಯ ರೂಪ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಕಬ್ಬಿಣದ ಸೇತುವೆಯೊಂದು ಕುಸಿದ ಪರಿಣಾಮ, ಮಹಿಳೆಯೊಬ್ಬರು ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಸೇತುವೆ ಕುಸಿದುಬಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಚರಂಡಿಗೆ ಬಿದ್ದಿದ್ದಾರೆಯೇ ಅಥವಾ ಕೊಚ್ಚಿಹೋಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ‘ಬೋಟ್ ಕ್ಲಬ್’ನ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ವರ್ಷ ರಾಷ್ಟ್ರ ರಾಜಧಾನಿಯಾದ್ಯಂತ ಗುಂಡಿಗಳಿಗೆ ಬಿದ್ದು ಸಂಭವಿಸುತ್ತಿರುವ ಸರಣಿ ಸಾವುಗಳ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಹಲವಾರು ಪ್ರದೇಶಗಳಲ್ಲಿ ನಡೆಯುವ ರಸ್ತೆ ಕಾಮಗಾರಿಗಳ ವೇಳೆ ಗುತ್ತಿಗೆ ನಿಯಮಗಳು ಮತ್ತು ಸಂಚಾರ ಪೊಲೀಸರ ಷರತ್ತುಗಳ ಅಡಿಯಲ್ಲಿ ಅಳವಡಿಸಬೇಕಾದ ಮೂಲಭೂತ ಸುರಕ್ಷತಾ ಕ್ರಮಗಳ ಸಂಪೂರ್ಣ ಕೊರತೆ ಇರುವುದು ಈ ಘಟನೆಗಳಿಂದ ಸ್ಪಷ್ಟವಾಗುತ್ತಿದೆ.
ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ?
ಇದೇ ಫೆಬ್ರುವರಿ 5ರ ಮುಂಜಾನೆ ಪಶ್ಚಿಮ ದೆಹಲಿಯ ಜನಕಪುರಿಯಲ್ಲಿ ಕಮಲ್ ಧ್ಯಾನಿ (25) ಎಂಬ ಬ್ಯಾಂಕ್ ಟೆಲಿಕಾಲರ್ ಸಾವನ್ನಪ್ಪಿದ್ದರು. ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲದ ರಸ್ತೆಯಲ್ಲಿ ಯಾವುದೇ ಸುರಕ್ಷತಾ ಮುಚ್ಚಳ ಅಥವಾ ಸೂಚನಾ ಫಲಕವಿಲ್ಲದೆ ತೆರೆದಿದ್ದ 4 ರಿಂದ 5 ಮೀಟರ್ ಆಳದ ಗುಂಡಿಗೆ ಬಿದ್ದು ಅವರು ಮೃತಪಟ್ಟಿದ್ದರು. ಜನಕಪುರಿಯಲ್ಲಿ ದೆಹಲಿ ಜಲ ಮಂಡಳಿ ಯೋಜನೆಗಾಗಿ ಈ ಗುಂಡಿ ತೋಡಿದ್ದ ಗುತ್ತಿಗೆದಾರನನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.





