ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳನ್ನು ಬೆನ್ನಿಗೆ ಸೀರಿಯಲ್ಲಿ ಕಟ್ಟಿಕೊಂಡು, ನಾಲೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ತನ್ನ ಪತಿ ಜೊತೆಗಿನ ನಿರಂತರ ಕಲಹದಿಂದ ಬೇಸತ್ತು, ಮಹಿಳೆಯು ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬಂಡಾ ಜಿಲ್ಲೆಯ ರಿಸೌರಾ ಗ್ರಾಮದ ಅಖಿಲೇಶ್ ಆರ್ಖ್ ಅವರ ಪತ್ನಿ ರೀನಾ (30) ಮತ್ತು ಮೂವರು ಮಕ್ಕಳಾದ ಹಿಮಾಂಶು (9), ಅನ್ಷಿ (5) ಹಾಗೂ ಪ್ರಿನ್ಸ್ (3) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಮೃತದೇಹಗಳನ್ನು ನಾಲೆಯಿಂದ ಹೊರತೆಗೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್, “ಮಹಿಳೆಯ ಕುಟುಂಬದ ಸದಸ್ಯರು ರೀನಾ ಮತ್ತು ಮಕ್ಕಳಿಗಾಗಿ ಹುಟುಕಾಟ ನಡೆಸುತ್ತಿದ್ದಾಗ, ರೀನಾ ಅವರ ಬಳೆಗಳು ಹಾಗೂ ಮಕ್ಕಳ ಬಟ್ಟೆಗಳು ನಾಲೆಯ ಬಳಿ ಪತ್ತೆಯಾಗಿದ್ದವು. ಆಕೆ ನಾಲೆಗೆ ಹಾರಿರಬಹುದು ಎಂಬ ಶಂಕೆಯ ಮೇಲೆ, ನಾಲೆಯಲ್ಲಿ ಹುಟುಕಾಟ ನಡಲಾಗಿದ್ದು, ನಾಲ್ವರು ಮೃತದೇಹಗಳು ಪತ್ತೆಯಾಗಿವೆ” ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತ ರೀನಾ ಅವರ ಪತಿಯನ್ನು ವಿಚಾರಣೆಗೆ ಓಳಪಡಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




