2018ರ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಂಟು ವರ್ಷದ ಬಾಲಕಿಯ ಕುಟುಂಬದ ಪರವಾಗಿ ವಾದ ಮಂಡಿಸಿದ್ದ ಜಮ್ಮು ಮೂಲದ ವಕೀಲೆ ದೀಪಿಕಾ ಪುಷ್ಕರ್ ನಾಥ್ ಅವರಿಗೆ ನಿರಂತರ ಜೀವ ಬೆದರಿಕೆಗಳು ಬರುತ್ತಿದೆ. ಹಾಗಿದ್ದರೂ ತಮ್ಮ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಎಂದು ವಕೀಲೆ ದೀಪಿಕಾ ಆರೋಪಿಸಿದ್ದಾರೆ. ಭದ್ರತೆ ಇಲ್ಲದ ಕಾರಣ ತಮ್ಮ ಮಗಳು ಶಾಲೆಗೂ ಹೋಗುತ್ತಿಲ್ಲ ಎಂದೂ ತಿಳಿಸಿದ್ದಾರೆ.
ಹೈ ಪ್ರೊಫೈಲ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ವಕೀಲೆ ದೀಪಿಕಾರಿಗೆ ಬಹಿರಂಗ ಬೆದರಿಕೆಗಳಿದ್ದ ಕಾರಣ ಭದ್ರತೆ ಒದಗಿಸಲಾಗಿತ್ತು. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿರುವ ವಕೀಲೆ ದೀಪಿಕಾ, “ಸುಮಾರು ಮೂರು ತಿಂಗಳ ಹಿಂದೆ ನಿಯೋಜಿಸಲಾದ ಇಬ್ಬರು ಪಿಎಸ್ಒಗಳಲ್ಲಿ ಒಬ್ಬರನ್ನು ಪೊಲೀಸರು ಹಿಂಪಡೆದಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಬೆತ್ತಲೆ ಮೆರವಣಿಗೆ ಪ್ರಕರಣದ ಐದನೇ ಆರೋಪಿ ಬಂಧನ
“2025ರ ನವೆಂಬರ್ನಲ್ಲಿ ಒಬ್ಬ ಪಿಎಸ್ಒ ಅವರನ್ನು ಬದಲಾಯಿಸುವಂತೆ ಕೋರಿ ಐಜಿಪಿ (ಭದ್ರತಾ) ಅವರನ್ನು ಸಂಪರ್ಕಿಸಿದ್ದೆ. ಪಿಎಸ್ಒ ಬದಲಾಯಿಸುವ ಬದಲು ಭದ್ರತೆ ಕಡಿತಗೊಳಿಸಿದ್ದಾರೆ. ನನಗೆ ಈಗ ಒಬ್ಬರು ಮಾತ್ರ ಭದ್ರತೆ ಇರುವುದು. ಪೊಲೀಸ್ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದ್ದರೂ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿಲ್ಲ” ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷರಾದ ಡಾ. ಫಾರೂಕ್ ಅಬ್ದುಲ್ಲಾ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿಯನ್ನೂ ವಕೀಲೆ ಉಲ್ಲೇಖಿಸಿದ್ದಾರೆ. “Z+ ಭದ್ರತೆಯ ಹೊರತಾಗಿಯೂ ಫಾರೂಕ್ ಅಬ್ದುಲ್ಲಾ ಅವರಂತಹ ವ್ಯಕ್ತಿ ಹತ್ಯೆಯ ಯತ್ನ ನಡೆದಿದೆ. ಹಾಗಿದ್ದಾಗ ನನ್ನಂತಹ ವ್ಯಕ್ತಿಯ ಸ್ಥಿತಿಯೇನು” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಒಬ್ಬ ಪಿಎಸ್ಒ ವಕೀಲೆಯ 8 ನೇ ತರಗತಿಯ ಮಗಳೊಂದಿಗೆ ಶಾಲೆಗೆ ಹೋದರೆ, ಇನ್ನೊಬ್ಬರು ವಕೀಲೆಯೊಂದಿಗೆ ಇರುತ್ತಿದ್ದರು. “ಭದ್ರತೆಯನ್ನು ಕಡಿಮೆ ಮಾಡಲಾಗಿರುವುದರಿಂದ, ನಾನು ನನ್ನ ಮಗಳನ್ನು ಭಯದಿಂದ ಶಾಲೆಗೆ ಕಳುಹಿಸುತ್ತಿಲ್ಲ. ಅವಳು ಪರೀಕ್ಷೆಗಳಿಗೆ ಹಾಜರಾಗಲು ಮಾತ್ರ ಹೋಗಿದ್ದಳು” ಎಂದು ವಕೀಲೆ ತಿಳಿಸಿದ್ದಾರೆ.
ಹಾಗೆಯೇ, “ನನಗೆ ಅಥವಾ ನನ್ನ ಕುಟುಂಬಕ್ಕೆ ಏನಾದರೂ ಸಂಭವಿಸಿದರೆ, ಅದಕ್ಕೆ ಜಮ್ಮು ಭದ್ರತಾ ಐಜಿಪಿಯೇ ಹೊಣೆ” ಎಂದು ಹೇಳಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲೆ ಪತ್ರ ಬರೆದಿದ್ದಾರೆ.
ಏನಿದು ಕಥುವಾ ಅತ್ಯಾಚಾರ-ಕೊಲೆ ಪ್ರಕರಣ?
2018ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ರಸಾನಾ ಗ್ರಾಮದ 8 ವರ್ಷದ ಬಾಲಕಿಯನ್ನು ಅಪಹರಿಸಿ, ಸುಮಾರು ಒಂದು ವಾರಗಳ ಕಾಲ ದೇವಸ್ಥಾನವೊಂದರಲ್ಲಿ ಕೂಡಿಹಾಕಿ, ಮಾದಕ ದ್ರವ್ಯಗಳನ್ನು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ʼನ್ಯಾಯ ಬೇಡಿಕೊಳ್ಳುವುದಲ್ಲ, ದಕ್ಕಿಸಿಕೊಳ್ಳುವುದುʼ: ಬಲಾಢ್ಯರ ವಿರುದ್ಧ ಗೆದ್ದ ಗಟ್ಟಿಗಿತ್ತಿಯರ ಕಥೆ!
ಪಠಾಣ್ಕೋಟ್ನ ವಿಶೇಷ ನ್ಯಾಯಾಲಯವು ಒಟ್ಟು ಏಳು ಆರೋಪಿಗಳಲ್ಲಿ ಆರು ಮಂದಿಯನ್ನು ದೋಷಿಗಳೆಂದು ಘೋಷಿಸಿತು. ಪ್ರಮುಖ ಆರೋಪಿ ಸಂಜಿ ರಾಮ್, ದೀಪಕ್ ಖಜುರಿಯಾ ಮತ್ತು ಪರ್ವೇಶ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳಾದ ತಿಲಕ್ ರಾಜ್, ಆನಂದ್ ದತ್ತಾ ಮತ್ತು ಸುರೇಂದರ್ ವರ್ಮಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಾಗೆಯೇ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಂಜಿ ರಾಮ್ ಮಗ ವಿಶಾಲ್ ಜಂಗೋತ್ರಾ ಖುಲಾಸೆಗೊಂಡಿದ್ದಾನೆ. ಅಪ್ರಾಪ್ತನಾಗಿದ್ದ ಎನ್ನಲಾದ ಎಂಟನೇ ಆರೋಪಿಯ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲು ನ್ಯಾಯಾಲಯ ಸೂಚಿಸಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆ ಪರ ನಿಂತ ವಕೀಲೆ ದೀಪಿಕಾ ಪುಷ್ಕರ್ ನಾಥ್. ಈ ಪ್ರಕರಣದಲ್ಲಿ ವಾದಿಸಿದ ಬಳಿಕ ದೀಪಿಕಾ ಅವರಿಗೆ ಹಲವು ಬಾರಿ ಜೀವ ಬೆದರಿಕೆ ಹಾಕಲಾಗಿದೆ.
ತನ್ನ ಆಶ್ರಮದ ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ಗೆ ‘ಖಲಿಸ್ತಾನಿ ಬೆಂಬಲಿತ’ ಗುಂಪುಗಳಿಂದ ಜೀವ ಬೆದರಿಕೆಯಿದೆ. ಈ ಕಾರಣಕ್ಕೆ ಹರಿಯಾಣ ಸರ್ಕಾರವು ರಾಮ್ ರಹೀಮ್ಗೆ Z+ ಭದ್ರತೆಯನ್ನು ಒದಗಿಸಿದೆ. ಪೆರೋಲ್ ಮೇಲೆ ಹೊರಬಂದಾಗಲೆಲ್ಲ ಈತನಿಗೆ ಈ ಉನ್ನತ ಮಟ್ಟದ ರಕ್ಷಣೆ ಸಿಗುತ್ತಿದೆ. ಹಾಗಿದ್ದಾಗ ಅತ್ಯಾಚಾರ ಸಂತ್ರಸ್ತೆ ಪರವಾಗಿ ನಿಂತವರಿಗೆ ಭದ್ರತೆ ಕಡಿತಗೊಳಿಸುವುದು ಎಷ್ಟು ಸರಿ ಎಂಬ ಚರ್ಚೆ ನಡೆಯುತ್ತಿದೆ.





