ಸುಮಾರು 21 ವರ್ಷದ ಯುವತಿಯೊಬ್ಬಳು ತನ್ನ ತಂದೆ ಮತ್ತು ಇಬ್ಬರು ಸಹೋದರರಿಂದ ಮರ್ಯಾದೆಗೇಡು ಹತ್ಯೆಗೆ ಒಳಗಾದ ತನ್ನ ಪ್ರಿಯಕರನ ಶವದ ಜತೆಯೇ ಮದುವೆಯಾದ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಆಂಚಲ್ ಮಾಮಿದ್ವರ್ನ ಪ್ರಿಯಕರ ಸಕ್ಷಾಮ್ ಟೇಟ್ (20) ಗುರುವಾರ ಸಂಜೆ ಹಳೆಯ ಗಂಜ್ ಪ್ರದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ನಿಂತಿದ್ದ. ಈ ವೇಳೆ ಆಂಚಲ್ನ ಸಹೋದರ ಹಿಮೇಶ್ ಮಾಮಿದ್ವರ್ ಮತ್ತು ಸಕ್ಷಾಮ್ ನಡುವೆ ಜಗಳವಾಗಿದೆ. ಈ ವೇಳೆ ಹಿಮೇಶ್ ಗುಂಡು ಹಾರಿಸಿ ಕೊಂದಿದ್ದಾನೆ. ಈ ಕೃತ್ಯ ಎಸಗಿದ ತನ್ನ ಕುಟುಂಬಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಂಚಲ್ ಆಗ್ರಹಿಸಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿದ್ದೀರಾ? ಮರ್ಯಾದಾಗೇಡು ಹತ್ಯೆ | ಅಂತರ್ಜಾತಿ ಪ್ರೀತಿ; ತಂದೆಯ ಕ್ರೌರ್ಯಕ್ಕೆ ಮಗಳು ಬಲಿ
ಸಕ್ಷಾಮ್ ಮೇಲೆ ಹಿಮೇಶ್ ಗುಂಡು ಹಾರಿಸಿದ್ದು, ಗುಂಡು ಅವನ ಪಕ್ಕೆಲುಬುಗೆ ತಗುಲಿದೆ. ಅದಾದ ಬಳಿಕ ಸಕ್ಷಾಮ್ ತಲೆಗೆ ಹಿಮೇಶ್ ಕಲ್ಲಿನಿಂದ ಒಡೆದಿದ್ದಾನೆ. ಇದರಿಂದಾಗಿ ಸಕ್ಷಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮೇಶ್, ಆತನ ಸಹೋದರ ಸಾಹಿಲ್ (25) ಮತ್ತು ಆಂಚಲ್ ತಂದೆ ಗಜಾನನ್ ಮಾಮಿದ್ವರ್ (45) ಬಂಧನ ಮಾಡಲಾಗಿದೆ.
ಶುಕ್ರವಾರ ಸಂಜೆ, ಸಕ್ಷಾಮ್ ಮೃತದೇಹದ ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆಗಳು ನಡೆಯುತ್ತಿರುವಾಗ ಆಂಚಲ್, ಸಕ್ಷಾಮ್ ಮನೆಗೆ ಬಂದಿದ್ದು, ಕೆಲವು ವಿಧಿವಿಧಾನಗಳ ಮೂಲಕ ಮೃತ ದೇಹದೊಂದಿಗೆ ಮದುವೆ ಮಾಡಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
“ನಾನು ಕಳೆದ ಮೂರು ವರ್ಷಗಳಿಂದ ಸಕ್ಷಾಮ್ ಅವರನ್ನು ಪ್ರೀತಿಸುತ್ತಿದ್ದೆ. ಆದರೆ ಜಾತಿ ಬೇರೆಯಾದ ಕಾರಣಕ್ಕೆ ನನ್ನ ತಂದೆ ವಿರೋಧಿಸಿದ್ದರು. ನನ್ನ ಕುಟುಂಬವು ಆಗಾಗ್ಗೆ ಸಕ್ಷಾಮ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿತ್ತು. ಈಗ ನನ್ನ ತಂದೆ ಮತ್ತು ಸಹೋದರರಾದ ಹಿಮೇಶ್ ಮತ್ತು ಸಾಹಿಲ್ ಸಕ್ಷಾಮ್ನ ಕೊಲೆ ಮಾಡಿದ್ದಾರೆ. ನನಗೆ ನ್ಯಾಯ ಬೇಕು. ಆರೋಪಿಯನ್ನು ಗಲ್ಲಿಗೇರಿಸಬೇಕು” ಎಂದು ಆಂಚಲ್ ಆಗ್ರಹಿಸಿದ್ದಾರೆ. ಇನ್ನು ಮುಂದೆ ತಾನು ಸಕ್ಷಾಮ್ ಮನೆಯಲ್ಲಿಯೇ ಇರುವುದಾಗಿಯೂ ಆಂಚಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮರ್ಯಾದೆಗೇಡು ಹತ್ಯೆ | ಐದು ದಿನಗಳ ಹೋರಾಟ – ಪಿಎಸ್ಐ ಬಂಧನ
ಸದ್ಯ ಭಾರತೀಯ ನ್ಯಾಯ ಸಂಹಿತೆ, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆರು ಜನರ ವಿರುದ್ಧ ಕೊಲೆ, ಕಾನೂನುಬಾಹಿರ ಸಭೆ, ಗಲಭೆ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಇತ್ವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಬಂಧಿತರನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ದೇಶದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ಹಿಂದೆಯೂ ಹಲವು ಮರ್ಯಾದೆಗೇಡು ಹತ್ಯೆಗಳು ನಡೆದಿದೆ. ಆದರೆ ಅದರ ಬಗ್ಗೆ ದೂರು ದಾಖಲಾಗಿಲ್ಲ. ಇದೀಗ ಹೆಚ್ಚಿನ ಪ್ರಮಾಣದಲ್ಲಿ ದೂರು ದಾಖಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. 2014ರಲ್ಲಿ 28 ಪ್ರಕರಣಗಳು ವರದಿಯಾಗಿದ್ದರೆ, 2015ರಲ್ಲಿ ಈ ಸಂಖ್ಯೆ 251ಕ್ಕೆ ಏರಿಕೆಯಾಗಿದೆ. ಅಂದರೆ ದಾಖಲಾಗುತ್ತಿರುವ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಶೇ.796ರಷ್ಟು ಹೆಚ್ಚಳವಾಗಿದೆ.
2020ರಲ್ಲಿ 25 ಪ್ರಕರಣಗಳು, 2021ರಲ್ಲಿ 33 ಪ್ರಕರಣಗಳು, 2023ರಲ್ಲಿ 38 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಆರು ವರ್ಷಗಳಲ್ಲೇ ದಾಖಲಾದ ಅತಿ ಅಧಿಕ ಪ್ರಕರಣವಾಗಿದೆ. ಅಂತರ-ಜಾತಿ ಅಥವಾ ಅಂತರ-ಧರ್ಮೀಯ ವಿವಾಹವನ್ನು ಕುಟುಂಬದ ಗೌರವಕ್ಕೆ ಧಕ್ಕೆ ಎಂದು ಹೇಳಿಕೊಳ್ಳುವ ಜಾತಿ ವ್ಯವಸ್ಥೆಯ ಸಮಾಜದ ಪಿತೃಪ್ರಭುತ್ವದ ಮನಸ್ಥಿತಿಯ ಜನರುಗಳು ಈ ಹತ್ಯೆಗಳನ್ನು ಮಾಡುತ್ತಿದ್ದಾರೆ.
ಆದರೆ ಭಾರತದಲ್ಲಿ ‘ಮರ್ಯಾದೆಗೇಡು ಹತ್ಯೆ’ಗೆ ಪ್ರತ್ಯೇಕ ಕಾನೂನು ಇಲ್ಲ. ಇದರಿಂದಾಗಿ ಸಾಮಾನ್ಯ ಕೊಲೆ ಪ್ರಕರಣಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ. ಇದರಿಂದಾಗಿ ಒಟ್ಟಾರೆ ‘ಮರ್ಯಾದೆಗೇಡು ಹತ್ಯೆ’ ಪ್ರಕರಣಗಳನ್ನು ಗುರುತಿಸುವುದೂ ಕಷ್ಟವಾಗಿದೆ.





