ಮದುವೆಯಾಗಲು ನಿರಾಕರಿಸಿದ ಕಾರಣ ದುರುಳನೋರ್ವ ಮಹಿಳೆಗೆ ಗುಂಡು ಹಾರಿಸಿದ ಘಟನೆ ಹರಿಯಾಣದ ಗುರುಗ್ರಾಮ ಕ್ಲಬ್ನಲ್ಲಿ ನಡೆದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ಮಹಿಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಆರಂಭದಲ್ಲಿ ಆತಂಕದಲ್ಲಿ ಹೇಳಿಕೆ ನೀಡಿರಲಿಲ್ಲ. ಆದರೆ ಬಳಿಕ ನಿಜವಾದ ವಿಷಯವನ್ನು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮ್ಮ ಪತ್ನಿ ಕಲ್ಪನಾ (25) ಗುರುಗ್ರಾಮ್ನ ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದು, ದೆಹಲಿಯ ಸಂಗಮ್ ವಿಹಾರ್ ನಿವಾಸಿ ತುಷಾರ್ ಕಲ್ಪನಾ ಮೇಲೆ ಗುಂಡು ಹಾರಿಸಿದ್ದಾನೆ ಎಂದು ದೆಹಲಿಯ ನಜಾಫ್ಗಢದ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ. ಡಿಸೆಂಬರ್ 19ರಂದು ತಮ್ಮ ಪತ್ನಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮದುವೆಗೆ ನಿರಾಕರಿಸುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂ ಕೋರ್ಟ್
“ಸುಮಾರು ಒಂದು ತಿಂಗಳ ಹಿಂದೆ ತುಷಾರ್ ನಮ್ಮ ಮನೆಗೆ ಬಂದಿದ್ದು, ನಮ್ಮೊಂದಿಗೆ ಜಗಳವಾಡಿ ಹೋಗಿದ್ದನು” ಎಂದೂ ಕಲ್ಪನಾ ಪತಿ ಹೇಳಿದ್ದಾರೆ. ದೂರಿನ ಆಧಾರದ ಮೇಲೆ, ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ಅಪರಾಧ ವಿಭಾಗದ ತಂಡವು ಇಬ್ಬರು ಆರೋಪಿಗಳಾದ ತುಷಾರ್ ಅಲಿಯಾಸ್ ಜಾಂಟಿ (25) ಮತ್ತು ಆತನ ಸ್ನೇಹಿತ ಶುಭಮ್ ಅಲಿಯಾಸ್ ಜಾನಿಯ (24) ಬಂಧನ ಮಾಡಿದೆ. ವಿಚಾರಣೆಯ ಸಮಯದಲ್ಲಿ, ತುಷಾರ್ ಆರು ತಿಂಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದಾಗಿ ಆಕೆಯನ್ನು ಮದುವೆಯಾಗಬೇಕೆಂದು ಬಯಸಿದ್ದಾಗಿ ತಿಳಿಸಿದ್ದಾನೆ.
ಡಿಸೆಂಬರ್ 19ರ ರಾತ್ರಿಯೂ ಪ್ರಪೋಸ್ ಮಾಡಿದ್ದು ಆದರೆ ಆಕೆ ಮತ್ತೆ ನಿರಾಕರಿಸಿದ್ದಕ್ಕೆ ಸಿಟ್ಟು ಬಂದು ಗುಂಡು ಹಾರಿಸಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಮದುವೆ ಆಗಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ದಾಳಿ, ಹತ್ಯೆ ಮಾಡುವಂತಹ ಘಟನೆಗಳು ದೇಶದಲ್ಲಿ ಇತ್ತೀಚೆಗೆ ಅಧಿಕವಾಗಿ ವರದಿಯಾಗುತ್ತಿದೆ. ರಾಜ್ಯದಲ್ಲಿ ಈ ವರ್ಷ ಹಲವು ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 24ರಂದು ಬೆಂಗಳೂರು ನಗರದ ಬಸವೇಶ್ವರನಗರದಲ್ಲಿ ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಲು ಯತ್ನಿಸಿದ್ದ, ಸಂತ್ರಸ್ತೆಯ ದೇಹ ಶೇ.50ರಷ್ಟು ಸುಟ್ಟು ಹೋಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಪ್ರೀತಿ ನಿರಾಕರಣೆ; ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಯುವಕ
ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಉಡುಪಿಯಲ್ಲಿ 24 ವರ್ಷದ ಯುವತಿಯೊಬ್ಬಳು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕೆಯ ನೆರೆಮನೆಯವನು ಆಕೆಯ ಹುಟ್ಟುಹಬ್ಬದ ದಿನದಂದು ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ಸಂತ್ರಸ್ತೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಮಂಚನಬೆಲೆ ಗ್ರಾಮದಲ್ಲಿ ಮದುವೆ ನಿರಾಕರಿಸಿದ್ದಕ್ಕಾಗಿ 18 ವರ್ಷದ ಯುವತಿಯ ಮೇಲೆ ಆಕೆಯ ಸಂಬಂಧಿ ಆಸಿಡ್ ದಾಳಿ ನಡೆಸಿದ್ದು, ನಂತರ ಆರೋಪಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ್ದಾನೆ. ಅಕ್ಟೋಬರ್ನಲ್ಲಿ ಇದೇ ರೀತಿ ಬೆಂಗಳೂರು ನಗರದಲ್ಲಿ ಫಾರ್ಮಸಿ ವಿದ್ಯಾರ್ಥಿನಿಯನ್ನು ಆಕೆಯ ನೆರೆಮನೆಯ ಯುವಕ ರೈಲ್ವೆ ಹಳಿಗಳ ಬಳಿ ಕೊಲೆ ಮಾಡಿದ್ದಾನೆ.





