ಸಹಪಾಠಿಯೊಬ್ಬಳನ್ನು ಮದುವೆಯಾಗುವ ಉದ್ದೇಶದಿಂದ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ ಯುವಕನೊಬ್ಬ ಯುವತಿ ವಿವಾಹವಾಗಲು ನಿರಾಕರಿಸಿದ ಕಾರಣಕ್ಕೆ ಜೀವಂತವಾಗಿ ಸುಟ್ಟ ಆಘಾತಕಾರಿ ಘಟನೆ ಚೆನ್ನೈ ನಗರದ ಕೆಲಂಬಾಕ್ಕಂ ಬಳಿಯ ತಲಂಬೂರ್ ನಗರದಲ್ಲಿ ನಡೆದಿದೆ.
26 ವರ್ಷದ ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ ಎಂಬಾತ ಹುಟ್ಟುಹಬ್ಬದಂದು ಅನಿರೀಕ್ಷಿತ ಉಡುಗೊರೆ ನೀಡುವ ನೆಪದಲ್ಲಿ 24 ವರ್ಷದ ಆರ್ ನಂದಿನಿ ಎಂಬ ಯುವತಿಯನ್ನು ಶನಿವಾರ(ಡಿ.23) ತನ್ನ ಮನೆಗೆ ಕರೆದಿದ್ದ. ಒಂದಿಷ್ಟು ಮಾತುಕತೆ, ಸುತ್ತಾಟದ ನಂತರ ನಿರ್ಜನ ಪ್ರದೇಶದಲ್ಲಿ ಮಾತನಾಡಲು ಕರೆದುಕೊಂಡು ಹೋಗಿದ್ದಾನೆ. ಭಾವಚಿತ್ರ ತೆಗೆಯುವ ನೆಪದಲ್ಲಿ ಸರಪಳಿಯಿಂದ ಕಟ್ಟಿ ಬ್ಲೇಡ್ನಿಂದ ದೇಹದ ಅಂಗಗಳನ್ನು ಕೊಯ್ದು ನಂತರ ಪೆಟ್ರೋಲ್ನಿಂದ ಆಕೆಯನ್ನು ಸುಟ್ಟಿದ್ದಾನೆ.
ಸುಟ್ಟ ಗಾಯದಿಂದ ನರಳಾಡುತ್ತಿದ್ದ ನಂದಿನಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಇಂದು ಮೃತಪಟ್ಟಿದ್ದಾಳೆ.
ಮಧುರೈ ನಿವಾಸಿಗಳಾದ ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ ಹಾಗೂ ನಂದಿನಿ ಸಹಪಾಠಿಗಳಾಗಿದ್ದರು. ವೆಟ್ರಿಮಾರನ್ ಈ ಮೊದಲು ಮಹೇಶ್ವರಿ ಎಂಬ ಹೆಸರಿನಲ್ಲಿ ಹುಡುಗಿಯಾಗಿದ್ದಳು. ಇಬ್ಬರು ಉನ್ನತ ಶಿಕ್ಷಣ ಪಡೆದು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂದಿನಿಯನ್ನು ಮಹೇಶ್ವರಿ ಹೆಚ್ಚು ಹಚ್ಚಿಕೊಂಡಿದ್ದಳು. ಆದರೆ ಚೆನ್ನೈನಲ್ಲಿ ಕೆಲಸ ಸಿಕ್ಕಿದ ನಂತರ ನಂದಿನಿ ತನ್ನ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಳು.
ಮದುವೆಯಾಗಲು ಲಿಂಗ ಪರಿವರ್ತನೆ
ನಂದಿನಿಯನ್ನು ಮದುವೆಯಾಗಲು ಮಹೇಶ್ವರಿ ಕೆಲ ತಿಂಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಕೊಂಡು ವೆಟ್ರಿಮಾರನ್ ಆಗಿ ಬದಲಾಗಿದ್ದ. ಕೆಲವು ದಿನಗಳ ಹಿಂದೆ ವೆಟ್ರಿಮಾರನ್ ನಂದಿನಿಯನ್ನು ಭೇಟಿಯಾದಾಗ ಲಿಂಗಪರಿವರ್ತನೆಯಾಗಿರುವ ಬಗ್ಗೆ ಆಕೆ ಅಸಮಾಧಾನ ತೋರಿದ್ದಳು. ಇದಕ್ಕೆ ಸಮಾಜ ಅನುಮಾನದಿಂದ ನೋಡುತ್ತದೆ ಎಂದು ಮದುವೆಯಾಗುವುದಕ್ಕೂ ಒಲ್ಲೆ ಎಂದಿದ್ದಳು. ನಂತರದ ದಿನಗಳಲ್ಲಿ ವೆಟ್ರಿಮಾರನ್ನಿಂದ ನಂದಿನಿ ಅಂತರ ಕಾಯ್ದುಕೊಂಡಿದ್ದಳು. ಇದೇ ಸಮಯದಲ್ಲಿ ಕಂಪನಿಯ ಸಹದ್ಯೋಗಿ ಜೊತೆ ಸಲುಗೆ ಬೆಳೆಸಿಕೊಂಡಿದ್ದು ಕೂಡ ವೆಟ್ರಿಮಾರನ್ಗೆ ಕೋಪ ತರಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಕೊಲೆ ಮಾಡಲು ಮೊದಲೇ ಸಂಚು ಮಾಡಿದ್ದ ವೆಟ್ರಿಮಾರನ್ ಆಕೆಯ ಹುಟ್ಟುಹಬ್ಬದ ದಿನದಂದು ಅನಿರೀಕ್ಷಿತ ಉಡುಗೊರೆ ಕೊಡುವುದಾಗಿ ತನ್ನ ತಾನಿರುವ ಕೊಠಡಿಗೆ ಕರೆಸಿಕೊಂಡಿದ್ದ. ಒಂದಷ್ಟು ಹೊತ್ತು ಇಬ್ಬರು ಮಾತುಕತೆಯಾಡಿ ನಗರದಲ್ಲಿ ಶಾಪಿಂಗ್ ಮಾಡಿದ್ದಾರೆ. ತಾಂಬರಂ ಪ್ರದೇಶದಲ್ಲಿದ್ದ ಅನಾಥಾಶ್ರಮಕ್ಕೆ ಹೋಗಿ ದೇಣಿಗೆಯನ್ನು ವೆಟ್ರಿಮಾರನ್ ನೀಡಿದ್ದಾನೆ. ನಂತರ ನಂದಿನಿಯನ್ನು ಮನೆಗೆ ಬಿಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದುಷ್ಕೃತ್ಯವೆಸಗಿದ್ದಾನೆ.
ಕ್ಷಿಪ್ರ ತನಿಖೆ ಕೈಗೊಂಡ ಚೆನ್ನೈ ಪೊಲೀಸರು ವೆಟ್ರಿಮಾರನ್ನನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದಾರೆ. ತನ್ನ ಜೊತೆಗಿನ ಅಂತರ ಕಾಯ್ದುಕೊಂಡು ಬೇರೊಬ್ಬನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಕ್ಕೆ ಈ ರೀತಿಯ ಕೃತ್ಯವೆಸಗಿರುವುದಾಗಿ ಆರೋಪಿ ತಿಳಿಸಿದ್ದಾನೆ.





