ಸಮಾನತೆ, ಸ್ವಾತಂತ್ರ್ಯ ಹಾಗೂ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚೆಗಳು ಮತ್ತು ಹೋರಾಟಗಳು ನಡೆಯುತ್ತಿರುವ ಸಮಯದಲ್ಲಿಯೂ ಮಹಿಳೆಯರ ನಡವಳಿಕೆ, ಓಡಾಟದ ಕುರಿತು ಟೀಕೆಗಳು, ವಿವಾದಾತ್ಮಕ ಹೇಳಿಕೆಗಳು ವರದಿಯಾಗುತ್ತಿವೆ. ಇದೀಗ, ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯರ ನಡೆವಳಿಕೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಆಕ್ರೋಶ-ಟೀಕೆಗೆ ಗುರಿಯಾಗಿದ್ದಾರೆ.
“ಮಹಿಳೆಯರು ಈಗ ಮದ್ಯಪಾನ ಮಾಡುತ್ತಿದ್ದಾರೆ ಮತ್ತು ಗಲಾಟೆ ನಡೆಸುತ್ತಿದ್ದಾರೆ. ಮಹಿಳೆಯರು ಮದ್ಯಪಾನ ಮಾಡುವುದು ಸಮಾಜಕ್ಕೆ ಹಾನಿ ಮಾಡುತ್ತದೆ” ಎಂದು ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ ರಣಘಾಟ್ ಪೊಲೀಸ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾಲ್ತು ಹಲ್ದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ; “ಹುಡುಗರು ತಪ್ಪು ಕೆಲಸಗಳನ್ನು ಮಾಡುತ್ತಾರೆ. ಮಹಿಳೆಯರ ಕೆಲಸ ಹುಡುಗರು ತಪ್ಪು ಮಾಡದಂತೆ ತಡೆಯುವುದು. ಆದರೆ, ಈಗ ಮಹಿಳೆಯರು ಮದ್ಯಪಾನ ಮಾಡಿ ಗದ್ದಲ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಹಾನಿಯನ್ನುಂಟುಮಾಡುತ್ತಿದೆ. ಸಮಾಜಕ್ಕೆ ಹುಚ್ಚು ಹಿಡಿದಂತಾಗುತ್ತದೆ” ಎಂದು ಅಧಿಕಾರಿ ಹೇಳುತ್ತಿರುವ ಕಂಡುಬಂದಿದೆ.
“ಕಳೆದ ವರ್ಷದ ಕಾಳಿ ಪೂಜಾ ಮೆರವಣಿಗೆಗಳಲ್ಲಿ ಮದ್ಯಪಾನ ಮಾಡಿದವರಲ್ಲಿ ಯುವತಿಯರ ಪ್ರಮಾಣ ಅತ್ಯಧಿಕವಾಗಿದೆ ಎಂಬುದನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ. ಹುಡುಗಿಯರು ಬೀದಿಗಳಲ್ಲಿ ನಿಂತು ಮದ್ಯ ಸೇವಿಸುತ್ತಿದ್ದಾರೆ. ಇದು ಮೆರವಣಿಗೆಯ ಸೌಂದರ್ಯವೇ? ನಾನು ಈ ಮೆರವಣಿಗೆಯನ್ನು ಖಂಡಿಸುತ್ತೇನೆ” ಎಂದು ಹಲ್ದಾರ್ ಹೇಳಿದ್ದಾರೆ.
“ಮನೆಯ ಮಹಿಳೆಯರು ಹೀಗಾದರೆ, ಸಮಾಜ ಎಲ್ಲಿಗೆ ಹೋಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.
ಅವರ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದಾಗ್ಯೂ, ಆ ಅಧಿಕಾರಿಯ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ: ಮಾಡಿದ್ದೇನು? ಮಾಡಬೇಕಿರುವುದೇನು?
ಇತ್ತೀಚೆಗೆ, ಪಶ್ಚಿಮ ಬಂಗಾಳದ ದುರ್ಗಾಪುರದ ವೈದ್ಯಕೀಯ ಕಾಲೇಜಿನ ಬಳಿ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಬಗ್ಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ, ಪೊಲೀಸ್ ಅಧಿಕಾರಿಯ ವಿವಾದಾತ್ಮಕ ಹೇಳಿಕೆಯು ಆಕ್ರೋಶಕ್ಕೆ ಗುರಿತಯಾಗಿದೆ.
ಇನ್ನು, ವಿದ್ಯಾರ್ಥಿನಿಯ ಹತ್ಯೆ ಪ್ರಕರಣದ ಕುರಿತು ಮಾತನಾಡಿದ್ದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನಡುರಾತ್ರಿಯಲ್ಲಿ ಹೆಣ್ಣುಕ್ಕಳು ಯಾಕೆ ಹೊರಗೆ ಬರಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು ರಾತ್ರಿ ಹೊರಬರದಂತೆ ಗಮನ ಹರಿಸಬೇಕು. ಅವರು ಹೊರಗೆ ಬರಲು ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು” ಎಂದು ಹೇಳಿದ್ದರು. ಮಮತಾ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿದ್ದವು. ಟೀಕೆಗಳು ವ್ಯಕ್ತವಾಗಿದ್ದವು.




