ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯ ಅನುಷ್ಠಾನವನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿ ಮಸೂದೆಯ ಕುರಿತು ವಿಪಕ್ಷಗಳಿಂದ ಸರ್ಕಾರವು ಅಭಿಪ್ರಾಯ ಕೇಳುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಸಂವಿಧಾನಕ್ಕೆ 106ನೇ ತಿದ್ದುಪಡಿಯೊಂದಿಗೆ 2023ರ ಸೆಪ್ಟೆಂಬರ್ನಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ್-2023’ಅನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಈ ಹೊಸ ಕಾಯ್ದೆಯನ್ನು 2027ರ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಆಧಾರದ ಮೇಲೆ 2029ರ ಲೋಕಸಭಾ ಚುನಾವಣೆ ವೇಳೆಗೆ ಅನುಷ್ಠಾನಕ್ಕೆ ತರುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಮೀಸಲಾತಿಯ ಅನುಷ್ಠಾನವು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಯ ಮೇಲೆ ಅವಲಂಬಿತವಾಗಿದೆ, ಇದು ಮೀಸಲಾತಿಯ ನಿಜವಾದ ಅನುಷ್ಠಾನವನ್ನು ವಿಳಂಬಗೊಳಿಸುತ್ತದೆ ಎಂದು ವಾದಿಸಿದ್ದವು.
ಮೂಲಗಳ ಪ್ರಕಾರ, ಮಹಿಳಾ ಮೀಸಲಾತಿಯನ್ನು ಈ ಹಿಂದೆ ಯೋಜಿಸಿದ್ದಕ್ಕಿಂತ ಬೇಗ ಜಾರಿಗೆ ತರಲು ಕಾಯ್ದೆಗಳಿಗೆ ತಿದ್ದುಪಡಿಗಳನ್ನು ಮಾಡಬಹುದೇ ಎಂದು ಚರ್ಚಿಸಲು ಕೇಂದ್ರ ಸರ್ಕಾರವು ಅನೌಪಚಾರಿಕವಾಗಿ ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದೆ.
ಕಾನೂನಿನ ಪ್ರಕಾರ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮುಂದೆ ನೀಡಲಾಗುವ 33% ಮೀಸಲಾತಿಯು 15 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ನಂತರ, ಈ ಕಾಯ್ದೆಯನ್ನು ವಿಸ್ತರಿಸಬೇಕೆ ಎಂಬುದನ್ನು ಸಂಸತ್ತು ನಿರ್ಧರಿಸಬಹುದು.
ಈ ಲೇಖನ ಓದಿದ್ದೀರಾ?: ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!
“ಮಹಿಳಾ ಕೋಟಾವನ್ನು ಕ್ಷೇತ್ರ ಪುನರ್ವಿಂಗಡಣೆಗೆ ಏಕೆ ತಳುಕು ಹಾಕಬೇಕು? ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆ ಮತ್ತು ಜನಗಣತಿಯ ಮೇಲೆ ಅವಲಂಬಿತಗೊಳಿಸಿರುವುದರಿಂದ ಅದು ಸ್ಥಗಿತಗೊಳ್ಳುತ್ತದೆ ಮತ್ತು ವಿಳಂಬವಾಗುತ್ತದೆ. ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರವು ಮಹಿಳಾ ಮೀಸಲಾತಿ ನಿಬಂಧನೆಯನ್ನು ಕ್ಷೇತ್ರ ಪುನರ್ವಿಂಗಡಣೆಯ ಅವಶ್ಯಕತೆಯಿಂದ ಬೇರ್ಪಡಿಸಬಹುದು. ಈ ನಿಟ್ಟಿನಲ್ಲಿ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಬೇಕು” ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣಬ್ ಸೇನ್ ಹೇಳಿದ್ದಾರೆ.




