ಪತ್ನಿ ಅಡುಗೆ, ಇತ್ಯಾದಿ ಮನೆಗೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ. ಇದು ಕ್ರೌರ್ಯ ಎಂದು ಹೇಳಿಕೊಂಡು ವಿಚ್ಛೇದನ ಕೋರಿದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಪತ್ನಿ ಮನೆಗೆಲಸ ಮಾಡದಿದ್ದರೆ ಅದು ಕ್ರೌರ್ಯವಲ್ಲ” ಎಂದು ಹೇಳಿದೆ.
ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, “ಅಷ್ಟಕ್ಕೂ ಕಾಲ ಬದಲಾಗಿದೆ. ನೀವು ಮದುವೆಯಾಗಿರುವುದು ದಾಸಿಯನ್ನಲ್ಲ, ಜೀವನ ಸಂಗಾತಿಯನ್ನು. ಪತ್ನಿ ಕೆಲಸದಾಳಲ್ಲ, ಗಂಡನೂ ಮನೆಗೆಲಸಗಳಲ್ಲಿ ನೆರವಾಗಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮದುವೆಯ ನೆಪದಲ್ಲಿ ಮಹಿಳಾ ಪೊಲೀಸ್ ಮೇಲೆ ಸೇನಾ ಅಧಿಕಾರಿ ಅತ್ಯಾಚಾರ
“ನೀವು ಅಡುಗೆ ಮಾಡಲು, ಪಾತ್ರೆ ತೊಳೆಯಲು ಸಹಾಯ ಮಾಡಬೇಕು. ಇಂದಿನ ಸಮಯ ವಿಭಿನ್ನವಾದುದ್ದು” ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ತಿಳಿಸಿದ್ದಾರೆ. ಹಾಗೆಯೇ ಪತಿ-ಪತ್ನಿ ನೇರವಾಗಿ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದ್ದಾರೆ.
2017ರಲ್ಲಿ ವಿವಾಹವಾದ ದಂಪತಿಗೆ 8 ವರ್ಷದ ಗಂಡು ಮಗುವಿದೆ. ಪತಿ ಸರ್ಕಾರಿ ಶಾಲಾ ಶಿಕ್ಷಕ ಮತ್ತು ಪತ್ನಿ ಉಪನ್ಯಾಸಕಿ. ವಿಚಾರಣೆಯ ಸಮಯದಲ್ಲಿ ನಡೆದ ವಾದ-ವಿವಾದದ ಪ್ರಕಾರ ಪತಿಗಿಂತ ಅಧಿಕ ಸಂಪಾದನೆಯನ್ನು ಪತ್ನಿ ಮಾಡುತ್ತಾರೆ. ಹಾಗೆಯೇ ವಿಚ್ಛೇದನಕ್ಕೆ ಯಾವುದೇ ಜೀವನಾಂಶವನ್ನು ಕೇಳಿಲ್ಲ.
ವಿವಾಹವಾದ ಒಂದೇ ವಾರದಲ್ಲಿ ಪತ್ನಿಯ ವರ್ತನೆ ಬದಲಾಗಿದೆ. ತಮ್ಮ ಅತ್ತೆ-ಮಾವನ ಬಗ್ಗೆ ಅಸಹ್ಯಕರವಾಗಿ ಮಾತಾಡುತ್ತಾರೆ. ಅಡುಗೆ ಮಾಡಿ ಕೊಡಲ್ಲ. ಮಗು ಜನಿಸಿದ ಬಳಿಕ ತೊಟ್ಟಿಲು ಸಮಾರಂಭಕ್ಕೆ ಅತ್ತೆ-ಮಾವನನ್ನು ಕರೆದಿಲ್ಲ ಎಂಬ ಆರೋಪಗಳನ್ನು ಪತಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಸ್ತೆಯಲ್ಲೇ ವರದಕ್ಷಿಣೆ ಪ್ರಕರಣ ವಜಾ ಮಾಡಿದ ನ್ಯಾಯಾಧೀಶರು
ಇನ್ನೊಂದೆಡೆ ಪತಿ ಮತ್ತು ಅವರ ಕುಟುಂಬದ ಒಪ್ಪಿಗೆ ಪಡೆದೇ ಬಾಣಂತನಕ್ಕಾಗಿ ತವರು ಮನೆಗೆ ಹೋಗಿದ್ದೆ. ಆದರೆ ಅವರೇ ತೊಟ್ಟಿಲು ಸಮಾರಂಭಕ್ಕೆ ಬಂದಿಲ್ಲ. ನನ್ನ ಪೋಷಕರು ಚಿನ್ನ, ಹಣ ನೀಡಬೇಕು ಎಂದು ಒತ್ತಡ ಹೇರಿದರು. ನನ್ನ ವೇತನದ ಪಾಲನ್ನು ಅವರಿಗೂ ನೀಡಬೇಕು ಎಂದು ಒತ್ತಾಯಿಸಿದರು ಎಂಬುದು ಪತ್ನಿಯ ಆರೋಪ.
ಈ ವಾದ-ವಿವಾದವನ್ನು ಆಲಿಸಿ ಕೌಟುಂಬಿಕ ನ್ಯಾಯಾಲಯವು ಪತಿಯ ಮನವಿಯನ್ನು ಅಂಗೀಕರಿಸಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿತು. ಆದರೆ ಈ ಅರ್ಜಿಯನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು ಹೈಕೋರ್ಟ್ ವಿಚ್ಛೇದನ ತೀರ್ಪನ್ನು ರದ್ದುಗೊಳಿಸಿತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಅರ್ಜಿದಾರರ ವಾದ ಆಲಿಸಿ “ಮನೆ ಕೆಲಸ ಮಾಡದಿರುವುದು ಕ್ರೌರ್ಯವಲ್ಲ. ಅಷ್ಟಕ್ಕೂ ಪತ್ನಿ ಕೆಲಸದಾಳಲ್ಲ” ಎಂದು ಹೇಳಿದೆ.





