ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಗೈರಾಗಿರುವುದನ್ನು ಸಮರ್ಥಿಸಿಕೊಳ್ಳಲು, ಬಿಜೆಪಿ ಒತ್ತಡಕ್ಕೆ ಮಣಿದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ನ ಮಹಿಳಾ ಸಂಸದರು ಸೋಮವಾರ ಸ್ಪೀಕರ್ಗೆ ಪತ್ರ ಬರೆದಿದ್ದಾರೆ.
ಲೋಕಸಭೆಯ ಸ್ಪೀಕರ್ ಅವರು ಸದನದ ನಿಷ್ಪಕ್ಷಪಾತ ರಕ್ಷಕರಾಗಿ ವರ್ತಿಸುವಂತೆ ಮಹಿಳಾ ಸಂಸದರು ಮನವಿ ಮಾಡಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಲು ಪ್ರಧಾನಿ ಸದನಕ್ಕೆ ಬಾರದಂತೆ ತಾವೇ ಸಲಹೆ ನೀಡಿದ್ದಾಗಿ ಸ್ಪೀಕರ್ ಬಿರ್ಲಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. “ಕೆಲವು ಕಾಂಗ್ರೆಸ್ ಸದಸ್ಯರು ಪ್ರಧಾನಿಯವರ ಆಸನದ ಬಳಿ ತೆರಳಿ ‘ಅನಿರೀಕ್ಷಿತ ವರ್ತನೆ’ ತೋರುವ ಬಗ್ಗೆ ತಮಗೆ ‘ಖಚಿತ ಮಾಹಿತಿ’ ಇತ್ತು, ಆ ಕಾರಣದಿಂದ ಪ್ರಧಾನಿಗೆ ಸದನಕ್ಕೆ ಬರದಂತೆ ಸೂಚಿದ್ದೆ,” ಎಂದು ಸ್ಪೀಕರ್ ಸಮರ್ಥನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರು ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
“ನಾವು ಪ್ರಧಾನಿ ಮೋದಿಯವರ ಜನವಿರೋಧಿ ಸರ್ಕಾರದ ವಿರುದ್ಧ ಸತತವಾಗಿ ಹೋರಾಡುತ್ತಿರುವುದರಿಂದ ಮತ್ತು ಉತ್ತರದಾಯಿತ್ವವನ್ನು ಬಯಸುತ್ತಿರುವುದರಿಂದ ನಮ್ಮನ್ನು ಗುರಿಯಾಗಿಸಲಾಗುತ್ತಿದೆ. ಸದನಕ್ಕೆ ಪ್ರಧಾನಿ ಗೈರಾಗಿದ್ದು ನಮ್ಮಿಂದಾದ ಬೆದರಿಕೆಯಿಂದಲ್ಲ, ಬದಲಿಗೆ ಅದು ಅವರ ಭಯದ ಸಂಕೇತವಾಗಿದೆ,” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿಮಣಿ, ಆರ್. ಸುಧಾ, ವರ್ಷಾ ಗಾಯಕ್ವಾಡ್ ಮತ್ತು ಜ್ಯೋತ್ಸ್ನಾ ಮಹಂತ್ ಸಹಿ ಹಾಕಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
”ಪ್ರಧಾನಿಗೆ ವಿರೋಧ ಪಕ್ಷವನ್ನು ಎದುರಿಸುವ ಧೈರ್ಯವಿರಲಿಲ್ಲ. ನಾವು ಪ್ರೀತಿ, ಶಾಂತಿ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವೀಯ ಘನತೆಯನ್ನು ಎತ್ತಿಹಿಡಿಯುವ ಕಾಂಗ್ರೆಸ್ ಪಕ್ಷದ ಸಂಸದರು. ನಾವು ಹಿಂಸೆ ಮತ್ತು ಬೆದರಿಕೆಯಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಧೈರ್ಯಶಾಲಿ ಮಹಿಳಾ ಜನಪ್ರತಿನಿಧಿಗಳಾಗಿದ್ದು, ಬೆದರಿಕೆಗಳಿಗೆ ಬಾಯ ಮುಚ್ಚುವವರಲ್ಲ. ಸ್ಪೀಕರ್ ಕಚೇರಿಯ ಘನತೆ ಮತ್ತು ಈ ಸದನದ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪಾರದರ್ಶಕತೆ ಏಕೈಕ ಮಾರ್ಗವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮಗೆ ಸ್ಪೀಕರ್ ಹುದ್ದೆಯ ಬಗ್ಗೆ ಅಪಾರ ಗೌರವವಿರುವುದಾಗಿ ಹೇಳಿರುವ ಮಹಿಳಾ ಸಂಸದರು, “ಆದಾಗ್ಯೂ, ನೀವು ಆಡಳಿತ ಪಕ್ಷದ ನಿರಂತರ ಒತ್ತಡದಲ್ಲಿದ್ದೀರಿ ಎಂಬುದು ಸ್ಪಷ್ಟವಾಗಿದೆ. ಲೋಕಸಭೆಯ ನಿಷ್ಪಕ್ಷಪಾತ ಪಾಲಕರಾಗಿ ವರ್ತಿಸುವಂತೆ ನಾವು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇವೆ. ಈ ಪ್ರಯತ್ನದಲ್ಲಿ ನಾವು ನಿಮ್ಮೊಂದಿಗೆ ಪೂರ್ಣ ಮನಸ್ಸಿನಿಂದ ನಿಲ್ಲುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ|ಮೋದಿ ರಾಜಿ ರಾಜಕಾರಣದಿಂದ ಭಾರತದ ಸ್ವಾಭಿಮಾನ- ಸಾರ್ವಭೌಮತೆಗೆ ಧಕ್ಕೆ
”ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸರಿಯಾದದ್ದರ ಪರವಾಗಿ ನಿಂತ ಮತ್ತು ರಾಷ್ಟ್ರದ ಹಿತಕ್ಕಾಗಿ ಸಾಂವಿಧಾನಿಕ ಔಚಿತ್ಯವನ್ನು ಎತ್ತಿಹಿಡಿದ ವ್ಯಕ್ತಿಯಾಗಿ ಇತಿಹಾಸ ನಿಮ್ಮನ್ನು ನೆನಪಿಸಿಕೊಳ್ಳಲಿ. ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸುವ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿಯುಂಟುಮಾಡುವವರ ಒತ್ತಡಕ್ಕೆ ಮಣಿದವರೆಂದು ಇತಿಹಾಸ ನಿಮ್ಮನ್ನು ಗುರುತಿಸುವುದು ಬೇಡ” ಎಂದು ಪತ್ರದಲ್ಲಿ ಹೇಳಿದ್ದಾರೆ.
ತೀವ್ರ ಆತಂಕ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಪ್ರಜ್ಞೆಯಿಂದ ಈ ಪತ್ರ ಬರೆಯುತ್ತಿರುವುದಾಗಿ ಸಂಸದರು ತಿಳಿಸಿದ್ದಾರೆ. “ಗೌರವಾನ್ವಿತ ಸ್ಪೀಕರ್ ಆಗಿ, ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ವಿರೋಧ ಪಕ್ಷದ ಮಹಿಳಾ ಸಂಸದರ ವಿರುದ್ಧ ಸುಳ್ಳು, ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಬೇಕಾಗಿ ಬಂದಿರುವುದು ಅತ್ಯಂತ ದುರದೃಷ್ಟಕರ ಸಂಗತಿ” ಎಂದು ಕಾಂಗ್ರೆಸ್ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.





