ಹಸುಗಳನ್ನು ಸಾಗಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹಿಂದುತ್ವ ಕೋಮುವಾದಿ ಪುಂಡರ ಗುಂಪು ದಾಳಿ ನಡೆಸಿದ್ದು, ಘರ್ಷಣೆಯಲ್ಲಿ ಯುವಕನೊಬ್ಬ ಹತ್ಯೆಗೀಡಾಗಿರುವ ಘಟನೆ ರಾಜಸ್ಥಾನದ ಭಿವಾಡಿಯಲ್ಲಿ ನಡೆದಿದೆ.
ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ದಾಳಿ ನಡೆಸಿದ ಕೋಮುವಾದಿ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಯುವಕನ ಸಾವಿಗೆ ನಿಖರವಾದ ಕಾರಣವೇನೆಂದು ತನಿಖೆಯ ನಂತರವಷ್ಟೇ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿವಾಡಿ ಡಿಎಸ್ಪಿ ಕೈಲಾಶ್ ಚೌಧರಿ ಅವರ ಪ್ರಕಾರ, “ಮುಂಜಾನೆ 5 ಗಂಟೆಯ ಸುಮಾರಿಗೆ ಜಾನುವಾರುಗಳನ್ನು ಹೊತ್ತ ಪಿಕಪ್ ಟ್ರಕ್ ಭಿವಾಡಿಯ ತಪುಕ್ಡಾದಿಂದ ತವಾಡೂ ಕಡೆಗೆ ಹೋಗುತ್ತಿದೆ. ಕೆಲವರು ಅದನ್ನು ಬೆನ್ನಟ್ಟಿದ್ದಾರೆ. ಸಾರೆ ಕಲಾ ಗ್ರಾಮದ ಬಳಿ ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಪರಸ್ಪರ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಹರಿಯಾಣದ ಉತಾವಡ್ ಗ್ರಾಮದ ನಿವಾಸಿ ಅಮೀರ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದರು. ಆತನನ್ನು ಭಿವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆವೇಳೆಗೆ ಆತ ಸಾವನ್ನಪ್ಪಿದ್ದರು” ಎಂದು ತಿಳಿಸಿದ್ದಾರೆ.
ಮೃತ ಅಮೀರ್ ಗೋವುಗಳ ಸಾಗಣೆಯಲ್ಲಿ ಭಾಗಿಯಾಗಿರಲಿಲ್ಲ. ಹಿಂಸಾಚಾರ ನಡೆದಾಗ ಆತ ಕೇವಲ ರಸ್ತೆಬದಿಯಲ್ಲಿ ನಿಂತಿದ್ದಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ.
ಅಮೀರ್ ಅವರ ಮಾವ ಯಾಹ್ಯಾ ಖಾನ್ ಮಾತನಾಡಿ, “ಅಮೀರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆತನಿಗೆ ಮದುವೆಯಾಗಿದ್ದು, ಪತ್ನಿ ಮತ್ತು ಎರಡು ವರ್ಷದ ಮಗಳಿದ್ದಾಳೆ. ಅಮೀರ್ ತನ್ನ ಸ್ನೇಹಿತನೊಂದಿಗೆ ವಾಹನವೊಂದನ್ನು ಪಡೆಯಲು ಸಾರೆ ಕಲಾ ಗ್ರಾಮಕ್ಕೆ ಬಂದಿದ್ದರು. ಅವರು ರಸ್ತೆಬದಿಯಲ್ಲಿ ಕಾಯುತ್ತಿದ್ದಾಗ ಜಾನುವಾರುಗಳನ್ನು ಹೊತ್ತ ಪಿಕಪ್ ಟ್ರಕ್ ಅಲ್ಲಿಂದ ಹಾದುಹೋಗಿದೆ. ಆದರೆ, ವಾಹನವನ್ನು ಬೆನ್ನಟ್ಟಿಬಂದ ಗುಂಪು ಅಮೀರ್ ಮತ್ತು ಆತನ ಸ್ನೇಹಿತನನ್ನು ಗೋಸಾಗಣೆದಾರರೆಂದು ತಪ್ಪಾಗಿ ಭಾವಿಸಿ, ದಾಳಿ ನಡೆಸಿದ್ದಾರೆ. ಆತನ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ” ಎಂದು ಆರೋಪಿಸಿದ್ದಾರೆ.
ದಾಳಿ ನಡೆಸಿದ 15 ರಿಂದ 20 ಜನರು ಮೂರು ವಾಹನಗಳಲ್ಲಿ ಬಂದು ಅಮೀರ್ನನ್ನು ಕೊಂದು, ಭಿವಾಡಿ ಕಡೆಗೆ ಪರಾರಿಯಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್-ರಷ್ಯಾ ಸಂಬಂಧವೇನು; ಪರಸ್ಪರ ಬೆಂಬಲ ಯಾಕೆ ಮುಖ್ಯ?
ಆದಾಗ್ಯೂ, ಪೋಲೀಸರ ವಾದ ಬೇರೆಯೇ ಇದೆ. “ಸಾರೆ ಕಲಾ ಗ್ರಾಮದ ಬಳಿ ಗೋಸಾಗಣೆದಾರರಿಗೆ ಸಹಾಯ ಮಾಡಲು ಮತ್ತೊಂದು ಪಿಕಪ್ ಟ್ರಕ್ನಲ್ಲಿ ಐದರಿಂದ ಆರು ಜನರು ಬಂದಿದ್ದರು. ಅಮೀರ್ ಕೂಡ ಅದೇ ಪಿಕಪ್ ವಾಹನದಲ್ಲಿದ್ದರು. ಆ ವಾಹನದಲ್ಲಿ ಕಲ್ಲುಗಳನ್ನು ತುಂಬಲಾಗಿತ್ತು. ಸಂಘರ್ಷದ ವೇಳೆ ನಡೆದ ಕಲ್ಲು ತೂರಾಟದಲ್ಲಿ ಅಮೀರ್ ಕೂಡ ಭಾಗಿಯಾಗಿದ್ದರು” ಎಂದು ಡಿಎಸ್ಪಿ ಕೈಲಾಶ್ ಚೌಧರಿ ಹೇಳಿದ್ದಾರೆ.
ಗುಂಡಿನ ದಾಳಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಾವು ಗುಂಡೇಟಿನಿಂದ ಸಂಭವಿಸಿದೆಯೇ ಅಥವಾ ಕಲ್ಲು ತೂರಾಟದ ಗಾಯಗಳಿಂದಾಗಿದೆಯೇ ಎಂಬುದು ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ” ಎಂದಿದ್ದಾರೆ.
ಘಟನೆಯ ನಂತರ ಮೃತನ ಸಂಬಂಧಿಕರು ಮತ್ತು ಗ್ರಾಮಸ್ಥರು ಚೌಪಂಕಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಜಸ್ಥಾನದಲ್ಲಿ ಕಳೆದ ದಶಕದಲ್ಲಿ ಗೋಸಾಗಣೆಯ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಹಿಂಸಾಚಾರದ ಘಟನೆಗಳು ನಡೆದಿವೆ. 2017ರಲ್ಲಿ ಅಲ್ವಾರ್ನಲ್ಲಿ ಪೆಹ್ಲೂ ಖಾನ್ ಹತ್ಯೆ ಮತ್ತು 2018ರಲ್ಲಿ ರಕ್ಬರ್ ಖಾನ್ ಮೇಲಿನ ಗುಂಪು ದಾಳಿ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದವು.




