ಅತ್ತ ಕೇಂದ್ರ ಇತ್ತ ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಗಳಿಂದ ಬೇಸತ್ತಿರುವ ಜನತೆಗೆ ಮತ್ತೊಂದು ಶುಲ್ಕದ ಬಿಸಿ ತಟ್ಟಲಿದೆ. ಇನ್ನುಮುಂದೆ ಬೋರ್ವೆಲ್ನಿಂದ ತೆಗೆದು ಬಳಸುವ ನೀರಿಗೂ ಶುಲ್ಕ ಕಟ್ಟಬೇಕಾಗುತ್ತದೆ. ಈ ಹೊಸ ನಿಯಮವನ್ನು ಉಲ್ಲಂಘಿಸಿದರೆ 2 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ.
ಈ ಹೊಸ ನೀತಿಯ ಪ್ರಕಾರ, ಬೋರ್ವೆಲ್ ನೀರು ಬಳಸುವವರಿಗೆ ದಿನದ ಬಳಕೆಯ ಆಧಾರದಲ್ಲಿ ಪ್ರಮಾಣಿತ ದರಗಳನ್ನು ವಿಧಿಸಲಾಗಿದೆ. 25 ಘನ ಮೀಟರ್ವರೆಗೆ ಯಾವುದೇ ಶುಲ್ಕವಿಲ್ಲ. 25-200 ಘನ ಮೀಟರ್ ನಲ್ಲಿ ಪ್ರತಿ ಘನ ಮೀಟರ್ಗೆ ₹1 ಹಾಗೂ 200 ಘನ ಮೀಟರ್ಗಿಂತ ಹೆಚ್ಚಾದರೆ, ಪ್ರತಿ ಘನ ಮೀಟರ್ಗೆ ₹2 ಪಾವತಿಸಬೇಕು.
ಹೊಸ ನಿಯಮವು ಜುಲೈ 2025ರಿಂದಲೇ ಕಡ್ಡಾಯವಾಗಿ ಜಾರಿಗೆ ಬಂದಿದೆ. ಬೃಹತ್ ವಾಣಿಜ್ಯ ಕಂಪೆನಿಗಳಿಂದ ಹಿಡಿದು ವೈಯಕ್ತಿಕ ಮನೆಗಳವರೆಗೂ, ಬೋರ್ವೆಲ್ ಮೂಲಕ ಅಂತರ್ಜಲ ತೆಗೆಯುವ ಅಥವಾ ಬೋರ್ವೆಲ್ ತೆರೆಯುವ/ಕೊರೆಯುವ ಮುನ್ನ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯುವುದು ಕಡ್ಡಾಯವಾಗಿದೆ. ಈ ನಿಯಮದ ಅಡಿಯಲ್ಲಿ NOC ಹೊಂದಿರುವ ಬೋರ್ವೆಲ್ ಯೋಜನೆಗಳಿಗೆ ನೀರಿನ ಬಳಕೆಯ ಮೇಲೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ.
ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಸಾಕಷ್ಟು ಚರ್ಚೆಗಳಾಗುತ್ತಿದ್ದರೂ ಬೋರ್ವೆಲ್ ಕೊರೆಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಬೋರ್ವೆಲ್ ನೀರಿನ ದುರ್ಬಳಕೆ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಂತರ್ಜಲ ಬಳಕೆಯ ನಿಯಂತ್ರಣ ಮತ್ತು ವಾಸ್ತವಿಕ ಮಾಹಿತಿಯ ಸಂಗ್ರಹಣೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಡಿಜಿಟಲ್ ನೀರಿನ ಹರಿವಿನ ಮೀಟರ್ ಮತ್ತು ಟೆಲಿಮೆಟ್ರಿ ವ್ಯವಸ್ಥೆಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ವೈಯಕ್ತಿಕ ಮನೆಗಳು ಕೂಡಾ ಬೋರ್ವೆಲ್ ಬಳಕೆಗಾಗಿ ಮೀಟರ್ ಹಾಕಬೇಕಾಗುತ್ತದೆ. ಇನ್ನು ಸರ್ಕಾರದ ಈ ಕ್ರಮಕ್ಕೆ ತಜ್ಞರೂ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೆಚ್ಚು ಪ್ರಮಾಣದ ನೀರನ್ನು ಬಳಸುವವರು (200 KLD–5000 KLD) ನಿಯಮ ಉಲ್ಲಂಘಿಸಿದರೆ ₹5,000 ರಿಂದ ₹2 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಇದು ನೀರಿನ ಕುರಿತ ನಿರ್ಲಕ್ಷ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ದಂಡದ ಭೀತಿಯಿಂದಾದರೂ ಕಡ್ಡಾಯವಾಗಿ ಜವಾಬ್ದಾರಿಯುತವಾಗಿ ನೀರಿನ ಮಿತ ಬಳಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಹೊಸ ನಿಯಮ ಶ್ಲಾಘನೀಯ. ಇದರೊಂದಿಗೆ ಕೈಗಾರಿಕಾ ಆಧಾರಿತ ಆರ್ಥಿಕತೆಯ ಚಕ್ರ ವ್ಯತ್ಯಯವಾಗದೆ ಸಾಗುವಂತೆ ನೋಡಿಕೊಳ್ಳಲೂ ಉದ್ದೇಶಿಸಲಾಗಿದೆ.
ಕೊಳವೆ ಬಾವಿ/ ಬೋರ್ವೆಲ್ ನೀರಿನ ಬಳಕೆ ಶುಲ್ಕದಿಂದ ಹಲವರಿಗೆ ವಿನಾಯಿತಿ ಕೂಡ ನೀಡಲಾಗಿದೆ. ವೈಯಕ್ತಿಕ ಗೃಹೋಪಯೋಗಿ ಬಳಕೆಗೆ (ಕಡಿಮೆ ಪ್ರಮಾಣದಲ್ಲಿ), ಸೇನೆ ಹಾಗೂ ಸಶಸ್ತ್ರ ಪಡೆಗಳು ಹಾಗೂ ಕೃಷಿ ಚಟುವಟಿಕೆ, ದಿನಕ್ಕೆ 10 ಕ್ಯೂಬಿಕ್ ಗಿಂತ ಕಡಿಮೆ ನೀರು ಬಳಕೆ ಮಾಡುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ, 20 KLD ವರೆಗೆ ಕುಡಿಯುವ ನೀರು ಬಳಕೆಗೆ ವಿನಾಯಿತಿ ಇದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೂಡ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಸಹಮತ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಬೋರ್ವೆಲ್ ನೀರಿನ ಮೇಲಿನ ಹೊಸ ಶುಲ್ಕ ನೀತಿಯು, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಗಂಭೀರ ನಿರ್ಧಾರವಾಗಿದೆ. ನೀರಿನ ಸಂಪತ್ತನ್ನು ಜವಾಬ್ದಾರಿಯುತವಾಗಿ ಉಪಯೋಗಿಸುವ ಅಗತ್ಯತೆ ಇಂದಿನ ಕಾಲದ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ನೀರಿನ ಪ್ರಮಾಣಿತ ಬಳಕೆ, ಟೆಲಿಮೆಟ್ರಿ ತಂತ್ರಜ್ಞಾನ ಅಳವಡಿಕೆ ಮತ್ತು NOC ವ್ಯವಸ್ಥೆಗಳನ್ನು ಕಡ್ಡಾಯಗೊಳಿಸುವ ಮೂಲಕ ನೀರಿನ ಪ್ರಾಮುಖ್ಯತೆ, ಭವಿಷ್ಯಕ್ಕೆ ಬೇಕಾದ ನೀರಿನ ಸಂರಕ್ಷಣೆಗಳ ಕುರಿತು ಪ್ರಾಯೋಗಿಕವಾಗಿ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋಶಾ ಕಂಪನಿಯ ಮತ್ತೊಂದು ನಿಗೂಢ ನಾಟಕ!
ಇನ್ನು ಮುಂದೆಯೂ ಇದೇ ರೀತಿ ನೀರಿನ ಬಳಕೆಯು ಸಡಿಲತೆ ಇಲ್ಲದ ನಿಬಂಧನೆಗಳಿಗೆ ಒಳಪಟ್ಟರೆ ಮಾತ್ರ, ಭವಿಷ್ಯದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗದ ಭರವಸೆ ಇಟ್ಟುಕೊಳ್ಳಬಹುದು. ಬಹುಪಾಲು ತಜ್ಞರ ಮತ್ತು ಸಾರ್ವಜನಿಕರ ಮೆಚ್ಚುಗೆ ಪಡೆಯುತ್ತಿರುವ ಸರ್ಕಾರದ ಈ ನೀತಿಯು, ನೀರನ್ನು ಸಂಪತ್ತಾಗಿ ನೋಡುವ ದೃಷ್ಟಿಕೋನಕ್ಕೆ ಉತ್ತೇಜನ ನೀಡುತ್ತದೆ. ಇದನ್ನು ಮುಂದಿನ ಪೀಳಿಗೆಗಳ ಹಿತದೃಷ್ಟಿಯಿಂದಲೂ ಮೆಚ್ಚಬೇಕಾದ, ನಾಗರಿಕರಾಗಿ ಅನುಸರಿಸಬೇಕಾದ, ಹೊಣೆಯುತ ಹೆಜ್ಜೆಯಾಗಿದೆ.





