ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ ಓದಿದರು. ಹೇಗೆ ಶಾಲೆಯ ಮೆಟ್ಟೀಲೇರಿದರು ಎಂಬ ಇತಿಹಾಸವನ್ನು ಕೆಲವರು ಮರೆತಿರಬಹುದು. ಆದರೆ ಚರಿತ್ರೆಯ ಸಾಕ್ಷಿ ನುಡಿಯುವ ಪುಟಗಳು ಮತ್ತು ಪಟಗಳು ನಮ್ಮ ನಿಮ್ಮ ಮುಂದಿವೆ. ಯಾರೂ ನಿರಾಕರಿಸಲೂ ಸಾಧ್ಯವಿಲ್ಲದ ಸಾಕ್ಷ್ಯಗಳು ಇವು.
ಇವತ್ತಿಗೆ 188 ವರ್ಷಗಳ ಹಿಂದೆ, ಅಂದರೆ 1836 ರಲ್ಲಿ ಮಂಗಳೂರಿನಲ್ಲಿ ಮೊತ್ತ ಮೊದಲ ಶಾಲೆ ಆರಂಭವಾಗುತ್ತದೆ. ಆ ಶಾಲೆಯನ್ನು ಜರ್ಮನ್ನಿಂದ ಬಂದ ಬಾಸೆಲ್ ಮಿಷನರಿ ಪಾದ್ರಿಗಳು ಮಂಗಳೂರಿನ ನಿರೇಶ್ವಾಲ್ಯದಲ್ಲಿ (ಮಂಗಳೂರು ದಕ್ಕೆ ಬಂದರು ಪ್ರದೇಶ) ಆರಂಭಿಸುತ್ತಾರೆ. ಬಾಸೆಲ್ ಮಿಶನರಿ ಪಾದ್ರಿ ಸ್ಯಾಮುವೆಲ್ ಹೆಬಿಕ್ ಅವರು ತುಳುನಾಡಿನ ಈ ಪ್ರಥಮ ಶಾಲೆಯ ಸ್ಥಾಪಕರು.
ಇದು ಸರ್ವರಿಗೂ ಸಮಾನ ಶಿಕ್ಷಣ ನೀಡುವ ಶಾಲೆಯಾಗಿತ್ತು. ಆ ದಿನಗಳಲ್ಲಿ ಶಾಲೆಗೆ ಗಂಡು ಮಕ್ಕಳು ಮಾತ್ರ ಬರುತ್ತಿದ್ದರು. ಜನರ ಬಳಿಗೆ ತೆರಳಿದ ಪಾದ್ರಿಗಳು ಹೆಣ್ಣು ಮಕ್ಕಳನ್ನು ಕೂಡ ಓದಿಸುವಂತೆ ಮನವೊಲಿಸುತ್ತಾರೆ. ಮೊದ ಮೊದಲು ಯಾರೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿರುವುದಿಲ್ಲ. ಆ ಕಾಲಕ್ಕೆ ಪಾದ್ರಿಗಳು ಮನೆ ಮನೆಗೆ ಹೋಗಿ ಹಿರಿಯರ ಮನವೊಲಿಸಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುತ್ತಾರೆ. ಅಷ್ಟೊತ್ತಿಗೆ ಶಾಲೆ ಆರಂಭವಾಗಿ 6 ವರ್ಷವಾಗಿತ್ತು. ಹುಡುಗರು ಮಾತ್ರ ಓದುತ್ತಿದ್ದ ಶಾಲೆಯಲ್ಲಿ 1842ರಲ್ಲಿ ಹೆಣ್ಣು ಮಕ್ಕಳಿಗೆ ಕೂಡ ಪ್ರವೇಶ ಆರಂಭಗೊಂಡಿತು. ಈ ರೀತಿಯಲ್ಲಿ ಸಹ ಶಿಕ್ಷಣ (ಕೋ ಎಜ್ಯುಕೇಶನ್) ಆರಂಭಗೊಂಡದ್ದು ಇವತ್ತಿಗೆ 182 ವರ್ಷಗಳ ಹಿಂದೆ. ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಮುಂದೆ ಈ ಶಾಲೆಗೆ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಯಿತು. ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು(ಜಿ.ಎಸ್.ಬಿ) ಬಂಟರು, ಬಿಲ್ಲವರು, ಮೊಗವೀರರು, ದಲಿತರು ಒಂದೇ ತರಗತಿಯಲ್ಲಿ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಓದುತ್ತಿದ್ದರು.
ಆದರೆ… ಶೂದ್ರರು, ದಲಿತರು ಒಟ್ಟಾಗಿ ಕುಳಿತು ಓದುವಲ್ಲಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಿಕೊಡುವುದಿಲ್ಲ ಎಂಬ ತಕರಾರೊಂದನ್ನು ಆವತ್ತಿನ ಸಂದರ್ಭದಲ್ಲಿ ಬ್ರಾಹ್ಮಣರು ಶಾಲೆಯ ಪಾದ್ರಿಗಳ ಮುಂದಿಟ್ಟರು. (ಅಂದರೆ ಅವರೇನೂ ಶಾಲೆಯ ಗೇಟಿನ ಹೊರಗಡೆ ನಿಂತು ಬೀದಿ ರಂಪ ಮಾಡಿದ್ದಲ್ಲ).
ಈ ಬೇಡಿಕೆಗೆ ಪಾದ್ರಿಯವರು ಮರು ಮಾತನಾಡಲಿಲ್ಲ. ನಿಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೆ ಶಾಲೆ ತೆರೆಯುತ್ತೇವೆ ಎಂದು ಭರವಸೆ ನೀಡಿದರು. ಬ್ರಾಹ್ಮಣರು ಒಪ್ಪಿಕೊಂಡರು. ಇದರ ಫಲವಾಗಿ 1855ರಲ್ಲಿ, ಅಂದರೆ 169 ವರ್ಷಗಳ ಹಿಂದೆ ಕರಾವಳಿಯ ಮೊದಲ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆ ಆರಂಭಗೊಂಡಿತು. ಹೊಸದಾಗಿ ಆರಂಭಗೊಂಡ ಯು.ಬಿ.ಎಂ.ಸಿ ಬ್ರಾಹ್ಮಣ ಹೆಣ್ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಮತಿ ಲೆನ್ಹರ್ ಮತ್ತು ಶ್ರೀಮತಿ ಗ್ರೆನರ್ ಮೊದಲ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಪಾದ್ರಿ ಹೆಬಿಕ್ ಅವರ ಜೊತೆಯಲ್ಲಿ ಬಂದಿದ್ದ ಮಿಷನರಿಗಳ ಧರ್ಮಪತ್ನಿಯರು. ಮುಂದೆ ಯು.ಬಿ.ಎಂ.ಸಿ ಬ್ರಾಹ್ಮೀಣ್ ಹೆಣ್ಮಕ್ಕಳ ಶಾಲೆಯಲ್ಲಿ ಶ್ರೀಮತಿಯರಾದ ಹೋಕ್, ಬ್ಹೂರರ್, ಡೀಸ್, ಫ್ಲೈಡರರ್ ಮೊದಲಾದ ಶಿಕ್ಷಕಿಯರು ಸೇವೆ ಸಲ್ಲಿಸುತ್ತಾರೆ.

ಶಾಲೆ ಚೆನ್ನಾಗಿ ಮುಂದೆ ಸಾಗುತ್ತಿತ್ತು. ಈ ಬ್ರಾಹ್ಮಣರ ಹೆಣ್ಣು ಮಕ್ಕಳ ಶಾಲೆಗೆ ಅಡ್ಮಿಶನ್ ಜಾಸ್ತಿಯಾಗಲಾರಂಭಿಸಿತು. ನಂತರದ ದಿನದಲ್ಲಿ ಈ ಶಾಲೆಯನ್ನು ಹಂಪನಕಟ್ಟೆಯ ಈಗಿನ ಗಣಪತಿ ಶಾಲೆಯ ಎದುರಿನ ರಸ್ತೆಗೆ ಸ್ಥಳಾಂತರಿಸಲಾಗುತ್ತದೆ. ಅಷ್ಟಾಗುವಾಗ ಮತ್ತೆ ಪಾದ್ರಿಗಳಲ್ಲಿ ಬ್ರಾಹ್ಮಣರು ಹೊಸ ಬೇಡಿಕೆ ಇರಿಸಿದರು. ನಮ್ಮ ಬ್ರಾಹ್ಮಣರ ಹೆಣ್ಣು ಮಕ್ಕಳಿಗಾಗಿ ಮೂಡಬಿದಿರೆ ಮತ್ತು ಉಡುಪಿಯಲ್ಲಿ ಶಾಲೆಯನ್ನು ಆರಂಭಿಸಬಹುದೇ ಎಂದು ಕೇಳಿಕೊಂಡರು. (ಆವಾಗಲೂ ಅವರು ಶಾಲೆಯ ಗೇಟಿನ ಎದುರು ನಿಂತು ಹೊಸ ಶಾಲೆಗಾಗಿ ತಕರಾರು ಮಾಡಿರಲಿಲ್ಲ…) ಮೂಡುಬಿದಿರೆ, ಉಡುಪಿಯಲ್ಲಿ ಅದಾಗಲೇ ಬಾಸೆಲ್ ಮಿಶನ್ ನವರು ಜನರಲ್ ಶಾಲೆಗಳನ್ನು ಆರಂಭಿಸಿ, ಶಾಲೆ ಚೆನ್ನಾಗಿ ನಡೆಯುತ್ತಿದ್ದರೂ ಕೂಡ ಬ್ರಾಹ್ಮಣರ ಹೆಣ್ಣು ಮಕ್ಕಳು ಓದಲಿ ಎಂಬ ಉದಾತ್ತ ಕಾರಣಕ್ಕಾಗಿ ಮೂಡಬಿದ್ರೆ ಮತ್ತು ಉಡುಪಿಯಲ್ಲಿ ಹೊಸದಾಗಿ ಬ್ರಾಹ್ಮಣರ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ಆರಂಭಿಸುತ್ತಾರೆ. ಯು.ಬಿ.ಎಂ.ಸಿ.ಬ್ರಾಹ್ಮಿಣ್ ಹೆಣ್ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರಲ್ಲಿ ಈ ಶಾಲೆ ನೂರಾರು ಬ್ರಾಹ್ಮಣ ಹೆಣ್ಣುಮಕ್ಕಳ ಭವಿಷ್ಯವನ್ನು ರೂಪಿಸಿತ್ತು. ಈ ಹಳೆಯ ಶಾಲೆಗಳೆಲ್ಲ ಇದೀಗ ಇಪ್ಪತ್ತೈದು ಮೂವತ್ತು ವರ್ಷಗಳ ಈಚೆಗಷ್ಟೇ ಮುಚ್ಚಲ್ಪಟ್ಟಿತು.
ಹೌದು… ಹಣ, ಅಧಿಕಾರದ ಅಮಲು ತಲೆಗೆ ಅಡರಿದಾಗ ತಮ್ಮದೇ ಅಜ್ಜಿ, ಮುತ್ತಜ್ಜಿಯಂದಿರು ಹೇಗೆ ಓದಿದರು, ಹೇಗೆ ಶಾಲೆಯ ಮೆಟ್ಟೀಲೇರಿದರು ಎಂಬ ಇತಿಹಾಸವನ್ನು ಕೆಲವರು ಮರೆತಿರಬಹುದು. ಆದರೆ ಚರಿತ್ರೆಯ ಸಾಕ್ಷಿ ನುಡಿಯುವ ಪುಟಗಳು ಮತ್ತು ಪಟಗಳು ನಮ್ಮ ನಿಮ್ಮ ಮುಂದಿವೆ. ಯಾರೂ ನಿರಾಕರಿಸಲೂ ಸಾಧ್ಯವಿಲ್ಲದ ಸಾಕ್ಷ್ಯಗಳು ಇವೆ.
“ಓದಿನ ಮತ್ತು ಅನ್ನದ ಋಣ ಮರೆತವರು ನೈಜ ಹಿಂದೂ ಆಗಿರಲಾರರೂ” ಎಂಬ ಸ್ವಾಮಿ ವಿವೇಕಾನಂದರ ಮಾತು ಶಾಲೆಯ ಗೇಟಿನ ಮುಂದೆ ಗದ್ದಲಕ್ಕೆ ನಿಂತವರಿಗೆ ಮರೆತು ಹೋಯಿತೇ?





