“ನೊಂದ ಜೀವಂ ತಣ್ಣಗಾಯ್ತು…”: ‘ಹಾಡುಪಾಡು’ ರಾಮು ಕುರಿತು ಎಚ್‌ಎಸ್‌ಆರ್ ಬರೆಹ

Date:

ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರರಾಗಿ, ಜನಪರವಾದ ಪತ್ರಕರ್ತರಾಗಿ, ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ ಬದುಕಿದ ತಮ್ಮ ಗೆಳೆಯ ‘ಹಾಡುಪಾಡು’ ರಾಮು ಅವರ ಬಗ್ಗೆ ಲೇಖಕ ಎಚ್ ಎಸ್‌ ರಾಘವೇಂದ್ರರಾವ್ ಬರೆಹ..

ಈ ರಾಮು ಬಗ್ಗೆ ಏನು ಬರೆಯುವುದು? ಹೀಗೆ ಬರೆಯುತ್ತಿರುವೆನೆಂದು ಗೊತ್ತಾದರೆ, “ದಮ್ಮಯ್ಯ ಅಂತೀನಿ. ಬೇಡ ಸಾರ್” ಎಂದು ಕಾಲು ಹಿಡಿಯುವವರು ಅವರು. ಈಗ ಅವರು ಇಲ್ಲ, ನನ್ನಂತಹವರು ಬರೆಯಬಹುದು. ಅವರ ಕ್ಷಮೆ ಕೇಳಿ ಈ ಬರೆಹ.

ಸಕಲ ಜೀವಾತ್ಮರನ್ನೂ ಎದೆಯೊಳಗಿಟ್ಟುಕೊಂಡು ಪೊರೆಯುತ್ತಿದ್ದ ಈ ಗೆಳೆಯನ ಕವಿತೆ ಮತ್ತು ಜೀವನ ಎರಡರ ಮೂಲಸೆಲೆಯೂ ಒಂದೇ. ಆದು ಎಂದಿಗೂ ಬತ್ತದ ಪ್ರೀತಿಯ ಒರತೆ. ಅವರ ಜೀವನದ ಹಲವು ಹಂತಗಳನ್ನು ಒಟ್ಟಂದದಲ್ಲಿ ನೋಡುವ, ಇಂಥ ಬರೆಹದ ಪುಟ್ಟ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ನನ್ನದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇವರು ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರನಾಗಿ, ಜನಪರವಾದ, ಜನರನ್ನು ತಲುಪಿದ ಪತ್ರಕರ್ತನಾಗಿ, (ಮೈಸೂರಿನ ‘ಆಂದೋಲನ’ ಪತ್ರಿಕೆಯ ‘ಹಾಡು-ಪಾಡು’ ಪುರವಣಿಯಲ್ಲಿ) ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ, ಎಳೆಯ ಕವಿಗಳ ಕಿವಿಯಾಗಿ, ನೋವು ತುಂಬಿದ ಬಾಣ-ಹಾಸಿಗೆಯಲ್ಲಿ ಮಲಗಿದ್ದರೂ “ಶುಭ ನುಡಿವ” ಶಕುನದ ಹಕ್ಕಿಯಾಗಿ ‘ತುಂತುಂಬಿ’ ಬದುಕಿದರು. ‘ಅಗ್ನಿಸೂಕ್ತ’, ‘ರಾಮು ಕವಿತೆಗಳು’ ಮತ್ತು ‘ವಿಷ್ಣುಕ್ರಾಂತಿ’ ಇವು ಇವರ ಅನುಮತಿಯಿಲ್ಲದೆ ಅಥವಾ ಇವರಿಂದ ಬೈಸಿಕೊಂಡು ಗೆಳೆಯರು ಹೊರತಂದ ಸಂಕಲನಗಳು. ‘ಅವು ಅಗ್ನಿಗೇ ಸೂಕ್ತ ಸಾರ್’ ಎಂದು ಅವರೇ ಜೋಕ್ ಮಾಡುತ್ತಿದ್ದರು. ಅವರು ಇಷ್ಟು ಕಡಿಮೆ ಬರೆದರೂ ಕನ್ನಡದ ಬಹಳ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ನಾನು ಪ್ರಾಣವನ್ನೇ ಪಣವಾಗಿಟ್ಟು ಹೇಳಬಲ್ಲೆ. ಕವಿತೆಗೆ ಬೇಕಾದ ಸಾಮಗ್ರಿಗಳು ಅವರಲ್ಲಿ ಇಡಿಕಿರಿದಿದ್ದ ಬಗೆ ಒಂದು ವಿಸ್ಮಯ. ‘ವಿಷ್ಣುಕ್ರಾಂತಿ’, ‘ಬೀಬಿ ನಾಚ್ಚಿಯಾರ್’, ‘ಅಮ್ಮು-ವಂಕಿ’ಳಂತಹ ನೀಳ್ಗವನಗಳು, ‘ಮಳೆ’, ‘ಅವನು-ಅವಳು’, ‘ಸುಗ್ಗಿ’, ‘ಅವಳು’ ಮುಂತಾದ ನೀಳ್ಗವನಗಳು ಮತ್ತು ಹತ್ತು ಹಲವು ಭಾವನಿಬಿಡವಾದ ಸಂಕೀರ್ಣ ಕವಿತೆಗಳು ಈ ಮಾತಿಗೆ ಸಾಕ್ಷಿ. ಇವುಗಳಿಂದ ಬಿಡಿ ಸಾಲುಗಳನ್ನು ತೆಗೆದು ಕೊಡುವುದು ಅಂತಹ ಕವಿತೆಗೆ ಮಾಢುವ ಅವಮಾನ. ನಾನು ಒಂದೋ ಎರಡೋ ಕವಿತೆಗಳನ್ನು ಇಡಿಯಾಗಿ ಕೊಡುತ್ತೇನೆ. ದಯವಿಟ್ಟು ಅವರ ಕವಿತೆಗಳನ್ನು ಓದಿ.

ಈ ಸುದ್ದಿ ಓದಿದ್ದೀರಾ: ಮತ್ತೆ ಬಿತ್ತದಿರಿ ಜಾತಿಯ ವಿಷಬೀಜ; ಜಾತ್ಯತೀತತೆಯ ಹೊಲದಲ್ಲಿ ಈಗಷ್ಟೇ ಸಮಾನತೆಯ ಪೈರು ಫಲ ಬಿಡುತ್ತಿದೆ…

ಸೃಜನಶೀಲತೆಯಂತೆಯೇ ಇವರ ವಿಮರ್ಶನ ಶಕ್ತಿಯೂ ಹರಿತವಾದುದು. ಬರವಣಿಗೆಯ ಹೃದಯವನ್ನು ಗುರುತಿಸುವ, ಅದರ ಕೊರತೆಗಳನ್ನೂ ಗ್ರಹಿಸುವ ಶಕ್ತಿ ಅವರಿಗ ಇತ್ತು. ಅವರು ‘ಐಕಾನು’ಗಳಿಗೆ ಮರುಳಾಗದೆ ದಿಟವನ್ನು ಅರಸುತ್ತಿದ್ದರು. ‘ಕುಮಾರವ್ಯಾಸ ಭಾರತ’ ಮತ್ತು ‘ಆದಿಪುರಾಣ’ಗಳನ್ನು ಕುರಿತು ಬರೆದ ಲೇಖನಗಳು ಮತ್ತು ತೋಂಡಿಯಲ್ಲಿ ಹಂಚಿಕೊಂಡ ಅನಿಸಿಕೆಗಳು ಈ ಮಾತಿಗೆ ಸಾಕ್ಷಿ. ಹಾಗೆ ನೋಡಿದರೆ ಅವರು ಕಿ.ರಂ. ನಾಗರಾಜ ಅವರ ಫಿರ್ಕಾಗೆ ಸೇರಿದವರು. ಆದರೆ ಅವರಂತೆ ನಾಡು ತಿರುಗಿ ಭಾಷಣಗಳನ್ನೂ ಮಾಡಲಿಲ್ಲ.

ತಮ್ಮ ಆಸುಪಾಸಿನಲ್ಲಿ ಬಂದವರನ್ನು ಅವರು ಬೆಳೆಸಿದ ಬಗೆ ಅನುಪಮವಾದುದು. ಕೇವಲ ಸಾಹಿತ್ಯವಲ್ಲ, ಅದು ಲೋಕಶಿಕ್ಷಣ. ಈ ಮಾತಿಗೆ ಮೈಸೂರಿನ ಕುಕ್ಕರಹಳ್ಳಿಯ, ಅಷ್ಟೇ ಏಕೆ, ಇಡೀ ಕರ್ನಾಟಕದ ಹತ್ತು ಹಲವು ಗಂಡು ಹೆಣ್ಣು ಜೀವಗಳು ಸಾಕ್ಷಿ.

ದೇಹದೇಗುಲದ ಬಗ್ಗೆ ಒಂದಿನಿತು ಲಕ್ಷ್ಯ ಕೊಟ್ಟಿದ್ದರೆ, ಸ್ವಾವಲಂಬನೆ-ಪರಾವಲಂಬನೆಗಳ ದ್ವಂದ್ವದ ಒಳಗುದಿ ನರಳಿಸದಿದ್ದರೆ ಈ ಬಾಳು ಇನ್ನಷ್ಟು ಮುಂದುವರೆಯುತ್ತಿತ್ತೇನೋ. ನಮ್ಮೆಲ್ಲರಿಗಾಗಿ, ಇವರನ್ನು ಇಷ್ಟು ಕಾಲ ಕಾಪಾಡಿಕೊಂಡ ರಾಮು ಅವರ ತಾಯಿ ಸುಶೀಲಮ್ಮನವರು, ರಾಜಿ, ಕುಮುದ, ವೇಣು, ಶೈಲಜ, ತುಕಾರಾಮ್, ರಾಘವೇಂದ್ರ, ಸಚ್ಚಿ, ಸ್ನೇಹ, ಓಂಕಾರ್, ಓ.ಎಲ್ ಎನ್, ದೂರವಿದ್ದರೂ ಅವರಿಗೆ ತುಂಬ ಹತ್ತಿರವಿದ್ದ ಆತ್ಮೀಯ ಜೀವಗಳು ಎಲ್ಲರಿಗೂ ಕೈಯೆತ್ತಿ ಮುಗಿಯುತ್ತೇನೆ.

‘ರಾಮು ಯೂನಿವರ್ಸಿಟಿ’ ಮುಗಿಯದಿರಲಿ. ಅದು ನಮ್ಮಲ್ಲಿ ನಿಮ್ಮಲ್ಲಿ ಉಳಿಯಲಿ, ಬೆಳೆಯಲಿ.

ರಾಮು

ರಾಮು ಅವರ ಒಂದು ಕವನ

ಮಳೆ
ಬಂತು ಮಳೆ ಆಹ
ಮುಳ್ಳುಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ.
ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು –
ನನ್ನ ಹುಡುಗಿಯ ಕೆನ್ನೆಗುಳಿ ಮೇಲು, ಈ ಹಾಡ ಮೇಲು.
ಆ ದಿಕ್ಕು ಈ ಗಾಳಿ ಆ ಬಾನು ಎಲ್ಲದರೊಳಗೆ ತಲ್ಲೀನ.

ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ
ಲೋಕ.

ನಾದ ಅಲ್ಲ ಇದು ಗುಡುಗು ಆದರೂ ಹಾಡೆ.
ಆ ಮರಳ ತೊಡೆಯೇರಿ ಇಳಿದಾಡೊ ತೊರೆ.

ಆ ತೊರೆಯ ಕಂಡು ಜಾರುವ ಮರಳು
ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ –
ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ –
ನನ್ನ ಹಸುವಿಗೆ ಮೇವು ಇಕ್ಕಿ ನಾನಿಗೆ ಮುತ್ತು
ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ.

ಮುಳ್ಳು ಮುಳ್ಳಿಗೆ ಹೂವು ಎಲ್ಲೆಲ್ಲು ಅವತಾರ
ಈ ಕಾಫಿ ಬಟ್ಟಲೊಳಗೆ, ಈ ರೊಟ್ಟಿ ತುಂಡೊಳಗೆ
ಅವನ ಅಂಬಲಿಯೊಳಗೆ,
ಈ ಚಿಟುಕೆ ನಶ್ಯದೊಳಗು

ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು
ತೊಯ್ದು ಪಟ ಪಟ ನಿಂತ ಈ ಮರದ ವಾಸನೆಯಂಥ ವಾಸನೆಯ
ಜೀವಂತ ದೇವರು ಬಂತು, ಇದೊ ಹಿಡಕೊ ಮುಟ್ಟು.
ಯಾವುದೋ ನಿಸ್ಸೀಮ ದೀಪದ ಕುಡಿಯ ನೆಟ್ಟ ಹಾಗೆ
ನೆನ್ನೆ ಬೋಳುಬೋಳಾಗಿದ್ದ
ಮರದಿಂದ ಇವತ್ತು ಥರಾವರಿ ಚಿಗುರು ಕಣ್ಣು

ಈ ಮಳೆದನಿಯಲ್ಲಿ ಹೊಳೆದನಿ ಮಲಗಿ, ಹೊಳೆದಡದ ಬಳೆದನಿ ಮಲಗಿ
ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ
ಮಳೆಬೆರಳಲ್ಲಿ ರೋಮಾಂಚತಂತಿಯ ಮೀಟಿ ದೇವಜಾತಿ

ಎಂಥ ಲಯವಿನ್ಯಾಸ ಅಮೃತ ಗಾನ

ನಾಳೆ ತರಗಾಗೊ ನಿನ್ನೆಯ ಚಿಗುರೆ,
ತರಗಾಗಿ
ಮತ್ತೆ ಚಿಗುರಾಗಿ ಬಿದ್ದೆದ್ದು
ಜನ್ಮಗಳ ಹರಿಸುತಿಹ ಮಳೆಯೆಂಬ ಹೊಳೆಯೇ

ಈ ಚಿಗುರ ಮುಟ್ಟುತಲೆ, ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ!
ಹಾಗಾಗದಿರಲಿ
ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು
ನನ್ನ ಅಂಗೈಯೊಳಗೆ ಕುಣಿದಾಡಲಿ
ಕುಣಿಕುಣಿದು ಉದಿರಾಡಲಿ.

ಇದೊ
ಇನ್ನೊಂದು ಹನಿ ಬಿತ್ತು
ಈ ಬೀಜ ಕಣ್ತೆರೆದು
ಚಿಗುರಾಡಲಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...