ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ, ಬುಲ್ಡೋಜರ್ ಬಾಬಾ ಯೋಜನೆ ಕರ್ನಾಟಕದಲ್ಲಿ ಆತ್ಮಹತ್ಯೆಗಳ ಹೊಸ ಸರಣಿ ಆರಂಭಿಸುವ ರೂಪುರೇಷೆಯನ್ನು ತಮ್ಮ ಅಧಿಕಾರಿಗಳು ಸಿದ್ಧಪಡಿಸಿದ ಪರಿ ನೋಡಿ...
ಉತ್ತರ ಪ್ರದೇಶ ಈ ದೇಶದ ಅತ್ಯಂತ ಹಿಂದುಳಿದ ಮತ್ತು ಕಾನೂನುರಹಿತ ಪ್ರದೇಶ. ಎಲ್ಲೆಂದರಲ್ಲಿ ಕೊಲೆ ಸುಲಿಗೆ ರೇಪ್ ಇತ್ಯಾದಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅಲ್ಲದೆ, ಕಿಡ್ನ್ಯಾಪ್ ಮಾಡಿ ಬ್ಲ್ಯಾಕ್ಮೇಲ್ ಮಾಡಿ ದುಡ್ಡು ಮಾಡುವುದೇ ಒಂದು ಉದ್ಯಮವಾಗಿದೆ. ಈ ಉದ್ಯಮಕ್ಕೆ ರಾಜಕೀಯ ಆಶ್ರಯ, ಬೆಂಬಲ ಮತ್ತು ಪಾಲುದಾರಿಕೆ ಹೇರಳ. ಯಾರದೇ ಆಸ್ತಿ ಲಪಟಾಯಿಸಿ ಯಾವುದೇ ಬಿಲ್ಡಿಂಗ್ಅನ್ನು ಹೆಂಗೆ ಬೇಕೋ ಹಂಗೆ ಕಟ್ಟುವುದು ಈ ಉತ್ತರ ಪ್ರದೇಶದಲ್ಲಿ ಸರ್ವೇಸಾಮಾನ್ಯ. ನಂತರ ಇವರ ರಾಜಕಾರಣ ವಿರೋಧ ಮಾಡಿದಲ್ಲಿ ಬುಲ್ಡೋಜರ್ ಕಳಿಸಿ ಕಟ್ಟಡ ಬೀಳಿಸಿ ಸೇಡು ತೀರಿಸಿಕೊಳ್ಳುವುದು ಈಗ ಸಮಕಾಲೀನ ಇತಿಹಾಸ.
ಸದರಿ ಉತ್ತರ ಪ್ರದೇಶದಲ್ಲಿ ಆವಾಸ್ ಮತ್ತು ವಿಕಾಸ್ ನಿಗಮದ ಒಂದು ಜಾಗದಲ್ಲಿ ಇದ್ದ ಕಟ್ಟಡವನ್ನು ರಾಜೇಂದ್ರ ಕುಮಾರ್ ಬರ್ಜಾತಿಯಾ ಎಂಬ ಮಾರ್ವಾಡಿ ಖರೀದಿಸಿ, ಅಲ್ಲಿನ ಅಧಿಕಾರಿಗಳಿಗೆ ಲಂಚ ಕೊಟ್ಟು, ರಾಜಕೀಯ ಪ್ರಭಾವ ಬಳಸಿಕೊಂಡು ಅದರ ನಕ್ಷೆ, ಉಪಯೋಗಿಸುವ ರೀತಿ ಇತ್ಯಾದಿಗಳನ್ನು ಬದಲಿಸಿಕೊಂಡು ಬೇರೆಯೇ ತರದ ಕಟ್ಟಡ ಕಟ್ಟಿದ. ಅದಕ್ಕೆ ನೋಟಿಸ್ ಇತ್ಯಾದಿ ಕೊಟ್ಟ ನಿಗಮ ಎಲ್ಲವನ್ನೂ ಸಲೀಸಾಗಿಸುತ್ತದೆ. ಹೊಸ ಕಟ್ಟಡ ಮುಗಿದ ಮೇಲೆ ಈ ಬರ್ಜಾತಿಯಾನ ವೈರಿಗಳು ನಿಗಮಕ್ಕೆ ದೂರು ಕೊಟ್ಟು ಒತ್ತಡ ಹೇರಿ ಹೊಸ ಕಟ್ಟಡವನ್ನು ಕೆಡವಲು ಆದೇಶ ತರುತ್ತಾರೆ. ಇದು ಉತ್ತರ ಪ್ರದೇಶದ ಹೈಕೋರ್ಟಿಗೆ ಹೋಗಿ ನಂತರ ಸುಪ್ರೀಂ ಕೋರ್ಟಿಗೆ ಹೋಗಿ ಕಟ್ಟಡ ಕೆಡವುವುದೇ ಸರಿ ಎಂಬ ಆರ್ಡರ್ ಆಗುತ್ತದೆ.
ಅದೆಲ್ಲ ಸರಿ, ಆದರೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಎಂಬ ಮೂರು ಸ್ತರದ ಸಾಂವಿಧಾನಿಕ ಹಕ್ಕುಬಾಧ್ಯತೆ ಇರುವ ಪ್ರಜಾಪ್ರಭುತ್ವದಲ್ಲಿ ಅಲ್ಲಿ ಎಲ್ಲಿಯೋ ಮೀರತ್ ಪಟ್ಟಣದಲ್ಲಿ ಯಾವುನೋ ಖದೀಮನ ಮೇಲೆ ಇವನ ವೈರಿಗಳು ಸೇಡು ತೀರಿಸಿಕೊಳ್ಳಲು ಮಾಡಿದ ಹುನ್ನಾರದ ಫಲಶ್ರುತಿಯಿಂದ ಆದ ಈ ಆದೇಶವನ್ನು ಮೀರತ್ ಮತ್ತು ಉತ್ತರ ಪ್ರದೇಶಕ್ಕೆ ಸೀಮಿತವಾಗಿ ಸುಪ್ರೀಂ ಕೋರ್ಟ್ ಹೊರಡಿಸಿಲ್ಲ. ಬದಲಾಗಿ ಅಖಿಲ ಭಾರತದ ಸಕಲ ರಾಜ್ಯ ಸರ್ಕಾರಗಳಿಗೂ, ಎಲ್ಲಾ ಸ್ಥಳೀಯ ಸರ್ಕಾರಗಳಿಗೂ, ವಾಣಿಜ್ಯ ಮತ್ತು ಖಾಸಗಿ ವ್ಯಕ್ತಿಗಳ ಸ್ವಂತ ನಿವಾಸಗಳಿಗೂ ಅನ್ವಯ ಆಗುವಂತೆ ಆದೇಶ ಕೊಡುತ್ತದೆ.
ಯೋಗಿ ಬಾಬಾನ ಬುಲ್ಡೋಜರ್ ಯೋಜನೆ ಸುಪ್ರೀಂ ಕೋರ್ಟಿನಲ್ಲಿ ತಪರಾಕಿ ತಟ್ಟಿಸಿಕೊಂಡು ಮಕಾಡೆ ಮಲಗಿದ ಒಂದೆರಡು ತಿಂಗಳುಗಳಲ್ಲಿ ಇಡೀ ದೇಶದಲ್ಲಿ ಬುಲ್ಡೋಜರ್ ಭಯೋತ್ಪಾದನೆ ಬಂದಿದ್ದು ಹೀಗೆ. ಉತ್ತರದ, ಹಿಂದಿವಾಲಾಗಳು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದು ಹೀಗೆ.
ಸರಿ ಆರ್ಡರ್ ಬಂತಾ. ನಮ್ಮ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಇದು ರಾಜ್ಯ ಸರ್ಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಸಾಂವಿಧಾನಿಕ ಸ್ವಾಯತ್ತತೆ ಮೇಲೆ ದಾಳಿ ಮಾಡಿದಂತೆ ಆಗುತ್ತದೆ. ಇದು ಕೇವಲ ಉತ್ತರ ಪ್ರದೇಶದ ಮೀರತ್ ಪಟ್ಟಣಕ್ಕೆ ಸೀಮಿತ ವಿಚಾರ ಅಂತ ಷರಾ ಬರೆದು ಕೈ ತೊಳೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿಯಾಗಿ ಚರ್ಚೆಯನ್ನೂ ಮಾಡುವುದಿಲ್ಲ. ಬದಲಾಗಿ ಮಕ್ಕಿ ಕಾ ಮಕ್ಕಿ ಇದನ್ನೇ ಎಲ್ಲ ಸ್ಥಳೀಯ ಸಂಸ್ಥೆ ಆಯುಕ್ತರಿಗೆ ಆರ್ಡರ್ ಮಾಡಿ ಎಲ್ಲೆಲ್ಲಿ ಯಾವ ಬಿಲ್ಡಿಂಗ್ ಹೆಂಗೆಂಗೆ ಕಟ್ಟುತ್ತಿದ್ದಾರೆ ಅದು ವಾಣಿಜ್ಯವೋ, ಬಿಲ್ಡರ್ ಉದ್ಯಮವೋ, ಬ್ಯಾಂಕ್ ಸಾಲ ಮಾಡಿಕೊಂಡು ಸ್ವಂತ ವಾಸಕ್ಕೆ ಖಾಸಗಿ ವ್ಯಕ್ತಿ ಕಟ್ಟುತ್ತಿರುವ ಮನೆಯೋ ಯಾವುದನ್ನೂ ನೋಡದೆ ಬುಲ್ಡೋಜರ್ ನುಗ್ಗಿಸಲು ಆದೇಶ ಕೊಡುತ್ತಾರೆ. ತಪ್ಪಿದಲ್ಲಿ ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಆದೇಶ ನೀಡುತ್ತಾರೆ.
ಅದನ್ನು ಹಾಗೆಯೇ ಕಾಪಿ ಪೇಸ್ಟ್ ಮಾಡಿಕೊಂಡ ಕಾರ್ಪೊರೇಷನ್ ಕಮೀಷನರುಗಳು ಎಲ್ಲ ವಾರ್ಡಿನ ಇಂಜಿನಿಯರುಗಳನ್ನು ಕರೆದು ಮನೆ ಒಡೆಯುವ ಟಾರ್ಗೆಟ್ ಕೊಡುತ್ತಾರೆ. ಮನೆ ಒಡೆಯದಿದ್ದಲ್ಲಿ ಅಮಾನತ್ತುಗೊಳಿಸುವುದಾಗಿ ಹೆದರಿಸುತ್ತಾರೆ. ಹೆದರಿ ತಲೆ ಇಲ್ಲದ ಕೋಳಿಗಳಾದ ಈ ಇಂಜಿನಿಯರುಗಳು ಎರ್ರಾಬಿರ್ರಿ ನೋಟಿಸ್ ಕೊಟ್ಟು ಬೆಂಗಳೂರಲ್ಲಿ ಮನೆ ಮುರಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಎಂಟು ಸ್ವಂತ ವಾಸದ ಮನೆಗಳನ್ನು ನಿರ್ನಾಮ ಮಾಡಿ ಕುಟುಂಬಗಳು ಬೀದಿಗೆ ಬಂದಿವೆ. ಬ್ಯಾಂಕ್ ಸಾಲ ಕಟ್ಟುವುದು ಹೇಗೆ ಎಂಬ ಒತ್ತಡದಲ್ಲಿ ಆತ್ಮಹತ್ಯಾ ಚಿಂತನೆಯಲ್ಲಿವೆ. ಈ ಮನೆ ಮುರುಕ ಆರ್ಡರ್ ಪಾಲಿಸದ ಅನೇಕ ಇಂಜಿನಿಯರುಗಳು ಅಮಾನತ್ತುಗೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಶಸ್ತ್ರಾಸ್ತ್ರ ಖರೀದಿ ಹೆಚ್ಚಿಸುವಂತೆ ಮೋದಿಗೆ ತಾಕೀತು: ಭಾರತದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆಯೇ ಟ್ರಂಪ್?
ಮನೆ ಅನ್ನುವುದು ಈ ದೇಶದ ಪ್ರತಿಯೊಬ್ಬನ ಮೂಲಭೂತ ಹಕ್ಕು. ಹಾಗೆಯೇ ಅದು ಒಂದು ಇಂಜಿನಿಯರಿಂಗ್ ಕೆಲಸ. ಒಂದು ಮಹಡಿ ಜಾಸ್ತಿ ಆಗಿದೆ ಅಂತ ನೆಲಮಹಡಿ ತೆಗೆದರೆ ಇಡೀ ಕಟ್ಟಡ ಬಿದ್ದು ಹೋಗುತ್ತದೆ. ಮೇಲ್ಮಹಡಿ ಮಾತ್ರ ತೆಗೆದರೆ ಉಳಿಕೆ ಕಟ್ಟಡ ದುರ್ಬಲಗೊಂಡು ಬಿದ್ದು ಹೋಗುತ್ತದೆ. ಇದೆಲ್ಲ ಕಾನೂನನ್ನು ವಾಣಿಜ್ಯ ಕಟ್ಟಡ, ಬಿಲ್ಡರುಗಳು ಮಾರಲು ಕಟ್ಟುವ ಅಪಾರ್ಟ್ಮೆಂಟುಗಳಿಗೆ ಅನ್ವಯಿಸದೆ, ಖಾಸಗಿ ವ್ಯಕ್ತಿಗಳು ಬ್ಯಾಂಕ್ ಸಾಲ ಮಾಡಿಕೊಂಡು ಕನಸಿನ ಮನೆಯನ್ನು ಕಟ್ಟುವಾಗ ಬಂದು ಕಟ್ಟಡ ಕೆಡವುತ್ತೇವೆ ಅಂತ ಹೊರಟರೆ ಸಾಮಾನ್ಯ ಮಾಧ್ಯಮ ವರ್ಗ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನೇ ಉಪಯೋಗಿಸಿಕೊಂಡು ಸಾಮಾನ್ಯ ಜನರನ್ನು ಬ್ಲ್ಯಾಕ್ಮೇಲ್ ಮಾಡುವ ಒಂದು ಉದ್ಯಮವೇ ಇದೆ.
ಕಾನೂನು ಕೂಡ ಬುಲ್ಡೋಜರ್ ಇದ್ದಂತೆಯೇ. ಕಾನೂನು ಮತ್ತು ಬುಲ್ಡೋಜರ್ ಎರಡು ಕೂಡ ತಾನೇ ತಾನಾಗಿ ಕೆಲಸ ಮಾಡುವುದಿಲ್ಲ. ಎರಡಕ್ಕೂ ಜೀವ ಇಲ್ಲ. ಎರಡಕ್ಕೂ ವಿವೇಚನೆ ಇಲ್ಲ. ಕಾನೂನು ಮತ್ತು ಬುಲ್ಡೋಜರ್ ನಡೆಸುವ ಜನಕ್ಕೆ ಜೀವ ಇದೆ. ವಿವೇಚನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಇದೆ. ಇದನ್ನೆಲ್ಲ ಒಳಗೊಂಡ ಚಿಂತಕರೇ ಸಂವಿಧಾನ ಬರೆದು ಕೇಂದ್ರ ರಾಜ್ಯ ಮತ್ತು ಸ್ಥಳೀಯ ಎಂಬ ಮೂರೂ ಸ್ತರದ ಸರ್ಕಾರಗಳಿಗೆ ಅವರವರದೇ ಸ್ವಾಯತ್ತತೆ ಕೊಟ್ಟಿರುವುದು. ಈ ಸಾಂವಿಧಾನಿಕ ಸ್ವಾಯತ್ತತೆಯನ್ನು ಬುಲ್ಡೋಜ್ ಮಾಡುವ ಸ್ವಾತಂತ್ರ್ಯ ಸುಪ್ರೀಂ ಕೋರ್ಟಿಗೂ ಇಲ್ಲ. ಮೀರತ್ ಪಟ್ಟಣದ ಯೋಗಿ ಬಾಬಾನ ಕೆಸರು ಬೆಂಗಳೂರಿಗೂ ತರಬೇಕಾದ ಅಗತ್ಯವೂ ಇಲ್ಲ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತೊಂದು ಸರಣಿ ಆತ್ಮಹತ್ಯೆಯನ್ನು ಸಹಿಸಲಾರರು ಅಂತ ನಂಬೋಣ.




