2011ರ ಜನಗಣತಿಯ ಹಳತಾದ ಅಂಕಿಅಂಶಗಳನ್ನು ಆಧರಿಸಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಸುಮಾರು 14 ಕೋಟಿ ಜನರು ಹೊರಗುಳಿದಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
2021ರಲ್ಲಿ ಜನಗಣತಿ ಕಾರ್ಯವನ್ನು ನಡೆಸದ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್, “ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂಬುದನ್ನು ಮೋದಿ ದೇಶಕ್ಕೆ ತಿಳಿಸಬೇಕು” ಎಂದು ಹೇಳಿದ್ದಾರೆ.
“ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜನಗಣತಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. 150 ವರ್ಷಗಳ ಇತಿಹಾಸದಲ್ಲಿ ದಶವಾರ್ಷಿಕ ಜನಗಣತಿ ವಿಳಂಬವಾಗುತ್ತಿರುವುದು ಇದೇ ಮೊದಲು” ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಮೇಶ್, “ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಮಗ್ರ ಜನಗಣತಿ ಅಗತ್ಯವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯಕ್ಕೆ ‘ನಿಜವಾದ’ ಅರ್ಥ ನೀಡಲು ಜನಗಣತಿಯಲ್ಲಿ ಇತರ ಹಿಂದುಳಿದ ವರ್ಗಗಳ (OBC) ಜನಸಂಖ್ಯೆಯ ಮಾಹಿತಿಯನ್ನು ಸೇರಿಸಬೇಕು. 1951ರಿಂದ ದಶವಾರ್ಷಿಕ ಜನಗಣತಿಯು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಡೇಟಾವನ್ನು ಒದಗಿಸಿದೆ. ಹೊಸದಾಗಿ ನಡೆಸಲಾಗುವ ಜನಗಣತಿಯಲ್ಲಿ ಒಬಿಸಿ ಸಮುದಾಯಗಳ ಜನಸಂಖ್ಯೆಯ ಡೇಟಾವನ್ನೂ ಒದಗಿಸಬೇಕು” ಎಂದು ಹೇಳಿದ್ದಾರೆ.
“ಪ್ರತಿಯೊಂದು ವರ್ಗಗಳಲ್ಲಿನ [SC/ST/OBC] ಜನಸಂಖ್ಯೆಯ ಡೇಟಾ ಇಲ್ಲದೆ ಸರ್ಕಾರವು ಸಾಮಾಜಿಕ ನ್ಯಾಯಕ್ಕಾಗಿ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಜಾತಿ ಗಣತಿ ಅಗತ್ಯವಾಗುತ್ತದೆ. ಎಲ್ಲ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನಗಳ ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯಗತ್ಯವಾಗಿದೆ” ಎಂದಿದ್ದಾರೆ.
“ವೇಗದ ಆರ್ಥಿಕ ಅಭಿವೃದ್ಧಿಯಿಂದ ಯಾರು ಪ್ರಯೋಜನ ಪಡೆಯುತ್ತಾರೆ. ಅದರ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಉತ್ತರಿಸಲು ಜಾತಿ ಗಣತಿಯು ಅವಕಾಶ ನೀಡುತ್ತದೆ. ಭಾರತದಲ್ಲಿ ಅಭಿವೃದ್ಧಿಯ ಪ್ರಯೋಜನಗಳನ್ನು ಅಸಮಾನವಾಗಿ ವಿತರಿಸಲಾಗಿದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ” ಎಂದು ರಮೇಶ್ ತಿಳಿಸಿದ್ದಾರೆ.
ಜನಗಣತಿ ವಿಳಂಬದಿಂದ ಪರಿಣಾಮಗಳು
ಜನಗಣತಿ ಮಾಹಿತಿಯ ಕೊರತೆಯು ಆರೋಗ್ಯ, ಜನಸಂಖ್ಯಾಶಾಸ್ತ್ರ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಕನಿಷ್ಠ 15 ಇತರ ಪ್ರಮುಖ ಅಂಕಿಅಂಶಗಳನ್ನು ವಿಳಂಬಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಸಮೀಕ್ಷೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆಹಾರ ಭದ್ರತೆಯ ಹೊರತಾಗಿ, ಜನಗಣತಿಯ ದತ್ತಾಂಶದ ಕೊರತೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಮೇಲೂ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರವು ರಾಜ್ಯದ ಕುಟುಂಬಗಳು ಮತ್ತು ಕಾರ್ಮಿಕರ ಸಂಖ್ಯೆಯನ್ನು ಆಧರಿಸಿ ಪ್ರತಿ ರಾಜ್ಯಕ್ಕೆ ಮನರೇಗಾ ಹಣವನ್ನು ನಿಯೋಜಿಸುತ್ತದೆ. ಜನಗಣತಿ ನಡೆಯದೇ ಇರುವುದರಿಂದ ಹಣದ ಹಂಚಿಕೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗಿದೆ.
ಜನಗಣತಿ ನಡೆಸದೇ ಇರುವುದರಿಂದ ಎಸ್ಸಿ/ಎಸ್ಟಿ ಸಮುದಾಯಗಳ ಅಭಿವೃದ್ಧಿ, ವೃದ್ಧಾಪ್ಯ ವೇತನ ಮತ್ತು ಬಡವರಿಗೆ ವಸತಿಗಾಗಿ ವಿವಿಧ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ರಾಜ್ಯ ಸರ್ಕಾರಗಳು ಹೆಣಗಾಡುತ್ತಿವೆ.
ಅರ್ಹ ಫಲಾನುಭವಿಗಳು ಕಲ್ಯಾಣ ಯೋಜನೆಗಳಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಒತ್ತಡದಲ್ಲಿ, ರಾಜ್ಯ ಸರ್ಕಾರಗಳು ತಮ್ಮದೇ ಆದ ಅಂಕಿಅಂಶಗಳನ್ನು ಸಿದ್ದಪಡಿಸಲು ಹಣವನ್ನು ಖರ್ಚು ಮಾಡಲು ಮುಂದಾಗಿವೆ.
“ಭಾರತದಂತಹ ದೇಶದಲ್ಲಿ, ಜನಗಣತಿಯ ಮಾಹಿತಿಯು ಬಹಳ ನಿರ್ಣಾಯಕವಾಗಿದೆ. ಇದು ಜನಸಂಖ್ಯೆಯ ಅಂಕಿಅಂಶ, ಲಿಂಗಾನುಪಾತ, ವಲಸೆ, ಕುಟುಂಬಗಳ ಆರ್ಥಿಕ ವೈವಿಧ್ಯೀಕರಣ ಮತ್ತು ನಗರೀಕರಣದ ವ್ಯಾಪ್ತಿಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಬಡತನ ಮತ್ತು ಅಸಮಾನತೆಯನ್ನು ಅಂದಾಜು ಮಾಡಲು ನೆರವಾಗುತ್ತದೆ” ಎಂದು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ನ ಪ್ರೊಫೆಸರ್ ಎಂ. ವಿಜಯಭಾಸ್ಕರ್ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.




