ಭಾರತೀಯ ಚುನಾವಣಾ ಆಯೋಗ(ಇಸಿಐ) ನವೆಂಬರ್ 4ರಿಂದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುತ್ತಿದೆ. ಈ ಪ್ರಕ್ರಿಯೆಯ ಕೆಲಸದ ಒತ್ತಡದಿಂದಾಗಿ ದೇಶದ ಆರು ರಾಜ್ಯಗಳಲ್ಲಿ 15 ಬಿಎಲ್ಒಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ತೊಡಗಿದ್ದ ಮಧ್ಯಪ್ರದೇಶ, ಗುಜರಾತ್ನ ನಾಲ್ವರು, ಪಶ್ಚಿಮ ಬಂಗಾಳದ ಮೂವರು, ರಾಜಸ್ಥಾನದಲ್ಲಿ ಇಬ್ಬರು ಮತ್ತು ಕೇರಳ, ತಮಿಳುನಾಡಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೆಲವರು ಕೆಲಸದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಒತ್ತಡದಿಂದಾಗಿ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ. ಎಸ್ಐಆರ್ ಪ್ರಕ್ರಿಯೆಗೆ ವಿರೋಧವಿರುವ ನಡುವೆಯೇ ಈ ಸಾವು ಪ್ರಕರಣಗಳು ವಿಪಕ್ಷಗಳನ್ನು ಕೆರಳಿಸಿದೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಿಪಕ್ಷ ನಾಯಕರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ’45 ದಿನಗಳ ಕಾಲ ನಿದ್ರೆ ಇಲ್ಲ’; ಕೆಲಸದ ಒತ್ತಡದಿಂದ ಬಜಾಜ್ ಕಂಪನಿ ಸಿಬ್ಬಂದಿ ಆತ್ಮಹತ್ಯೆ
ಈ ಬಗ್ಗೆ ಹಿಂದಿ ಪತ್ರಿಕೆಯೊಂದರ ವರದಿಯನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶಿವಸೇನೆ-ಯುಬಿಟಿ ನಾಯಕಿ ಪ್ರಿಯಾಂಕಾ ಚತುರ್ವೇದಿ, “ಬಿಎಲ್ಒಗಳು ಯಾವ ಮಟ್ಟಿನ ಒತ್ತಡಕ್ಕೆ ಒಳಗಾಗಿದ್ದಾರೆ ಎಂದರೆ ಅವರು ಸಾವನ್ನಪ್ಪಿದ್ದಾರೆ, ಕೆಲವರು ಈ ಒತ್ತಡದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಚುನಾವಣಾ ಆಯೋಗ ತನಿಖೆ ನಡೆಸುತ್ತದೆಯೇ? ಅಥವಾ ಎಲ್ಲಾ ವಿಚಾರಗಳಂತೆ ಇದಕ್ಕೂ ಉತ್ತರಿಸದೆ ಸುಮ್ಮನೆ ಬಿಡುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು “SIR ನೆಪದಲ್ಲಿ ದೇಶಾದ್ಯಂತ ಅವ್ಯವಸ್ಥೆ ಸೃಷ್ಟಿಯಾಗಿದೆ. ಎಸ್ಐಆರ್ ಸುಧಾರಣೆಯಲ್ಲ, ಇದು ದಬ್ಬಾಳಿಕೆ” ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಎಸ್ಐಆರ್ ಪರಿಣಾವೇನು? ಮೂರು ವಾರಗಳಲ್ಲಿ, 16 ಬಿಎಲ್ಒಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒತ್ತಡದಿಂದಾಗಿ ಹೃದಯಾಘಾತವಾಗಿದೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 22 ವರ್ಷ ಹಳೆಯ ಮತದಾರರ ಪಟ್ಟಿಯ ಸಾವಿರಾರು ಸ್ಕ್ಯಾನ್ ಮಾಡಿದ ಪುಟಗಳನ್ನು ತಿರುಗಿಸಬೇಕಾದ ವ್ಯವಸ್ಥೆಯನ್ನು ಇಸಿಐ ರಚಿಸಿದೆ. ಮತದಾರರು ದಣಿದು ಮತದಾನದ ಹಕ್ಕನ್ನೇ ಬಿಟ್ಟುಕೊಡುವಂತೆ ಮಾಡುವುದು ಮತ್ತು ಮತಗಳವನ್ನು ನಿರಂತರವಾಗಿ ಮುಂದುವರಿಸುವುದೇ ಇದರ ಉದ್ದೇಶವಾಗಿದೆ” ಎಂದು ದೂರಿದ್ದಾರೆ.
“ಭಾರತವು ಜಗತ್ತಿಗೆ ಅತ್ಯಾಧುನಿಕ ಸಾಫ್ಟ್ವೇರ್ ಅನ್ನು ನಿರ್ಮಿಸುತ್ತಿದೆ. ಆದರೂ ಭಾರತದ ಚುನಾವಣಾ ಆಯೋಗವು ಇನ್ನೂ ಕಾಗದದ ಕಾಡನ್ನು ನಿರ್ಮಿಸುವಲ್ಲಿ ಸಿಲುಕಿಕೊಂಡಿದೆ. ಉದ್ದೇಶ ಒಳ್ಳೆಯದಾಗಿದ್ದರೆ, ಪಟ್ಟಿ ಈಗಾಗಲೇ ಡಿಜಿಟಲ್ ರೂಪದಲ್ಲಿ ಸಿಗಬೇಕಾಗಿತ್ತು. 30 ದಿನದಲ್ಲೇ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಡ ಹೇರುವ ಇಸಿಐ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಹೊಣೆಗಾರಿಕೆಯನ್ನು ಹೊರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ”ಎಂದು ರಾಹುಲ್ ಆರೋಪಿಸಿದ್ದಾರೆ.
“ಎಸ್ಐಆರ್ ಒಂದು ಲೆಕ್ಕಾಚಾರದ ತಂತ್ರವಾಗಿದ್ದು ನಾಗರಿಕರಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಅನಗತ್ಯ ಒತ್ತಡದಿಂದ ಬಿಎಲ್ಒಗಳ ಸಾವುಗಳು ನಡೆಯುತ್ತಿದೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಲಾಗುತ್ತಿದೆ. ಇದು ವೈಫಲ್ಯವಲ್ಲ, ಇದು ಒಂದು ಪಿತೂರಿ. ಅಧಿಕಾರದಲ್ಲಿರುವವರನ್ನು ರಕ್ಷಿಸಲು ಪ್ರಜಾಪ್ರಭುತ್ವದ ತ್ಯಾಗ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಹಾರದಲ್ಲಿ ಚುನಾವಣೆಗೂ ಮುನ್ನ ತರಾತುರಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗಿದ್ದು, 65 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದಾದ ಬಳಿಕ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು ಈ ಪೈಕಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಮುಂದಿನ ವರ್ಷದಲ್ಲೇ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಪ್ರಕ್ರಿಯೆ ನಡೆಸುವ ಒತ್ತಡವನ್ನು ಚುನಾವಣಾ ಅಧಿಕಾರಿಗಳು ಬಿಎಲ್ಒಗಳ ಮೇಲೆ ಹೇರುತ್ತಿದ್ದಾರೆ. ಇನ್ನು ಗೋವಾ, ಗುಜರಾತ್, ಉತ್ತರ ಪ್ರದೇಶದಲ್ಲಿ 2027ರಲ್ಲಿ ಚುನಾವಣೆ ನಡೆಯಲಿದೆ.





