ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇಂದು (ನ.6) ನಡೆಯುತ್ತಿದೆ. ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರು ಮತಚಲಾಯಿಸಿದ್ದಾರೆ. ಬಳಿಕ, ರಾಜಕೀಯ ಮತ್ತು ರೋಟಿ ನಡುವಿನ ಸಾಮ್ಯತೆಯನ್ನು ಚಿತ್ರಿಸಿದ್ದು, ಬದಲಾವಣೆಯನ್ನು ಪ್ರತಿಪಾದಿಸಿದ್ದಾರೆ.
“ರೋಟಿ ಬಿಸಿ ತವಾದ ಮೇಲಿರುವಾಗ ಅದನ್ನು ತಿರುಗಿಸುತ್ತಲೇ ಇರಬೇಕು. ಇಲ್ಲದಿದ್ದರೆ ಅದು ಸುಟ್ಟುಹೋಗುತ್ತದೆ. ಇಪ್ಪತ್ತು ವರ್ಷಗಳು ಸಾಕು. ಹೊಸ ಬಿಹಾರಕ್ಕಾಗಿ ತೇಜಸ್ವಿ (ಯಾದವ್) ನೇತೃತ್ವದ ಸರ್ಕಾರ ರಚನೆ ಅಗತ್ಯವಾಗಿದೆ” ಎಂದು ಲಾಲೂ ಯಾದವ್ ಹೇಳಿದ್ದಾರೆ.
ಅವರು ಪಾಟ್ನಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ, ತಮ್ಮ ಮಗ, ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಮತ್ತು ತಮ್ಮ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
ಇನ್ನು, ಲಾಲೂ ಯಾದವ್ ಅವರ ಹಳೆಯ ಮಿತ್ರ, ಇಂದಿನ ಬದ್ದ ವೈರಿ, ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಭಕ್ತಿಯಾರ್ಪುರದಲ್ಲಿ ಮತ ಚಲಾಯಿಸಿದ್ದಾರೆ. “ಪ್ರಜಾಪ್ರಭುತ್ವದಲ್ಲಿ, ಮತದಾನವು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಆಗಿದೆ. ಇಂದು, ಬಿಹಾರವು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡುತ್ತಿದೆ. ಎಲ್ಲರೂ ಮತ ಚಲಾಯಿಸುವಂತೆ ನಾನು ಕೋರುತ್ತೇನೆ. ಮತ ಚಲಾಯಿಸಿ ಮತ್ತು ಇತರರಿಗೂ ಸ್ಫೂರ್ತಿ ನೀಡಿ” ಎಂದು ಹೇಳಿದ್ದಾರೆ.
2005ರಲ್ಲಿ ಲಾಲೂ ಯಾದವ್ ಅವರ ಆರ್ಜೆಡಿಯನ್ನು ಸೋಲಿಸಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು ಅಧಿಕಾರಕ್ಕೇರಿತು. ಆ ನಂತರದಲ್ಲಿ, ನಿತೀಶ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿದ್ದರೂ, ಆಗ್ಗಾಗ್ಗೆ ಎನ್ಡಿಎ ತೊರೆದು ಆರ್ಜೆಡಿ-ಕಾಂಗ್ರೆಸ್ ಜೊತೆಗೂ ಮೈತ್ರಿ ಮಾಡಿಕೊಂಡು ನಿರಂತರ ಅಧಿಕಾರದಲ್ಲಿದ್ದಾರೆ.
ಪ್ರಸ್ತುತ, ನಿತೀಶ್ ಅವರ ಜೆಡಿಯು ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಕಣಕ್ಕಿಳಿದಿದೆ. ಆರ್ಜೆಡಿ-ಕಾಂಗ್ರೆಸ್-ಎಡಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟವು ಎನ್ಡಿಎ ಸರ್ಕಾರವನ್ನು ಸೋಲಿಸಿ, ಹೊಸ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಇಂದು (ನ.6) ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಉಳಿದ 122 ಸ್ಥಾನಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದೆ. ಫಲಿತಾಂಶವು ನವೆಂಬರ್ 14ರಂದು ಪ್ರಕಟವಾಗಲಿದೆ.




