10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಪರೀಕ್ಷೆಗೆ ತಗಲುವ ವೆಚ್ಚ 50 ರೂ.ಗಳನ್ನು ರಾಜ್ಯ ಕಾಂಗ್ರೆಸ್ ಪ್ರತಿ ವಿದ್ಯಾರ್ಥಿಯಿಂದ ಶಾಲಾ ಹಂತದಲ್ಲೇ ಸಂಗ್ರಹಿಸುತ್ತಿದೆ ಎಂಬ ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟೀಕರಣ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, “ಫೆಬ್ರವರಿ 2023 ರಲ್ಲಿ ಈ ಆದೇಶವಾಗಿದ್ದು, ಅದೇ ರೀತಿ ಈ ಸಾಲಿನಲ್ಲಿಯೂ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಗೂ ಕೂಡ ಪ್ರತಿ ವಿದ್ಯಾರ್ಥಿಯಿಂದ 50 ರೂ.ಗಳನ್ನು ಶಾಲಾ ಹಂತದಲ್ಲಿ ಸಂಗ್ರಹ ಮಾಡಿ ಪರೀಕ್ಷಾ ವೆಚ್ಚ ಭರಿಸಲು ಕ್ರಮವಹಿಸಲಾಗುತ್ತಿದೆ” ಎಂದಿದೆ.
“26-02-2024 ರಿಂದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ಪರೀಕ್ಷೆಗೆ ತಗಲುವ ವೆಚ್ಚದ 50 ರೂ.ಗಳನ್ನು ಪ್ರತಿ ವಿದ್ಯಾರ್ಥಿಯಿಂದ ಶಾಲಾ ಹಂತದಲ್ಲಿ ಸಂಗ್ರಹಿಸುತ್ತಿರುವ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿವೆ. ಆದರೆ, ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕಳೆದ 4 ವರ್ಷಗಳಿಂದಲೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ನಡೆಸಲಾಗುತ್ತಿದೆ. ಈ ಸಂಬಂಧ 2022-23ನೇ ಸಾಲಿನ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಪ್ರತಿ ವಿದ್ಯಾರ್ಥಿಯಿಂದ 50 ರೂ. ಸಂಗ್ರಹಿಸಲು ಸರ್ಕಾರಿ ಆದೇಶ ಸಂಖ್ಯೆ:ಇಪಿ 197 ಎಸ್ಎಲ್ಬಿ 2021, ಬೆಂಗಳೂರು ದಿನಾಂಕ:17ನೇ ಫೆಬ್ರವರಿ 2023 ರಲ್ಲಿ ಆದೇಶವಾಗಿರುತ್ತದೆ. ಆ ಪ್ರಕಾರ ಸಂಗ್ರಹಿಸುತ್ತಿದ್ದೇವೆ” ಎಂದು ಸ್ಪಷ್ಟೀಕರಣ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
ಕುಮಾರಸ್ವಾಮಿ ಟೀಕೆ
“ಅಕ್ರಮ ಸುಲಿಗೆಯಲ್ಲಿ ‘ಸಿದ್ದಹಸ್ತ’ವಾಗಿರುವ ಸರಕಾರ, ಈಗ ಕಾನೂನು ಬದ್ಧವಾಗಿಯೇ ಸುಲಿಗೆ ಮಾಡುತ್ತಿದೆ, ಅದೂ ಲಜ್ಜೆಗೆಟ್ಟು. ಇದೇ ಫೆಬ್ರವರಿ 26ರಿಂದ ಮಾರ್ಚ್ 3ರವರೆಗೂ ನಡೆಯಲಿರುವ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಆಗುವ ವೆಚ್ಚವನ್ನು ನಾಚಿಕೆಗೆಟ್ಟ ಸರಕಾರ ಮಕ್ಕಳಿಂದಲೇ ವಸೂಲಿ ಮಾಡಲು ಹೊರಟಿದೆ” ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದರು.
“ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ರಾಜ್ಯ ಸರಕಾರ, ಈಗ ಎಸ್ಎಸ್ಎಲ್ಸಿ ಮಕ್ಕಳ ಕಿಸೆಗೂ ಕೈ ಹಾಕಿದೆ. ಜನತೆಗೆ 5 ಗ್ಯಾರಂಟಿ ಕೊಟ್ಟೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅದೆಷ್ಟು ಅದಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ” ಎಂದಿದ್ದರು.
ಈ ಆದೇಶ ಫೆಬ್ರವರಿ 2023ರಲ್ಲಿಯೇ ಹೊರಬಿದ್ದಿತ್ತು. ಆಗ ಬಿಜೆಪಿ ಸರ್ಕಾರವಿತ್ತು ಎಂಬುದನ್ನು ಕುಮಾರಸ್ವಾಮಿಯವರು ಅರಿತು, ಮಾತನಾಡಿದ್ದರೆ ಅವರ ಮಾತಿಗೆ ತೂಕವಿರುತ್ತಿತ್ತು ಎಂಬುದು ಕೆಲ ಕಾಂಗ್ರೆಸ್ಸಿಗರ ವಾದ.





