ದೇಶದ ಮೇಲೆ ದಾಳಿಗಳು ನಡೆದಾಗ, ಮೋದಿಯವರು ವಿದೇಶ ಪ್ರವಾಸದಲ್ಲಿರುತ್ತಾರೆ; ಇಲ್ಲವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗಿರುತ್ತಾರೆ. ಪ್ರಧಾನಿಗಳ ಈ ನಡೆಯನ್ನು ಪ್ರತಿಪಕ್ಷಗಳು, 'ಬಿಸಿನೆಸ್ ಆಸ್ ಯೂಝುಯಲ್' ಎಂದು ವ್ಯಂಗ್ಯವಾಡುತ್ತವೆ...
ದೇಶದ ರಾಜಧಾನಿ ದಿಲ್ಲಿಯಲ್ಲಿ ನವೆಂಬರ್ 10ರಂದು ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈವರೆಗೆ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೇವಲ 13 ಕೀ.ಮೀ ದೂರದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಎಂದಿನಂತೆ ವಿದೇಶ ಪ್ರವಾಸಕ್ಕೆ ವಿಮಾನ ಹತ್ತಿದ್ದಾರೆ. ಟಾಟಾ ಬೈ ಬೈ ಹೇಳಿದ್ದಾರೆ. ಭೂತಾನ್ ದೇಶಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿಯವರ ಈ ನಡೆ ಹೊಸದೇನೂ ಅಲ್ಲ. ದೇಶದ ಮೇಲೆ ಈ ರೀತಿಯ ದಾಳಿಗಳು ನಡೆದಾಗ, ಮೋದಿಯವರು ವಿದೇಶ ಪ್ರವಾಸದಲ್ಲಿರುತ್ತಾರೆ; ಇಲ್ಲವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗಿರುತ್ತಾರೆ. ಇದನ್ನು ಗಮನಿಸಿರುವ ಪ್ರತಿಪಕ್ಷಗಳು ಪ್ರಧಾನಿಗಳ ಈ ನಡೆಯನ್ನು ‘ಬಿಸಿನೆಸ್ ಆಸ್ ಯೂಝುಯಲ್’ ಎಂದು ವ್ಯಂಗ್ಯವಾಡಿದ್ದೂ ಇದೆ.
ಇದನ್ನು ಓದಿದ್ದೀರಾ?: ಮೋದಿ, ಶಾ ಬೆಂಬಲದ ಬಲಪಂಥೀಯ ಶಕ್ತಿಗಳು ದೆಹಲಿ ಬಾಂಬ್ ಸ್ಫೋಟ ನಡೆಸಿರುವ ಸಾಧ್ಯತೆ: ಆದರ್ಶ್ ಅಯ್ಯರ್ ಆರೋಪ
ಈ ಕ್ಷಣದಲ್ಲಿ ನಾವು ಗಮನಿಸಬೇಕಾದ ಬಹು ಮುಖ್ಯವಾದ ವಿಚಾರವೆಂದರೆ- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಡೆಯನ್ನು; ಅವರಿಗೂ ಇವರಿಗೂ ಇರುವ ವ್ಯತ್ಯಾಸವನ್ನು; ಜನಪರ ಪ್ರಧಾನಿ ಯಾರು ಎನ್ನುವುದನ್ನು.
ಅದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಇದನ್ನು ನೋಡಬಹುದು.
2008ರಲ್ಲಿ ಮುಂಬೈನ ತಾಜ್ ಹೋಟೆಲ್ ಸೇರಿದಂತೆ ಹಲವು ಸ್ಥಳಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿ, ಹಲವರ ಸಾವು ನೋವಿಗೆ ಕಾರಣವಾಗಿದ್ದರು. ಆಗ ಪ್ರಧಾನಿಗಳಾಗಿದ್ದ ಡಾ. ಮನಮೋಹನ್ ಸಿಂಗ್, ಆ ತಕ್ಷಣವೇ ಮುಂಬೈಗೆ ತೆರಳಿ, ಸುದ್ದಿಗಾರರ ಮುಂದೆ ನಿಂತು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿದ್ದರು. ಮತ್ತು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಭಯೋತ್ಪಾದಕರ ದಾಳಿಯಾಗಿ ನಾಲ್ಕು ದಿನಗಳ ನಂತರ, ಭದ್ರತಾ ವೈಫಲ್ಯವನ್ನು ಒಪ್ಪಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದು, ಪ್ರಜಾಪ್ರಭುತ್ವದಲ್ಲಿ ಸರ್ಕಾರವೊಂದು ಸ್ಪಂದಿಸಬೇಕಾದ ರೀತಿ, ಜನ ನಿರೀಕ್ಷಿಸುವ ನಡೆ. ಆದರೆ ಮೋದಿಯವರ ಹನ್ನೊಂದು ವರ್ಷಗಳ ಆಳ್ವಿಕೆಯಲ್ಲಿ ಈ ರೀತಿಯ ನಡೆ ಮತ್ತು ನಿರೀಕ್ಷೆಗಳನ್ನು ಕಂಡಿದ್ದೀರಾ?
2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ CRPF ಕನ್ವಾಯ್ ಮೇಲೆ ಸುಸೈಡ್ ಬಾಂಬ್ ದಾಳಿಯಾಯಿತು. 40ಕ್ಕೂ ಹೆಚ್ಚು ಸೇನಾ ಯೋಧರು ಅಸುನೀಗಿದರು. ಅಸುನೀಗಿದವರು ಸಾಮಾನ್ಯರಲ್ಲ, ದೇಶದ ರಕ್ಷಣೆಗೆ ನಿಂತ ಯೋಧರು. ಆದರೂ ಪ್ರಧಾನಿ ಮೋದಿಯವರು ಪತ್ರಿಕಾಗೋಷ್ಠಿ ಕರೆಯಲಿಲ್ಲ, ಕೃತ್ಯವನ್ನು ಖಂಡಿಸಲಿಲ್ಲ.
ಬದಲಿಗೆ, ಮೋದಿಯವರು ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಕ್ಯಾಮರಾಗಳ ಮುಂದೆ ನಿಂತು ಹಲ್ಕಿರಿಯುತ್ತಿದ್ದರು, ಡಾಕ್ಯುಮೆಂಟರಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ದಾಳಿಯಾಗಿ ಎರಡು ಗಂಟೆಗಳ ನಂತರ ಅವರು ರಾಜಕೀಯ ಸಭೆಯಲ್ಲಿ ಭಾಗವಹಿಸಿದರು. ಅದೂ ಫೋನ್ ಮೂಲಕ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ದಾಳಿಯ ಬಗ್ಗೆ ಚಕಾರ ಎತ್ತಲಿಲ್ಲ. ಅಷ್ಟೇ ಅಲ್ಲ, ದಾಳಿಯಾದ 7 ದಿನಗಳ ನಂತರ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡರು.
ಇನ್ನು ಇತ್ತೀಚಿಗೆ ನಡೆದ ಘಟನೆಯನ್ನು ನೆನಪಿಸಿಕೊಳ್ಳುವುದಾದರೆ… 2025ರ ಏಪ್ರಿಲ್ನಲ್ಲಿ ನಡೆದ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ 26 ಜನ ಅಮಾಯಕರು ಅಸುನೀಗಿದರು.
ಆ ಸಂದರ್ಭದಲ್ಲೂ ಅಷ್ಟೇ… ಪ್ರಧಾನಿ ಮೋದಿಯವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದರು. ಸುದ್ದಿ ತಿಳಿದ ತಕ್ಷಣ ಪ್ರವಾಸವನ್ನು ಮೊಟಕುಗೊಳಿಸಿ, ಭಾರತಕ್ಕೆ ಬಂದು ಸುದ್ದಿಗಾರರ ಮುಂದೆ ಬಂದು ನಿಲ್ಲಲಿಲ್ಲ. ಭಯೋತ್ಪಾದಕರ ಕೃತ್ಯ ಖಂಡಿಸಲಿಲ್ಲ. ಬದಲಿಗೆ, ಸಚಿವ ಸಂಪುಟ ಸಭೆ ಕರೆದರು. ನಂತರ ಬಿಹಾರಕ್ಕೆ ತೆರಳಿ, ರಾಜಕೀಯ ಸಭೆಯಲ್ಲಿ ಭಾಗಿಯಾದರು. ವೀರಾವೇಷದ ಭಾಷಣ ಬಿಗಿದರು. ಆನಂತರ, 25 ದಿನಗಳ ನಂತರ ಯಥಾಪ್ರಕಾರ, ವಿದೇಶಕ್ಕೆ ಹಾರಿದರು.

ಹೋಗಲಿ, ವಿದೇಶ ಪ್ರವಾಸ ಮಾಡುವ ಮೂಲಕವಾದರೂ ದೇಶಕ್ಕೆ ಅನುಕೂಲವಾಗಿದೆಯೇ ಎಂದರೆ, ಅದೂ ಇಲ್ಲ. ಪ್ರಧಾನಿ ಮೋದಿಯವರು ಇಲ್ಲಿಯವರೆಗೆ, 2014ರಿಂದ 2025ರವರೆಗೆ, ಸುಮಾರು 92 ಅಂತಾರಾಷ್ಟ್ರೀಯ ಪ್ರವಾಸಗಳನ್ನು ಕೈಗೊಂಡಿದ್ದಾರೆ. 78 ದೇಶಗಳನ್ನು ಸುತ್ತಿದ್ದಾರೆ. ಅಗ್ರಮಾನ್ಯ ನಾಯಕರನ್ನು ಭೇಟಿ ಮಾಡಿದ್ದಾರೆ.
ಮೋದಿಯವರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ‘100ಕ್ಕೂ ಹೆಚ್ಚು ವಿದೇಶ ಪ್ರವಾಸ ಕೈಗೊಂಡರೂ, ಭಾರತದ ಮೇಲಾಗುತ್ತಿರುವ ಭಯೋತ್ಪಾದಕರ ದಾಳಿಯ ವಿರುದ್ಧ ಜಾಗತಿಕ ಬೆಂಬಲ ಪಡೆಯಲಾಗಿಲ್ಲ’ ಎನ್ನುವುದು ಮೋದಿಯವರ ನಾಯಕತ್ವವನ್ನು ನಿಕಷಕ್ಕೆ ಒಡ್ಡುತ್ತದೆ. ಹಾಗೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ‘ಬಿಸಿನೆಸ್ ಆಸ್ ಯೂಝುಯಲ್’ ಎನ್ನುವ ಹೇಳಿಕೆಗೆ ಪುಷ್ಟಿ ನೀಡುತ್ತದೆ.

ಲೇಖಕ, ಪತ್ರಕರ್ತ




