ದೇಶವ್ಯಾಪಿ ಧರ್ಮ, ಜಾತಿಗಳ ನಡುವೆ ದ್ವೇಷ ದಾಂಗುಡಿಯಿಡುತ್ತಿರುವ ಈ ದಿನಗಳಲ್ಲಿ, ಸಾವನ್ನು ಲೆಕ್ಕಿಸದೆ ಲಡಾಖಿನ ಮುಸ್ಲಿಂ ಯುವಕರು ಭಾರತೀಯ ಸೇನೆಯ ಸೇವೆ ಮಾಡುತ್ತಿದ್ದಾರೆ. ಬಹುತ್ವ ಭಾರತದ ಸೊಗಸಾದ ಲಡಾಖಿ ಮುಸ್ಲಿಂ ಯುವಕರ ದೇಶಭಕ್ತಿಯ ಪುಟ್ಟ ವೃತ್ತಾಂತವಿದು...
ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಉನ್ನತ ದರ್ಜೆಯ ಉದ್ಯೋಗಿಯೊಬ್ಬ ಕಳೆದ ಸಾಲಿನ ಬೇಸಿಗೆ ರಜೆ ಕಳೆಯುವ ಸಲುವಾಗಿ ಲಡಾಖ್ಗೆ ತಂದೆ, ತಾಯಿ, ಪತ್ನಿ ಒಳಗೊಂಡ ಕುಟುಂಬದೊಡನೆ ತೆರಳಿದ್ದ. ಅಲ್ಲಿ, ಆ ಕುಟುಂಬಕ್ಕೆ 28 ವರ್ಷದ ಅಬ್ದುಲ್ ಖಾಲಿದ್ ಎಂಬ ಮುಸ್ಲಿಂ ಯುವಕ ಕಾರು ಚಾಲಕನಾಗಿ ಸಿಕ್ಕಿದ. ಲಡಾಖ್ನ ಪ್ರೇಕ್ಷಣೀಯ ಸ್ಥಳಗಳ ಪ್ರವಾಸದ ಪ್ರಯಾಣದಲ್ಲಿ ಮಾತುಕತೆ ಆರಂಭವಾಯಿತು.
ಪ್ರವಾಸಿಗ: ಈ ವಾರಾಂತ್ಯದಿಂದ ಪ್ರವಾಸಿ ಸೀಸನ್ ಮುಗಿಯುತ್ತದೆ. ನಂತರ ನೀವು ಏನು ಮಾಡುತ್ತೀರಿ? ಗೋವಾ, ದೆಹಲಿ ಅಥವಾ ಬೇರೆ ದೊಡ್ಡ ನಗರಗಳ ಹೋಟೆಲ್ಗಳಲ್ಲಿ ಕೆಲಸಕ್ಕೆ ಹೋಗುತ್ತೀರಾ?
ಕಾರು ಚಾಲಕ: ಇಲ್ಲ, ನಾನು ಇಲ್ಲಿಯೇ ಇರುತ್ತೇನೆ. ನಾನು ಎಂದಿಗೂ ಲಡಾಖ್ ಬಿಟ್ಟು ಹೋಗುವುದಿಲ್ಲ.
ಪ್ರವಾಸಿಗ: ಇಲ್ಲಿ ಚಳಿಗಾಲದಲ್ಲಿ ತುಂಬಾ ಚಳಿ ಇರುತ್ತದೆ. ಆಗ ಏನು ಮಾಡುತ್ತೀರಿ?
ಕಾರು ಚಾಲಕ: ಹೆಚ್ಚೇನಿಲ್ಲ… ನಾನು ಸಿಯಾಚಿನ್ಗೆ ಹೋಗುತ್ತೇನೆ.
ಪ್ರವಾಸಿಗ (ಆಶ್ಚರ್ಯದಿಂದ): ಸಿಯಾಚಿನ್? ಅಲ್ಲಿ ಇಲ್ಲಿಗಿಂತಲೂ ಹೆಚ್ಚು ಚಳಿ!
ಕಾರು ಚಾಲಕ: ಅಲ್ಲಿ ನಾನು ಭಾರತೀಯ ಸೇನೆಯ (Indian Army) ಜೊತೆ ಲೋಡರ್ ಆಗಿ ಒಪ್ಪಂದದ ಮೇಲೆ ಕೆಲಸ ಮಾಡುತ್ತೇನೆ. ನಮ್ಮಂತವರು ಕೆಲವರು ಇಲ್ಲಿಂದ ಸುಮಾರು 250 ಕಿಲೋಮೀಟರ್ ನಡೆದು ಸಿಯಾಚಿನ್ ಬೇಸ್ ಭಾರತೀಯ ಮಿಲಿಟರಿ ಕ್ಯಾಂಪ್ಗೆ ಹೋಗುತ್ತೇವೆ. ಅದಕ್ಕೆ 15 ದಿನಗಳು ಬೇಕಾಗುತ್ತದೆ. ವೈದ್ಯಕೀಯ ಪರೀಕ್ಷೆ ಇರುತ್ತದೆ. ಅರ್ಹರಾದರೆ ಯೂನಿಫಾರ್ಮ್, ಬೂಟು, ತಣ್ಣನೆಯ ಉಡುಪು, ಹೆಲ್ಮೆಟ್ ಕೊಡುತ್ತಾರೆ. ನಂತರ 3ರಿಂದ 4 ತಿಂಗಳು ಅಲ್ಲಿ ಉಳಿದು ಕೆಲಸ ಮಾಡುತ್ತೇವೆ.
ಪ್ರವಾಸಿಗ: ಅಲ್ಲಿ ನೀವು ಏನು ಕೆಲಸ ಮಾಡುತ್ತೀರಿ?

ಕಾರು ಚಾಲಕ: ಸರಕು ಹೊರುತ್ತೇವೆ. ಸೇನೆ ಎಲ್ಲವನ್ನೂ ವಿಮಾನದ ಮೂಲಕ ಕೆಳಗೆ ಬಿಸಾಡುತ್ತದೆ. ನಾವು ಅದನ್ನು ಬೆನ್ನಿಗೆ ಹೊತ್ತು ಒಂದು ಪೋಸ್ಟ್ನಿಂದ ಮತ್ತೊಂದು ಪೋಸ್ಟ್ಗೆ ಕೊಂಡೊಯ್ಯುತ್ತೇವೆ. ಅಲ್ಲಿ ಎಲ್ಲೆಡೆ ಹಿಮನದಿಗಳು ಮಾತ್ರ. ಟ್ರಕ್ಗಳು ಹೋಗಲು ಸಾಧ್ಯವಿಲ್ಲ. ಸ್ನೋ ಸ್ಕೂಟರ್ ಶಬ್ದ ಮಾಡಿದರೆ ಶತ್ರುಗಳ ಗುಂಡಿನ ದಾಳಿ ಆಗಬಹುದು. ಆದ್ದರಿಂದ ನಾವು ರಾತ್ರಿ 2 ಗಂಟೆಗೆ ಹೊರಡುತ್ತೇವೆ. ಟಾರ್ಚ್ ಕೂಡ ಬಳಸುವುದಿಲ್ಲ. ಪೂರ್ಣ ನಿಶ್ಶಬ್ದದಲ್ಲಿ, ಕತ್ತಲೆಯಲ್ಲಿ ನಡೆಯುತ್ತೇವೆ. ಕುದುರೆ ಅಥವಾ ಕತ್ತೆಗಳು ಇಲ್ಲ. ಮೈನಸ್ 50 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮತ್ತು 25,400 ಅಡಿ ಎತ್ತರದಲ್ಲಿ ಯಾವುದೇ ಪ್ರಾಣಿ ಬದುಕಲು ಸಾಧ್ಯವಿಲ್ಲ.
ಪ್ರವಾಸಿಗ (ಗಂಭೀರವಾಗಿ): ಅಲ್ಲಿ ಆಮ್ಲಜನಕದ ಮಟ್ಟ ಕಡಿಮೆ. ಅಷ್ಟು ಭಾರವನ್ನು ಹೇಗೆ ಹೊರುತ್ತೀರಿ?
ಕಾರು ಚಾಲಕ: ಆ ಕಾರಣಕ್ಕೆ 15 ಕಿಲೋಕ್ಕಿಂತ ಹೆಚ್ಚು ತೂಕ ಇರುವುದಿಲ್ಲ. ಮತ್ತು ದಿನಕ್ಕೆ ಕೇವಲ ಎರಡು ಗಂಟೆ ಕೆಲಸ. ಉಳಿದ ಸಮಯ ದೇಹವನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನದಲ್ಲೇ ಕಳೆಯುತ್ತದೆ.
ಪ್ರವಾಸಿಗ: ಇದು ತುಂಬಾ ಅಪಾಯಕರ ಜೀವನ…
ಕಾರು ಚಾಲಕ(ಕೆಲವು ಕ್ಷಣ ಮೌನವಾಗಿದ್ದ ನಂತರ ಹೇಳಿದ): ಬಹಳಷ್ಟು ಸ್ನೇಹಿತರು ಮರಳಿ ಬಂದಿಲ್ಲ. ಕೆಲವರು ಹಿಮದ ಕಂದಕಗಳಲ್ಲಿ ಬಿದ್ದು ಮೃತರಾದರು. ಕೆಲವರು ಶತ್ರುಗಳ ಗುಂಡಿಗೆ ಬಲಿಯಾದರು. ಅತ್ಯಂತ ದೊಡ್ಡ ಅಪಾಯ ಫ್ರಾಸ್ಟ್ಬೈಟ್ (ಹಿಮದ ಕಚ್ಚು) ಮರಣವೆಂದರೆ ಅಲ್ಲಿ ಅನಿವಾರ್ಯ.
ಪ್ರವಾಸಿಗ: ಅಲ್ಲಿ ನಿಮಗೆ ಒಳ್ಳೆಯ ಸಂಬಳ ಸಿಗುತ್ತದೆಯೇ?
ಇದನ್ನು ಓದಿದ್ದೀರಾ?: ಬಹುತ್ವದ ಬುಡಕ್ಕೇ ಕೊಡಲಿಪೆಟ್ಟು: ಸಮಾಜವನ್ನು ಆವರಿಸುತ್ತಿರುವ ಅಸಹಿಷ್ಣುತೆಯ ಕಾರ್ಮೋಡ
ಕಾರು ಚಾಲಕ: ತಿಂಗಳಿಗೆ 18,000 ರೂಪಾಯಿ. ಇದು ಅತಿ ಕಡಿಮೆ. ಈ ಖರ್ಚುಗಳನ್ನು ಸೇನೆ ಹೊರುತ್ತದೆ. ಮೂರು ತಿಂಗಳಲ್ಲಿ ಸುಮಾರು 50,000 ರೂಪಾಯಿ ಕೂಲಿ ಸಿಗಬಹುದು. ಆ ಹಣ ಜೊತೆಗೆ ಮೂರು ತಿಂಗಳಲ್ಲಿ ಪ್ರವಾಸಿಗರಿಂದ ದುಡಿಯುವ ಹಣದಿಂದ ವರ್ಷಪೂರ್ತಿ ನನ್ನ ತಂದೆ, ತಾಯಿ, ಪತ್ನಿ, ಎರಡು ಮಕ್ಕಳ ಕುಟುಂಬವನ್ನು ನಡೆಸಲು ಸಹಾಯವಾಗುತ್ತದೆ. ಇದಕ್ಕಿಂತ ಮುಖ್ಯವಾಗಿ, ದೇಶಕ್ಕಾಗಿ ಮತ್ತು ಸೇನೆಗಾಗಿ ಏನಾದರೂ ಮಾಡಿದ ಸಂತೃಪ್ತಿ ಸಿಗುತ್ತದೆ.
ಕಾರು ಚಾಲಕನ ಮಾತು ಕೇಳಿ ಬೆಂಗಳೂರು ನಗರದಿಂದ ಬಂದಿದ್ದ ಪ್ರವಾಸಿಗ ಮತ್ತು ಆತನ ಕುಟುಂಬ ಮೌನವಾಯಿತು. ಎಸಿ ಕಚೇರಿಯಲ್ಲಿ ಆರಾಮದಾಯಕ ಜೀವನ, ವಾರ್ಷಿಕ 50 ಲಕ್ಷ ಸಂಬಳ ಹೊಂದಿದ್ದ ಅವನಿಗೆ ಮೊದಲ ಬಾರಿಗೆ ತನ್ನ ಬದುಕು ಸಣ್ಣದೆನಿಸಿತು.

ಲಡಾಖ್: ಈ ಭೂ ಪ್ರದೇಶ ಮೊದಲು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು; 2019ರಲ್ಲಿ ಈ ಪ್ರದೇಶವನ್ನು ಭಾರತದ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಈ ಭೂ ಪ್ರದೇಶ ಅಂದಾಜು 22,836 ಚದರ ಮೈಲಿಗಳು ಇರಬಹುದು. ಲೆಹ್, ಕಾರ್ಗಿಲ್ ಒಳಗೊಂಡ 7 ಜಿಲ್ಲೆಗಳು ಈ ಭೂ ಪ್ರದೇಶದಲ್ಲಿವೆ. 2011ರ ಜನಗಣತಿ ಪ್ರಕಾರ 2,74,289 ಜನಸಂಖ್ಯೆ ಈ ಪ್ರದೇಶದಲ್ಲಿದೆ. ಮುಸ್ಲಿಂ 46%, ಬೌದ್ಧ 40%, ಹಿಂದೂ 12%, ಉಳಿದ ಧರ್ಮಿಯರು ಅತಿ ಕಡಿಮೆ ಪ್ರಮಾಣದಲ್ಲಿ ಇದ್ದಾರೆ. ಬಹುತೇಕ ಉರ್ದು, ಹಿಂದಿ ಇಲ್ಲಿನ ಪ್ರಮುಖ ಭಾಷೆ. ಭಾರತದ ಈ ಪ್ರದೇಶಕ್ಕೆ ಪಾಕಿಸ್ತಾನ ಮತ್ತು ಚೀನಾ ಗಡಿ ದೇಶಗಳಾಗಿವೆ. 1984ರಲ್ಲಿ ಆಪರೇಷನ್ ಮೇಘದೂತ್, 1999ರಲ್ಲಿ ಕಾರ್ಗಿಲ್ ಯುದ್ಧಗಳು ಪ್ರಮುಖವಾಗಿ ಇಲ್ಲಿ ನಡೆದಿವೆ. ಈ ಪ್ರದೇಶದ ಸಿಯಾಚಿನ್ ಭಾಗದಲ್ಲಿ ಭಾರತೀಯ ಸೇನೆಯ ಸೇನಾ ಪರ್ವತಾರೋಹಣ ಸಂಸ್ಥೆ (AMI) ಇದೆ. ಭಾರತ ಸರ್ಕಾರ ಪ್ರವಾಸದ ಜೊತೆಗೆ 2007ರಿಂದ ಪರ್ವತಾರೋಹಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಪ್ರದೇಶ ಪೂರ್ಣ ಹಿಮಾನದಿ ಪ್ರದೇಶ. ಲಡಾಖ್ನ ಮತ್ತೊಂದು ಪ್ರದೇಶ ಅಕ್ಷಯ್ ಚಿನ್, 1962ರಿಂದ ಚೀನಾ ದೇಶದ ನಿಯಂತ್ರಣದಲ್ಲಿದೆ.
ಹಿಂದು-ಮುಸ್ಲಿಂ ದ್ವೇಷ: ಈ ಭಾರತ ದೇಶದಲ್ಲಿ ರಾಜಕೀಯ ಲಾಭಕ್ಕೆ ಕಳೆದ ದಶಕಗಳಿಂದ ಬೆಳಗ್ಗೆ, ಮಧ್ಯಾಹ್ನ, ರಾತ್ರಿ, “ಹಿಂದು-ಮುಸ್ಲಿಂ”, “ಹಿಂದು-ಮುಸ್ಲಿಂ” “ಹಿಂದು-ಮುಸ್ಲಿಂ”… ಭಜನೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಪ್ರಭಾವಿ ಮಾಧ್ಯಮಗಳು, ಈ ಎರಡೂ ಧರ್ಮಿಯರ ಮಧ್ಯೆ ವಿಷ ಹಂಚುತ್ತಿದ್ದಾರೆ. ದ್ವೇಷ ಸೃಷ್ಟಿಸುತ್ತಿದ್ದಾರೆ. ಮತ್ತಷ್ಟು ಮಂದಿ ನಗರಗಳಲ್ಲಿ ಕುಳಿತು ಸಲಹೆ ಕೊಡುವುದು, ಸೋಶಿಯಲ್ ಮೀಡಿಯಾಗಳಲ್ಲಿ ವಿಷ ಉಗುಳುವುದು ಮಾಡುತ್ತಾ, ದೇಶಭಕ್ತಿಯ ಹೆಸರಿನಲ್ಲಿ ಇಡೀ ಸಮಾಜದ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಇವರಿಗೆ ಲಡಾಖ್ನಂತಹ ಭೂಪ್ರದೇಶಗಳಲ್ಲಿ, ಮೈನಸ್ 50 ಡಿಗ್ರಿ ತಾಪಮಾನದಲ್ಲಿ, 25,400 ಅಡಿಗಳ ಎತ್ತರದಲ್ಲಿ, ಹಗಲು ರಾತ್ರಿಗಳಲ್ಲಿ ಮರಣದ ಭಯದ ನೆರಳಿನಲ್ಲಿ, ಆ ಕತ್ತಲೆಯ, ತಣ್ಣನೆಯ ನಿಶ್ಶಬ್ದದಲ್ಲಿ ಹತ್ತು ನಿಮಿಷ ನಿಲ್ಲಲು ಸಹ ಆಗುವುದಿಲ್ಲ. ಧೈರ್ಯವೂ ಇಲ್ಲ. ಅಥವಾ ಹಿಂದು-ಮುಸ್ಲಿಂ ಧರ್ಮಗಳನ್ನು ಮರೆತು, ಜಮ್ಮು, ಕಾಶ್ಮೀರ, ಲಡಾಖ್ ಈ ಪ್ರದೇಶಗಳಲ್ಲಿ ಜನರು ಜೀವಿಸುತ್ತಿರುವ ಹೃದಯ ವಿದ್ರಾವಕ ಸ್ಥಿತಿ ಕುರಿತು ಯಾರಿಗಾದರೂ ಹೇಳಲೂ ತಯಾರಿಲ್ಲ.

ದೇಶವ್ಯಾಪಿ ಧರ್ಮ, ಜಾತಿಗಳ ನಡುವೆ ದ್ವೇಷ ಹಂಚುತ್ತಿರುವ ಈ ದಿನಗಳಲ್ಲಿ, ಸಾವನ್ನು ಲೆಕ್ಕಿಸದೆ ಮುಸ್ಲಿಂ ಯುವಕರು ಭಾರತೀಯ ಸೇನೆಯ ಸೇವೆ ಮಾಡುತ್ತಿರುವ ಪ್ರಕರಣವೊಂದನ್ನು ದೇಶಭಕ್ತಿಯ ಕಾರಣಕ್ಕೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಬಹುತ್ವ ಭಾರತದ ಪ್ರಜೆಯಾಗಿದ್ದರಿಂದ, ಅವರ ಬದುಕು ನನ್ನ ಹೃದಯ ತಟ್ಟಿದ್ದರಿಂದ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಎಸ್ ಮೂರ್ತಿ
ಲೇಖಕರು, ವಿಧಾನಸಭೆ ಸಚಿವಾಲಯ ಮಾಜಿ ಕಾರ್ಯದರ್ಶಿ




