- ಬ್ರಾಂಡ್ ಬೆಂಗಳೂರು ಅನ್ನು ಬೆಟರ್ ಬೆಂಗಳೂರಾಗಿ ರೂಪಿಸಲು ಕ್ರಮ
- ಬೆಂಗಳೂರು ಶಾಸಕ, ಸಂಸದರ ಸಭೆ ಅಭಿಪ್ರಾಯ, ಸಲಹೆ ಪಡೆದ ಡಿಸಿಎಂ
ಬೆಂಗಳೂರು ಅಭಿವೃದ್ಧಿಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೂ ಒಳಗೊಂಡು ಪ್ರತ್ಯೇಕ ವಿಷಯಗಳ ಮೇಲೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು (ಜೂನ್5) ಹಮ್ಮಿಕೊಂಡಿದ್ದ ಬೆಂಗಳೂರು ಶಾಸಕ, ಸಂಸದರ ಸಭೆ ಬಳಿಕ ಮಾತನಾಡಿ ಅವರು ʼಬ್ರಾಂಡ್ ಬೆಂಗಳೂರುʼ ಅನ್ನು ʼಬೆಟರ್ ಬೆಂಗಳೂರಾಗಿʼ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇಂದಿನ ಸಭೆಯಲ್ಲಿ ನಗರಾಭಿವೃದ್ದಿ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಂದ ಸಲಹೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಯಿತು ಎಂದು ಡಿಕೆಶಿ ತಿಳಿಸಿದರು.
ಬೆಂಗಳೂರಿನ ಕುಡಿಯುವ ನೀರು, ಕಸ ನಿರ್ವಹಣೆ, ಟ್ರಾಫಿಕ್ ಮಾಸ್ಟರ್ ಪ್ಲಾನ್ ಬಗ್ಗೆ ಆರಂಭದಲ್ಲಿ ಚರ್ಚಿಸಿದ ಸಭೆ ಬಳಿಕ ಮಳೆಗಾಲದ ಸಂದರ್ಭದಲ್ಲಿ ತಲೆದೋರುವ ಮುಖ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಒತ್ತುವರಿ ಹಾಗೂ ರಾಜಕಾಲುವೆ ನಿರ್ವಹಣೆ ಕುರಿತು ಸಮಗ್ರವಾಗಿ ಸಮಾಲೋಚನೆ ನಡೆಸಿತು.
ಬೆಂಗಳೂರು ಅಭಿವೃದ್ದಿ ಸಲುವಾಗಿ ಎಸ್ ಎಂ ಕೃಷ್ಣ ಕಾಲದ ರೀತಿಯಲ್ಲಿ ಬೆಂಗಳೂರಿನ ಸ್ಟೇಕ್ ಹೋಲ್ಡರ್ ಗಳನ್ನು ಭೇಟಿ ಮಾಡಿ ವಿಷನ್ ಬೆಂಗಳೂರು ಮತ್ತು ಗ್ಲೋಬಲ್ ಬೆಂಗಳೂರು ಅಡ್ವೈಸರಿ ಕಮಿಟಿ ರಚಿಸಲು ಯೋಜಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಬಡಾವಣೆಗಳ ನಿರ್ವಹಣೆ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಎಂ ಸಭೆಗೆ ಮಾಹಿತಿ ನೀಡಿದರು.
ಅದರಂತೆ ವಾರ್ಡಿಗೊಂದು ಪ್ರತ್ಯೇಕ ಕಡತ ಮಾಡಿ ಲೆಕ್ಕಾಚಾರ ಇಡಬೇಕು, ವಾರ್ಡ್ ವಾರು ಅಭಿವೃದ್ಧಿ ಕಾರ್ಯಗಳ ಆರಂಭ, ಮಧ್ಯಂತರ ಮತ್ತು ಪೂರ್ಣಗೊಂಡ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಕಡತದಲ್ಲಿ ಮಂಡಿಸಬೇಕು, ಅಕೌಂಟಬಿಲಿಟಿ ಮತ್ತು ಟ್ರಾನ್ಸಫರೆನ್ಸಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಬೆಂಗಳೂರು ಶಾಸಕ ಸಂಸದರೊಂದಿಗೆ ಡಿಸಿಎಂ ಸಭೆ: ಒಂದು ಗಂಟೆ ತಡವಾಗಿದ್ದಕ್ಕೆ ಬಿಜೆಪಿ ಆಕ್ರೋಶ
ಕಸ ನಿರ್ವಹಣೆಯ ಲೆಕ್ಕ ಪಕ್ಕಾ ಇರಬೇಕು, ಎಲ್ಲಿಂದ ಎಲ್ಲಿಗೆ ಸಾಗಿಸಲಾಯಿತು ಎನ್ನುವುದು ಲೆಕ್ಕವಿರಬೇಕು, ಆ ಮೂಲಕ ಕಸದ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಕೈ ಜೋಡಿಸಬೇಕು, ಹೀಗಾದಲ್ಲಿ ಸ್ವಚ್ಛ ಬೆಂಗಳೂರಿನ ಕನಸು ನನಸಾಗಲಿದೆ ಎಂದು ಶಿವಕುಮಾರ್ ಹೇಳಿದರು.
ಒಂದೂವರೆ ಕೋಟಿ ಜನಸಂಖ್ಯೆ ಇರುವ ಈ ಬೆಂಗಳೂರು ಎಲ್ಲರಿಂದಲೂ ಬೆಳೆದಿದೆ. ಬೆಂಗಳೂರು ಇತಿಹಾಸವನ್ನು ಮರು ಸೃಷ್ಟಿಸುವ ಅಗತ್ಯವಿದೆ. ಮಳೆ ಬಂದ್ರೆ ಹೇಗೆ ನಿರ್ವಹಣೆ ಮಾಡಬೇಕು ಎಂಬುವುದರ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ.
ಹಾಗೆಯೇ ಮಳೆ ಬಂದ ಸಂದರ್ಭದಲ್ಲಿ ಬಾಟಲ್ ನೆಕ್ ಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು, ವಿಡಿಯೋ ಕ್ಯಾಮೆರಾಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಎಲ್ಲರಿಂದ ಬಂದಿರುವ ಸಲಹೆ ಸೂಚನೆಗಳನ್ನು ಪಡೆದು ಕಾಲಕಾಲಕ್ಕೆ ಸಭೆ ನಡೆಸಿ ಅವುಗಳ ಅನುಷ್ಠಾನ ಮಾಡಿ ನವ ಬೆಂಗಳೂರು ರೂಪಿಸಲಾಗುವುದು ಎಂದರು.




