ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ಮತ್ತು ಸಿನಿಮಾ ವಿವಾದದ ನಡುವೆಯೇ ಮೊದಲ ಬಾರಿಗೆ ನಟ-ರಾಜಕಾರಣಿ ವಿಜಯ್ ರ್ಯಾಲಿಯಲ್ಲಿ ಭಾಷಣ ಮಾಡಿದ್ದಾರೆ. “ಇದು ಬರೀ ಚುನಾವಣೆಯಲ್ಲ, ಪ್ರಜಾಸತ್ತಾತ್ಮಕ ಯುದ್ಧ” ಎಂದು ಹೇಳಿದ್ದಾರೆ. ಹಾಗೆಯೇ ಇದೇ ಸಂದರ್ಭದಲ್ಲಿ “ನಾನು ಒತ್ತಡಕ್ಕೆ ಮಣಿಯುವುದಿಲ್ಲ, ಬಾಗುವುದಿಲ್ಲ” ಎಂದು ಹೇಳಿದ್ದಾರೆ.
ತಮಿಳುನಾಡಿನ ಮಾಮಲ್ಲಪುರಂನಲ್ಲಿ 3,000 ಮಂದಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರು ಭಾಗಿಯಾಗಿದ್ದ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿದ ವಿಜಯ್, “ಇದು ಪ್ರಜಾಸತ್ತಾತ್ಮಕ ಯುದ್ಧ. ನೀವು ಈ ಯುದ್ಧವನ್ನು ಹೋರಾಡುವ ನನ್ನ ಕಮಾಂಡೋಗಳು” ಎಂದರು.
ಇದನ್ನು ಓದಿದ್ದೀರಾ? ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ
ಡಿಎಂಕೆ ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯನ್ನು ಗುರಿಯಾಗಿಸಿಕೊಂಡ ವಿಜಯ್, “ರಾಜಕೀಯದಲ್ಲಿರುವವರು ಅಣ್ಣಾ ಅವರನ್ನು ಮರೆತಿದ್ದಾರೆ, ಅವರ ಪಕ್ಷದ ಹೆಸರಿನಲ್ಲಿ ಮಾತ್ರ ಅಣ್ಣಾ ಇದ್ದಾರೆ” ಎಂದು ಹೇಳಿದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ರಾಜಕೀಯದ ಪ್ರಮುಖ ನಾಯಕ ಸಿಎನ್ ಅಣ್ಣಾದೊರೈ ಅವರನ್ನು ಉಲ್ಲೇಖಿಸಿ ವಿಜಯ್ ಈ ಹೇಳಿಕೆ ನೀಡಿದ್ದಾರೆ.
“ಮತಗಟ್ಟೆಗಳು ಅಧಿಕಾರದಲ್ಲಿರುವ ಪಕ್ಷಗಳಿಗೆ ನಕಲಿ ಮತ ಕೇಂದ್ರಗಳಾಗಿವೆ. ಪ್ರತಿಯೊಂದು ಮತವನ್ನು ಉಳಿಸಿ, ಎಲ್ಲರನ್ನೂ ಭೇಟಿ ಮಾಡಿ. ‘ದುಷ್ಟ ಶಕ್ತಿ’ (ಡಿಎಂಕೆ) ಮತ್ತು ‘ಭ್ರಷ್ಟ ಶಕ್ತಿ’ (ಎಐಎಡಿಎಂಕೆ) ಯನ್ನು ಎದುರಿಸಲು ಟಿವಿಕೆಗೆ ಮಾತ್ರ ಧೈರ್ಯವಿದೆ” ಎಂದು ವಿಜಯ್ ಹೇಳಿದರು.
ಇದನ್ನು ಓದಿದ್ದೀರಾ? ತಮಿಳುನಾಡು ಚುನಾವಣೆ | ತಾರಕಕ್ಕೇರಿದ ‘ಜನ ನಾಯಗನ್ – ಪರಾಶಕ್ತಿ’ ಫಿಲ್ಮಿ ಫೈಟ್
ಟಿವಿಕೆ ನಾಳೆ ರಾಜ್ಯಾದ್ಯಂತ ಪ್ರಚಾರ ಪ್ರವಾಸವನ್ನು ಪ್ರಾರಂಭಿಸಲಿದೆ. ರಾಜ್ಯ ಚುನಾವಣೆಗೆ ಮುಂಚಿತವಾಗಿ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಟಿವಿಕೆ ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದೆ. ಟಿವಿಕೆ ಇನ್ನೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಘೋಷಿಸಿಲ್ಲ.
ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ 51 ವರ್ಷದ ನಟ ವಿಜಯ್, ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ತಮಿಳುನಾಡಿನ ಕರೂರಿನಲ್ಲಿ ವಿಜಯ್ ಭಾಷಣ ಮಾಡಿದ ರ್ಯಾಲಿಯಲ್ಲಿ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. ಅದರ ತನಿಖೆ ನಡೆಯುತ್ತಿದೆ. ದೆಹಲಿಯಲ್ಲಿ ಎರಡು ಬಾರಿ ವಿಚಾರಣೆ ನಡೆದಿದೆ. ಈ ನಡುವೆ ವಿಜಯ್ ಅವರ ‘ಜನ ನಾಯಗನ್’ ಚಿತ್ರವನ್ನು ಎರಡು ಬಾರಿ ಸೆನ್ಸಾರ್ ಮಂಡಳಿಯು ನಿರ್ಬಂಧಿಸಿದ್ದು, ಸದ್ಯ ಈ ಸಿನಿಮಾವು ಸುದ್ದಿಯಲ್ಲಿದೆ. ಬಿಡುಗಡೆಗೆ ಅವಕಾಶ ನೀಡುವಂತೆ ನಟ ನ್ಯಾಯಾಲಯದ ಮೊರೆ ಹೋಗಿದ್ದಾರೆ.





