ಸರ್ಕಾರದ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಹೊರಗುತ್ತಿಗೆ ದೊಡ್ಡ ದಂಧೆಯಾಗಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹಲವು ಇಲಾಖೆಗಳಲ್ಲಿ ಅಂದಾಜು 2 ಲಕ್ಷ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಅವರ ಸಂಬಂಧಿಕರೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ನಿವೃತ್ತಿಯಾದ ಸರ್ಕಾರಿ ನೌಕರನೊಬ್ಬ ಪ್ರಸ್ತುತ ಸಚಿವರೊಬ್ಬರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕವಾಗಿದ್ದಾನೆ. ಪಿಂಚಣಿ 80 ಸಾವಿರ, ಮಾಸಿಕ ವೇತನ 9 ಸಾವಿರ ಹಾಗೂ ವಾಹನ ಭತ್ಯೆ 45 ಸಾವಿರ ಸೇರಿದಂತೆ ತಿಂಗಳಿಗೆ 2 ಲಕ್ಷದ 5 ಸಾವಿರ ರೂ. ಪಡೆದುಕೊಳ್ಳುತ್ತಾನೆ. ಇದು ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಹೊರಗುತ್ತಿಗೆಯನ್ನು ನಾವು ಬೇರೊಂದು ಏಜೆನ್ಸಿಗೆ ನೀಡುತ್ತೇವೆ. ಆ ಏಜೆನ್ಸಿಯು ಒಬ್ಬ ನೌಕರನಿಗೆ ತಿಂಗಳಿಗೆ 15 ರಿಂದ 20 ಸಾವಿರ ರೂ. ಸರ್ಕಾರದಿಂದ ಪಡೆದುಕೊಳ್ಳುತ್ತದೆ. ಆದರೆ, ಈ ಏಜೆನ್ಸಿ ನೌಕರರಿಗೆ ತಿಂಗಳಿಗೆ 8 ರಿಂದ 10 ಸಾವಿರ ರೂ. ಮಾತ್ರವೇ ಕೊಡುತ್ತದೆ. ಶಾಸಕರ ಭವನದಲ್ಲಿ ಲಿಫ್ಟ್ ಓಡಿಸುವ ವಿಕಲಚೇತನನೊಬ್ಬನಿಗೆ ಸರ್ಕಾರದಿಂದ 15 ಸಾವಿರ ರೂ. ಕೊಡಲಾಗುತ್ತಿದೆ. ಆದರೆ, ಏಜೆನ್ಸಿಯವರು ಕೇವಲ 6 ಸಾವಿರ ರೂ. ಕೊಡುತ್ತಾರೆ. ಈ ದಂಧೆಗೆ ಮೊದಲು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನತೆಗೆ ಒಂದಿಲ್ಲೊಂದು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ | ಕಾಗದ ಹರಿದು ಸ್ಪೀಕರ್ ಪೀಠದ ಮೇಲೆ ಎಸೆದ ಬಿಜೆಪಿ ಶಾಸಕರು
‘ವಿಧಾನ ಪರಿಷತ್ ನಡವಳಿಕೆಗಳ ಬಗ್ಗೆ ಬೇಸರ‘
ಇತ್ತೀಚೆಗೆ ವಿಧಾನ ಪರಿಷತ್ನಲ್ಲಿ ನಡೆಯುತ್ತಿರುವ ನಡವಳಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಮೊದಲು ನಾನು ಶಾಸಕನಾಗಿ ಬಂದ ಮೇಲೆ ಸದನದಲ್ಲಿ ಯಾರು, ಏನು ಮಾತನಾಡುತ್ತಿದ್ದಾರೆಂದು ದಿನಪೂರ್ತಿ ಆಲಿಸುತ್ತಿದ್ದೆವು. ಅಪ್ಪಿತಪ್ಪಿಯೂ ಯಾರಾದರೂ ಹಿರಿಯರು, ಮಾತನಾಡುತ್ತಿದ್ದರೆ ಮಧ್ಯಪ್ರವೇಶಿಸುತ್ತಿರಲಿಲ್ಲ, ಏಕೆಂದರೆ ನಮಗೆ ವಿಷಯ ತಿಳಿದಿಲ್ಲವೆಂದರೆ ಸದಸ್ಯರ ಮುಂದೆ ಮುಜುಗರವಾಗಬಹುದೆಂದು ಮೌನಕ್ಕೆ ಶರಣಾಗುತ್ತಿದ್ದೆವು. ಆದರೆ, ಈಗ ಗೊತ್ತೂ ಇಲ್ಲ, ಗುರಿಯೂ ಇಲ್ಲ. ಯಾರು, ಏನು ಮಾತನಾಡುತ್ತಿದ್ದಾರೆಂಬುದು ಅರ್ಥವಾಗುವುದಿಲ್ಲ. ಸುದ್ದಿ ಮಾಧ್ಯಮದವರೂ ಇದನ್ನು ಬೊಟ್ಟು ಮಾಡುವುದಿಲ್ಲ. ಅವರಿಗೂ ಕಿತ್ತಾಟ, ಟೀಕೆ, ಟಿಪ್ಪಣಿಯೇ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉನ್ನತ ಸ್ಥಾನದಲ್ಲಿರುವ ಪ್ರಧಾನಿಗಳೇ ವಿರೋಧಪಕ್ಷಗಳ ಸಭೆಯನ್ನು ಭ್ರಷ್ಟರ ಸಂತೆ ಎಂದು ಕರೆಯುತ್ತಾರೆ. ಪ್ರತಿಪಕ್ಷಗಳು ಬಜೆಟ್ ಅನ್ನು ಮನಸೋ ಇಚ್ಛೆ ಟೀಕಿಸುತ್ತಾರೆ. ಇದು ಜನರಿಂದ ಜನರಿಗಾಗಿ ಜನರಿಗೋಸ್ಕರ ಮಾಡಿರುವ ಬಜೆಟ್ ಎಂಬುದು ತಿಳಿಯುವುದಿಲ್ಲವೇ ಎಂದರು.




