ಸುಪ್ರೀಂ ಕೋರ್ಟ್ನಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಮೇಲೆ ಅಪರಿಚಿತ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿದೆ. ಮಂಗಳವಾರ ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಈ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲ ನೆಟ್ಟಿಗರು ಮಾಜಿ ಸಿಜೆಐ ಮೇಲೆ ಶೂ ಎಸೆದ ಕಾರಣಕ್ಕೆ ಈಗ ಚಪ್ಪಲಿಯಿಂದ ಹಲ್ಲೆ ನಡೆದಿರಬಹುದು ಎಂದು ಹೇಳಿದರೆ, ಇನ್ನು ಕೆಲವರು ಬೇರೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದು ಚಪ್ಪಲಿಯಿಂದ ಥಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಸಿಜೆಐಗೆ ಶೂ ಎಸೆದ ವಕೀಲನನ್ನು ಶ್ಲಾಘಿಸಿದ ಬಿಜೆಪಿ ಮುಖಂಡ ಭಾಸ್ಕರ ರಾವ್; ಎಲ್ಲಡೆ ಆಕ್ರೋಶ
ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ಕಿಶೋರ್, “ಬಹುಶಃ ಸುಮಾರು 35 ಅಥವಾ 40 ವರ್ಷ ವಯಸ್ಸಿನ ಯುವ ವಕೀಲರೊಬ್ಬರು ತಮ್ಮ ಚಪ್ಪಲಿಯಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ನಾವು ಅಲ್ಲಿಂದ ಹೊರಟೆವು. ಸಿಜೆಐ ಮೇಲೆ ಶೂ ಎಸೆದಿದ್ದಕ್ಕಾಗಿ ನನ್ನನ್ನು ಶಿಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು. ಅವರು ದಲಿತರು ಮತ್ತು ಅದಕ್ಕಾಗಿಯೇ ನನ್ನ ಮೇಲೆ ಚಪ್ಪಲಿ ಎಸೆದರು. ನಾವು ‘ಸನಾತನ’ ಘೋಷಣೆಗಳನ್ನು ಕೂಗಿದೆವು” ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ಸಂಬಂಧ ಕಿಶೋರ್ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ.
ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ನ ನ್ಯಾಯಾಲಯ ಕೊಠಡಿ ಮಾಜಿ ಸಿಜೆಐ ಗವಾಯಿ ಮೇಲೆ 71 ವರ್ಷದ ಕಿಶೋರ್ ಶೂ ಎಸೆದಿದ್ದು ಈ ಸಂಬಂಧ ಕಿಶೋರ್ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಕಿಶೋರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಶೂ ಎಸೆಯುವಾಗ, ಆರೋಪಿ “ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ” ಎಂಬ ಘೋಷಣೆಗಳನ್ನು ಕೂಗಿದ್ದ.
ಆದರೆ ಘಟನೆಯಿಂದ ವಿಚಲಿತರಾಗದ ಸಿಜೆಐ ಗವಾಯಿ, “ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಹೇಳಿ ವಿಚಾರಣೆಯನ್ನು ಮುಂದುವರೆಸಿದ್ದರು. ಈ ಘಟನೆಯನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಖಂಡಿಸಿತ್ತು. ವಕೀಲನ ಪ್ರವೇಶ ಕಾರ್ಡ್ ಅನ್ನು ರದ್ದುಗೊಳಿಸಿತು.





