ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮಾಜಿ ಕೇಂದ್ರ ಕೇಂದ್ರ ಸಚಿವ ಶಕೀಲ್ ಅಹ್ಮದ್ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.
ಅಹ್ಮದ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೊರೆಯುವುದಾಗಿ ಹೇಳಿದ್ದಾರೆ. “ನಾನು ರಾಜೀನಾಮೆ ನೀಡಲು ಮೊದಲೇ ನಿರ್ಧರಿಸಿದ್ದೆ. ಆದರೆ ಮತದಾನ ಮುಗಿದ ಬಳಿಕ ಘೋಷಿಸಿದ್ದೇನೆ. ನನ್ನ ಕಾರಣದಿಂದಾಗಿ ಪಕ್ಷ ಯಾವುದೇ ಮತಗಳನ್ನು ಕಳೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಚುನಾವಣೆ ಮುಗಿಯುವರೆಗೂ ಕಾದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ನ.6ಕ್ಕೆ ಮೊದಲ ಹಂತದ ಮತದಾನ; ಕಣದಲ್ಲಿರುವ ಘಟಾನುಘಟಿಗಳು ಇವರು!
ಐದು ಬಾರಿ ಶಾಸಕ ಮತ್ತು ಸಂಸದರಾಗಿರುವ ಅಹ್ಮದ್, ಪಕ್ಷದ ಸಿದ್ಧಾಂತಕ್ಕೆ ಯಾವುದೇ ವಿರೋಧವಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. “ನಾನು ರಾಜೀನಾಮೆ ನೀಡಿದ ಮಾತ್ರಕ್ಕೆ ಬೇರೆ ಪಕ್ಷ ಅಥವಾ ಗುಂಪಿಗೆ ಸೇರುತ್ತೇನೆ ಎಂದರ್ಥವಲ್ಲ. ಆ ರೀತಿಯ ಉದ್ದೇಶ ನಾನು ಹೊಂದಿಲ್ಲ. ಕಾಂಗ್ರೆಸ್ ನೀತಿ, ತತ್ವಗಳ ಮೇಲೆ ನನಗೆ ಅಚಲ ನಂಬಿಕೆಯಿದೆ. ಜೀವನದುದ್ದಕ್ಕೂ ಕಾಂಗ್ರೆಸ್ ಮೌಲ್ಯಗಳ ಹಿತೈಷಿ, ಬೆಂಬಲಿಗನಾಗಿರುತ್ತೇನೆ. ನನ್ನ ಕೊನೆಯ ಮತವೂ ಕಾಂಗ್ರೆಸ್ ಪರವಾಗಿಯೇ ಇರುತ್ತದೆ” ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಹಾಗೆಯೇ ತಮ್ಮ ತಾತ ಅಹ್ಮದ್ ಗಫೂರ್ 1937ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವುದು, ಅವರ ತಂದೆ ಶಕುರ್ ಅಹ್ಮದ್ 1952 ಮತ್ತು 1977ರ ನಡುವೆ ಐದು ಅವಧಿಗೆ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸಿರುವ ತಮ್ಮ ಕುಟುಂಬದ ಇತಿಹಾಸವನ್ನೂ ನೆನೆಪಿಸಿಕೊಂಡಿದ್ದಾರೆ.
ಇನ್ನು ಈ ಹಿಂದೆ 2023ರ ಏಪ್ರಿಲ್ 16ರಂದು ಅಹ್ಮದ್ ಕಾಂಗ್ರೆಸ್ಗೆ ಪತ್ರ ಬರೆದಿದ್ದರು. ತಾವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ಕೆನಡಾದಲ್ಲಿ ವಾಸವಿರುವ ತಮ್ಮ ಪುತ್ರರಿಗೂ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ ಎಂದು ಹೇಳಿದ್ದರು.





