ದಿಢೀರ್ ತಪಾಸಣೆ ನಡೆಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಜಮ್ಮುವಿನಲ್ಲಿ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿದೆ. ಶಿಕ್ಷಣ ಸಂಸ್ಥೆಯು ನೀಟ್ ರ್ಯಾಂಕಿಂಗ್ ಆಧಾರದಲ್ಲಿ ಬಿಡುಗಡೆ ಮಾಡಿದ ವಿದ್ಯಾರ್ಥಿಗಳ ಪ್ರವೇಶ ಪಟ್ಟಿಯಲ್ಲಿ ಶೇ.90ರಷ್ಟು ಮುಸ್ಲಿಮರೇ ಇದ್ದಾರೆ ಎಂದು ಆರ್ಎಸ್ಎಸ್ಗೆ ಸೇರಿದ ಸಂಘಟನೆಗಳು ತಗಾದೆ ತೆಗೆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ವೈದ್ಯಕೀಯ ಸಂಸ್ಥೆ ಕನಿಷ್ಠ ಮಾನದಂಡವನ್ನೂ ಪೂರೈಸುತ್ತಿಲ್ಲ ಎಂದು ಹೇಳಿ ಈಗ ದಿಢೀರ್ ಆಗಿ ಮಾನ್ಯತೆಯನ್ನೇ ರದ್ದು ಮಾಡಲಾಗಿದೆ.
ಈ ಸಂಬಂಧ ಜನವರಿ 6ರಂದು ಆದೇಶ ಹೊರಡಿಸಲಾಗಿದೆ. ಮೂಲಸೌಕರ್ಯ, ಅಧ್ಯಾಪಕ ಕೊರತೆ ಮತ್ತು ಕ್ಲಿನಿಕಲ್ ಸೌಲಭ್ಯಗಳಲ್ಲಿ ಗಂಭೀರ ನ್ಯೂನತೆಯಿದೆ ಎಂದು ಹೇಳಿ ಸಂಸ್ಥೆಯು MBBS ಕೋರ್ಸ್ ಮುಂದುವರಿಸುವುದಕ್ಕೆ ಅನುಮತಿಯನ್ನು ನಿರಾಕರಿಸಿದೆ.
ಇದನ್ನು ಓದಿದ್ದೀರಾ? ವೈಷ್ಣೋದೇವಿ ವೈದ್ಯಕೀಯ ಕಾಲೇಜು | ಶೇ.90 ಮುಸ್ಲಿಂ ದಾಖಲಾತಿ; ‘ನೀಟ್’ ಪಟ್ಟಿ ರದ್ದು ಮಾಡಲು ಆರೆಸ್ಸೆಸ್ ಪರಿವಾರ ಆಗ್ರಹ
ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ, 2025–26ರ ಬ್ಯಾಚ್ನಲ್ಲಿ ಪ್ರವೇಶ ಪಡೆದ ಎಲ್ಲಾ 50 MBBS ವಿದ್ಯಾರ್ಥಿಗಳನ್ನು ಜಮ್ಮು ಮತ್ತು ಕಾಶ್ಮೀರದ ಇತರ ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳ ಹೆಚ್ಚುವರಿ ಸೀಟುಗಳಾಗಿ ಸ್ಥಳಾಂತರಿಸಬೇಕೆಂದು ಎನ್ಎಂಸಿ ನಿರ್ದೇಶಿಸಿದೆ. ಯಾವುದೇ ವಿದ್ಯಾರ್ಥಿಗೆ ತೊಂದರೆ ಆಗದಂತೆ ಸುಗಮ ವರ್ಗಾವಣೆ ನಡೆಸಲು ಕೇಂದ್ರಾಡಳಿತ ಪ್ರದೇಶದ ಕೌನ್ಸೆಲಿಂಗ್ ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದೇ ಕಾಲೇಜಿನ ವಿರುದ್ಧವಾಗಿ ಇತ್ತೀಚೆಗೆ ಸಂಘಪರಿವಾರ ಪ್ರತಿಭಟನೆ ನಡೆಸಿತ್ತು. ನೀಟ್ ರ್ಯಾಂಕಿಂಗ್ ಆಧಾರದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಶೇ.90ರಷ್ಟು ಕಾಶ್ಮೀರದ ಮುಸ್ಲಿಮರು ಇರುವುದನ್ನು ವಿರೋಧಿಸಿತ್ತು. ನೀಟ್ ಪಟ್ಟಿ ಬದಿಗೊತ್ತಿ, ಹಿಂದೂಗಳಿಗೆ ದಾಖಲಾತಿ ನೀಡಬೇಕು ಎಂದು ಕೋಮು ರಾಜಕಾರಣಕ್ಕೆ ಇಳಿದಿತ್ತು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಬಜರಂಗ ದಳ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಿದ ಉಧಂಪುರದ ಬಿಜೆಪಿ ಶಾಸಕ ಆರ್ಎಸ್ ಪಠಾನಿಯಾ, “ವೈಷ್ಣೋದೇವಿ ದೇಗುಲಕ್ಕೆ ನೀಡುವ ದೇಣಿಗೆಗಳಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಪ್ರಾಬಲ್ಯವಿದೆ. ಹಿಂದೂಗಳಿಗೆ ಇಲ್ಲಿ ಮೀಸಲಾತಿ ನೀಡಬೇಕು” ಎಂದು ವಾದಿಸಿದ್ದರು. ಆದರೆ ವಾಸ್ತವದಲ್ಲಿ ಈ ವೈದ್ಯಕೀಯ ಕಾಲೇಜನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ವರ್ಗೀಕರಿಸಿಯೇ ಇಲ್ಲ! ಅಲ್ಪಸಂಖ್ಯಾತ ಸಂಸ್ಥೆ ಎಂದು ವರ್ಗೀಕರಿಸಿದ್ದರೆ ಮಾತ್ರ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾತಿ ನೀಡುವ ಅವಕಾಶವಿರುತ್ತದೆ.
ಬಿಜೆಪಿ, ಆರ್ಎಸ್ಎಸ್ನ ಕೋಮು ರಾಜಕೀಯ ನಡೆಸಿದ ಬೆನ್ನಲ್ಲೇ ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅದೇ ಕಾಲೇಜಿಗೆ ದಿಢೀರ್ ಆಗಿ ಭೇಟಿ ನೀಡಿ ತಪಾಸಣೆ ನಡೆಸಿ ಮಾನ್ಯತೆ ರದ್ದುಗೊಳಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.





