“ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯುತ್ತದೆಯೋ ಅಥವಾ ಸರ್ವಾಧಿಕಾರ ಬರುತ್ತದೆಯೋ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ”
ಸಂವಿಧಾನ ವಿರೋಧಿಗಳನ್ನು ಮಣಿಸಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ’ದೇಶ ಉಳಿಸಿ ಸಂಕಲ್ಪ ಯಾತ್ರೆ’ ಸೋಮವಾರ ಆರಂಭವಾಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ಚಾಲನೆ ದೊರೆತ ಯಾತ್ರೆಯು ಮೂರು ಗುಂಪುಗಳಾಗಿ ಸಾಗಲಿದ್ದು, ಅಂತಿಮವಾಗಿ ಬೆಳಗಾವಿಯಲ್ಲಿ ಏಪ್ರಿಲ್ 8ರಂದು ಸಮಾವೇಶ ನಡೆಸುವ ಮೂಲಕ ಸಮಾಪ್ತಿಯಾಗಲಿದೆ.
ಯಾತ್ರೆಗೆ ಚಾಲನೆ ನೀಡಿದ ವೇಳೆ ಮಾತನಾಡಿದ ಹಿರಿಯ ಹೋರಾಟಗಾರ ನೂರ್ ಶ್ರೀಧರ್ ಅವರು, “ಸಂವಿಧಾನ ವಿರೋಧಿ ಶಕ್ತಿಗಳನ್ನು ಈ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಸಂಕಲ್ಪ. ಎಲ್ಲ ಜೀವಪರ ಶಕ್ತಿಗಳು ಸೇರಿ ಈ ತೀರ್ಮಾನ ಕೈಗೊಂಡಿದ್ದೇವೆ. ಈಗ ನಡೆಯುತ್ತಿರುವುದು ಮುಂದೆ ನಮ್ಮನ್ನು ಯಾರು ಆಳುತ್ತಾರೆಂಬ ಚುನಾವಣೆಯಂತೂ ಅಲ್ಲ. ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯುತ್ತದೆಯೋ ಅಥವಾ ಸರ್ವಾಧಿಕಾರ ಬರುತ್ತದೆಯೋ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ. ಈ ಶಾಂತಿಯ ತೋಟವನ್ನು ಹಾಳು ಮಾಡುವುದಕ್ಕೆ ನಾವು ಅವಕಾಶ ಕೊಡಬಾರದು. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.

“ಮೂರು ಮಾರ್ಗಗಳಲ್ಲಿ ಈ ಯಾತ್ರೆ ಹೊರಡಲಿದೆ. ಒಂದನೇ ಮಾರ್ಗ- ಬೆಂಗಳೂರಿನಿಂದ ಶುರುವಾಗಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ಭಟ್ಕಳ, ಕಾರವಾರ ಮೂಲಕ ಬೆಳಗಾವಿ ಸೇರಲಿದೆ. ಎರಡನೇ ಮಾರ್ಗ- ಬೆಂಗಳೂರಿನಿಂದ ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರ, ಹುಬ್ಬಳ್ಳಿ, ಧಾರವಾಡ, ಚಿಕ್ಕೋಡಿ ಮೂಲಕ ಬೆಳಗಾವಿ ತಲುಪುತ್ತದೆ. ಮೂರನೇ ಮಾರ್ಗ- ಬೆಂಗಳೂರಿನಿಂದ ಶುರುವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಕೊಪ್ಪಳ, ವಿಜಯನಗರ, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ ಮೂಲಕ ಬೆಳಗಾವಿ ಸೇರುತ್ತದೆ. ಏಪ್ರಿಲ್ 8ರಂದು ಬೆಳಗಾವಿಯಲ್ಲಿ ರ್ಯಾಲಿ ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಮಾವೇಶ ನಡೆಯುತ್ತದೆ” ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಮುಖಂಡ ಎಣ್ಣೆಗೆರೆ ವೆಂಕಟರಾಮಯ್ಯ ಅವರು ಮಾತನಾಡಿ, “ಇಂದು ಜನರಿಗೆ ಅವಶ್ಯಕತೆ ಇರುವುದು ಉದ್ಯೋಗ, ನೆಮ್ಮದಿ, ಶಾಂತಿ, ಸೌಹಾರ್ದಯುತ ಜೀವನ. ಅದನ್ನು ಬಿಟ್ಟು ಇಲ್ಲಿ ಏಕಪಾತ್ರಭಿನಯ ನಡೆಯುತ್ತಿದೆ. ಜನರಿಗೆ ಕೊಟ್ಟ ಭರವಸೆಗಳು ಹುಸಿಯಾಗಿವೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕಿದೆ” ಎಂದು ಆಗ್ರಹಿಸಿದರು.

ಶಿಕ್ಷಣ ತಜ್ಞ ಶ್ರೀಪಾದ ಭಟ್ ಅವರು ಮಾತನಾಡಿ, “ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಕೊಟ್ಟ ಕರೆಯಂತೆ ಚರ್ಚೆಗಳಾಗಿ ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಮಾಡು ಇಲ್ಲವೇ ಮಡಿ ಎಂಬುದು ನಮ್ಮ ಘೋಷವಾಕ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಉಳಿಯುವುದೇ ಕಷ್ಟವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯ್ಕ್ ಅವರು ಮಾತನಾಡಿ, “ದೇಶವನ್ನು ನಾಶ ಮಾಡುತ್ತಿರುವವರನ್ನು ಸೋಲಿಸಬೇಕಿದೆ. ಹಿಂದೂ, ಹಿಂದೂ ಎಂದು ಬಡಿದುಕೊಳ್ಳುತ್ತಿರುವ ಕೆಲವೇ ಕೆಲವು ಜನದ್ರೋಹಿ ಸಂಘಟನೆಗಳು ಇಂದು ದೇಶವನ್ನು ಛಿದ್ರ ಛಿದ್ರ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬ್ಯಾಂಕ್ ಖಾತೆಯಲ್ಲಿ ನಾವು ಹಣ ಇಟ್ಟರೆ ನಮ್ಮನ್ನು ಕೇಳದೆ ಕಟ್ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ಗಳೇ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿವೆ. ಇಲ್ಲಿ ಭ್ರಷ್ಟನಾಗಿದ್ದವನು, ಬಿಜೆಪಿಗೆ ಸೇರಿದರೆ ಸಾಕು ಶುದ್ಧವಾಗುತ್ತಿದ್ದಾನೆ. ಯಾರು ಕೇಳುತ್ತಿಲ್ಲ. ನಾವು ಮಾಡುತ್ತಿರುವ ಈ ಹೋರಾಟ ಸಾಲುತ್ತಿಲ್ಲ. ಅವರ ಮನೆಮನೆಗೆ ನುಗ್ಗಿ ಹಿಡಿದುಕೊಂಡು ಬಂದು ಪಾಠ ಹೇಳುವ ಕಾಲ ಬಂದಿದೆ. ನಾನೇ ಆ ಕೆಲಸವನ್ನು ಮಾಡುತ್ತೇವೆ” ಎಂದು ಗುಡುಗಿದರು.
ಹಿರಿಯ ವಿದ್ವಾಂಸ ಡಾ.ಜಿ.ರಾಮಕೃಷ್ಣ ಅವರು ಮಾತನಾಡಿ, “ದಕ್ಷಿಣದ ರಾಜ್ಯಗಳು ದೇಶಕ್ಕೆ ಕಂಟಕಪ್ರಾಯವಾಗಿವೆ, ಕಳಂಕ ತರುತ್ತಿವೆ ಎನ್ನುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೇಳಿದರೆ ಕಳಂಕ, ಕಂಟಕ ಎನ್ನುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸಲು ಹೊರಟಿರುವ ಸ್ನೇಹಿತರಿಗೆ ಶುಭವಾಗಲಿ” ಎಂದು ಆಶಿಸಿದರು.
“ನಮ್ಮ ಸಂವಿಧಾನವನ್ನು ಇಲ್ಲವಾಗಿಸುವುದೇ ಅವರ ಗುರಿಯಾಗಿದೆ. ಶ್ರೇಣೀಕೃತ ಸಮಾಜವನ್ನು ಪುನರಾವರ್ತನೆ ಮಾಡುವುದೇ ಅವರ ಧ್ಯೇಯ. ಮನುಸ್ಮೃತಿ ಇರುವಾಗ ಸಂವಿಧಾನ ಏಕೆ ಬೇಕು ಎಂದು ಕೇಳುತ್ತಿದ್ದಾರೆ” ಎಂದು ಎಚ್ಚರಿಸಿದರು.

ಯಾತ್ರೆಯ ಸಂಯೋಜಕ ನಾಗೇಶ್ ಅರಳಕುಪ್ಪೆ ಅವರು ಮಾತನಾಡಿ, “ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರ ನಾಶ ಮಾಡುತ್ತಾ ಬಂದಿದ್ದಾರೆ. ಎಲೆಕ್ಷನ್ ಕಮಿಷನ್, ಆರ್ಬಿಐ, ಇಡಿ, ಐಟಿ ಎಲ್ಲದರ ದುರುಪಯೋಗ ನಡೆಯುತ್ತಿದೆ. ಆರ್ಟಿಐ ಕಾಯ್ದೆಯನ್ನು ದುರ್ಬಲಗೊಳಿಸಿದ್ದಾರೆ. ನಿರುದ್ಯೋಗ ಹೆಚ್ಚಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಅವರು ಮಾತನಾಡಿ, “ಭಾರತ ದೇಶದ ಪ್ರಜೆಗಳಿಗೆ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಕುವೆಂಪು ಪ್ರಜ್ಞೆ ಇದೆ. ಕೋಮುವಾದಿಗಳ ವಿರುದ್ಧ ಜನರನ್ನು ಎಚ್ಚರಿಸಬೇಕಿದೆ” ಎಂದು ತಿಳಿಸಿದರು.
“ದೇವೇಗೌಡರ ಬಗ್ಗೆ ಬಹಳ ಬೇಸರವಿದೆ. ಅವರನ್ನು ನಿದ್ದೆಗೌಡ, ಮುದ್ದೇಗೌಡ ಎಂದು ಹೀಯಾಳಿಸುತ್ತಿದ್ದರು, ಕುಮಾರಸ್ವಾಮಿಯವರನ್ನು ಕರಿ ಇಡ್ಲಿ ಎಂದು ನಿಂದಿಸುತ್ತಿದ್ದರು. ದುರಾದೃಷ್ಟವಶಾತ್ ನಿಂದಿಸುತ್ತಿದ್ದವರ ಜೊತೆಯಲ್ಲಿ ಇವರು ಸೇರಿಕೊಂಡಿದ್ದಾರೆ. ಹತ್ತು ಸಾವಿರ ಜನರ ಹೃದಯಗಳಿಗೆ ಸರ್ಜರಿ ಮಾಡಿದ ಮಂಜುನಾಥ್ ಅವರು ಕೋಮುವಾದಿ ಪಕ್ಷಕ್ಕೆ ಹೋಗಿದ್ದಾರೆ. ನಾನು ಒಬ್ಬ ಮೇಷ್ಟ್ರಾಗಿ ಹತ್ತು ಸಾವಿರ ಮೇಷ್ಟ್ರುಗಳ ಕೆಲಸ ಖಾಯಂ ಆಗಲು ಹೋರಾಟ ಮಾಡಿದ್ದೇನೆ. ಈ ಕುಟುಂಬಗಳು ನಮ್ಮಂಥವರ ಹೋರಾಟದಿಂದ ನೆಮ್ಮದಿಯಾಗಿವೆ ಎಂದು ನಾನು ಕೋಮುವಾದಿ ಪಕ್ಷಕ್ಕೆ ಸೇರಿಕೊಳ್ಳಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಸಂವಿಧಾನದ ಪೀಠಿಕೆಯ ಫೋಟೋ, ಭಾರತದ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹೋರಾಟಗಾರರಿಗೆ ಹಸ್ತಾಂತರಿಸುವ ಮೂಲಕ ಯಾತ್ರೆಯನ್ನು ಆರಂಭಿಸಲಾಯಿತು.
ರೈತ ಮುಖಂಡ ವೀರಸಂಗಯ್ಯ, ಹೋರಾಟಗಾರ್ತಿ ತಾರಾ ರಾವ್, ಡಾ. ಬಿ. ಆರ್. ಮಂಜುನಾಥ್, ಜನಶಕ್ತಿಯ ಗೌರಿ, ರವಿ, ಎಎಪಿ ಮುಖಂಡ ಡಾ.ರಮೇಶ್ ಬೆಲ್ಲಂಕೊಂಡ, ಜಾಗೃತ ಕರ್ನಾಟಕ ಸಂಚಾಲಕ ಬಿ.ಸಿ.ಬಸವರಾಜು, ಆರ್ಎಸ್ಎಸ್ ಮಾಜಿ ಮುಖಂಡ ಹನುಮೇಗೌಡ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಯು.ಎಚ್.ಉಮರ್, ಜಮಾತೇ ಇಸ್ಲಾಮೀ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಕನ್ನಿ, ಚಿಂತಕ ಶಿವಸುಂದರ್ ಮೊದಲಾದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.





