ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ ಎಂದು ಹಿಜಾಬ್ ವಿವಾದದ ಸಂದರ್ಭದಲ್ಲಿ ಹಿಜಾಬ್ಗಾಗಿ ಹೋರಾಡಿ ಸಂಚಲನ ಸೃಷ್ಟಿಸಿದ್ದ ಮುಸ್ಲಿಂ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಹೇಳಿದ್ದಾರೆ.
ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ. ಈ ವಿಚಾರವು ಸದ್ಯ ರಾಜಕೀಯ ಸಂಚಲನ ಮೂಡಿಸಿದೆ. ಬ್ರಾಹ್ಮಣ ಸಮಾಜದ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಂದು ನಮ್ಮನ್ನು ಹೊರದಬ್ಬಿದ್ರಿ, ಇಂದು ಬಿಜೆಪಿ ನಿಮ್ಮನ್ನು ಹೊರದಬ್ಬಿದೆ; ರಘುಪತಿ ಭಟ್ಗೆ ಹಿಜಾಬ್ ಸಂತ್ರಸ್ತ ವಿದ್ಯಾರ್ಥಿನಿ ಟಾಂಗ್
ಈ ಎಲ್ಲಾ ಬೆಳವಣಿಗೆ ನಡುವೆ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನಿವಾರ ವಿವಾದ ಮತ್ತು ಹಿಜಾಬ್ ವಿವಾದ ಎರಡನ್ನೂ ಉಲ್ಲೇಖಿಸಿದ್ದಾರೆ.
“ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಮತ್ಯಾಕೆ ತಾರತಮ್ಯ, ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ. ಇಲ್ಲಿ ಜನಿವಾರವನ್ನು ತಡೆದ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡುತ್ತಾರೆ. ಹಿಜಾಬಿಗಳಿಗೆ ಕಾಲೇಜು ಗೇಟ್ ಬಂದ್ ಮಾಡಿದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬಹಿಷ್ಕರಿಸಲ್ಪಟ್ಟ ಬ್ರಾಹ್ಮಣನ ನೋವು ಮತ್ತು ಹಿಜಾಬ್ ಕಾರಣ ಪರೀಕ್ಷೆ ಬಹಿಷ್ಕಾರಕ್ಕೊಳಗಾದ ಮುಸ್ಲಿಂ ಹೆಣ್ಮಕ್ಕಳ ನೋವು ಒಂದೇ ಅಲ್ಲವೇ? 1/n #Hijab #Janivara
— Aliya Assadi (@Aliyassadi) April 20, 2025
“ಬ್ರಾಹ್ಮಣ ವಿದ್ಯಾರ್ಥಿಗೆ ಉಚಿತ ಇಂಜಿನಿಯರ್ ಸೀಟ್ ನೀಡುತ್ತೀರಿ, ನಮ್ಮನ್ನು ಇದುವರೆಗೂ ಪರೀಕ್ಷೆ ಬರೆದಿದ್ದೀರೋ ಇಲ್ಲವೋ ಎಂದು ಸೌಜನ್ಯಕ್ಕಾದರೂ ಕೇಳಿಲ್ಲ, ಇದು ನಮ್ಮ ವ್ಯವಸ್ಥೆ” ಎಂದಿದ್ದಾರೆ.
2022ರ ಫೆಬ್ರವರಿ ಆರಂಭದಲ್ಲಿ ರಾಜ್ಯದಲ್ಲಿ ಶಾಲಾ ಸಮವಸ್ತ್ರಕ್ಕೆ ಸಂಬಂಧಿಸಿದ ವಿವಾದ ಉಂಟಾಗಿತ್ತು. ತರಗತಿಗಳಿಗೆ ಹಿಜಾಬ್ ಧರಿಸಲು ಬಯಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದು ಕಾಲೇಜಿನ ಸಮವಸ್ತ್ರ ನೀತಿಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿತ್ತು. ಈ ವಿಚಾರವು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.





