ಚುನಾವಣೆ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದ ಅಂಬರ್ನಾಥ್ ಪುರಸಭೆ 12 ಕೌನ್ಸಿಲರ್ಗಳು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಂದ್ರ ಚವಾಣ್ ಸಮ್ಮುಖದಲ್ಲಿ ಕಾಂಗ್ರೆಸ್ ಕೌನ್ಸಿಲರ್ಗಳು ಬಿಜೆಪಿ ಸೇರಿಸಿದ್ದಾರೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ, ಈಗ ಬಿಜೆಪಿಗೆ ಸೇರಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಕೌನ್ಸಿಲರ್ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ರವೀಂದ್ರ ಚವಾಣ್, “ಈ ಕೌನ್ಸಿಲರ್ಗಳನ್ನು ಜನರು ಆಯ್ಕೆ ಮಾಡಿದ್ದರು. ಆ ಜನರಿಗೆ ಕೌನ್ಸಿಲರ್ಗಳು ಅಭಿವೃದ್ಧಿಯ ಭರವಸೆ ನೀಡಿದ್ದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತಿರುವ ಕೌನ್ಸಿಲರ್ಗಳು, ಜನರಿಗೆ ನ್ಯಾಯ ಮತ್ತು ಅಭಿವೃದ್ಧಿಯನ್ನು ತಲುಪಿಸಲು ನಮ್ಮ ಜೊತೆಗೂಡಿದ್ದಾರೆ” ಎಂದು ಹೇಳಿದ್ದಾರೆ.
ಡಿಸೆಂಬರ್ 20ರಂದು ನಡೆದ ಸ್ಥಳೀಯ ಚುನಾವಣೆಯಲ್ಲಿ ಅಂಬರ್ನಾಥ್ ಪುರಸಭೆಯ ಫಲಿತಾಂಶವು ಅತಂತ್ರ ಪುರಸಭೆಯನ್ನು ನಿರ್ಮಿಸಿತ್ತು. ಆ ಸಂದರ್ಭದಲ್ಲಿ 12 ಕಾಂಗ್ರೆಸ್ ಕೌನ್ಸಿಲರ್ಗಳು ಪಕ್ಷದ ಬದ್ಧ ಎದುರಾಳಿಯಾದ ಬಿಜೆಪಿ ಜೊತೆಗೂಡಿ ‘ಅಂಬರ್ನಾಥ್ ವಿಕಾಸ್ ಅಘಾಡಿ’ (AVA) ಬ್ಯಾನರ್ ಅಡಿಯಲ್ಲಿ ಮೈತ್ರಿ ಮಾಡಿಕೊಂಡು, ಆಡಳಿತ ರಚಿಸಿದ್ದರು. ಕಾಂಗ್ರೆಸ್ ಕೌನ್ಸಿಲರ್ಗಳು ಮಿತ್ರಪಕ್ಷ ಶಿವಸೇನೆ (ಯುಬಿಟಿ)ಯನ್ನೂ ಬದಿಗಿಟ್ಟಿದ್ದರು. ಪರಿಣಾಮ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷದ ಕೌನ್ಸಿಲರ್ಗಳನ್ನು ಕಾಂಗ್ರೆಸ್ ಅಮಾನತು ಮಾಡಿತ್ತು. ಈ ಬೆನ್ನಲ್ಲೇ, ಅವರೆಲ್ಲರೂ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಈ ಲೇಖನ ಓದಿದ್ದೀರಾ?: ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
60 ಸದಸ್ಯರ ಅಂಬರ್ನಾಥ್ ಪುರಸಭೆಯ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 14, ಕಾಂಗ್ರೆಸ್ 12, ಎನ್ಸಿಪಿ (ಅಜಿತ್ ಬಣ) 4 ಹಾಗೂ ಸ್ವತಂತ್ರರು 2 ಸ್ಥಾನಗಳನ್ನು ಗೆದ್ದಿದ್ದರು. ಮೈತ್ರಿಯಡಿಯಲ್ಲಿ ಕಾಂಗ್ರೆಸ್ ಕೌನ್ಸಿಲರ್ಗಳು ಶಿವಸೇನೆ (ಯುಬಿಟಿ)ಗೆ ಬೆಂಬಲ ನೀಡಬೇಕಿತ್ತು. ಆದರೆ, ಅವರು ಬಿಜೆಪಿ ಮತ್ತು ಎನ್ಸಿಪಿ (ಅಜಿತ್ ಬಣ)ದ ಜೊತೆಗೂಡಿ ಆಡಳಿತ ರಚಿಸಿದ್ದರು.
ಇನ್ನು, ಅಕೋಲಾ ಜಿಲ್ಲೆಯ ಅಕೋಟ್ ಪುರಸಭೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಬಿಜೆಪಿ ಜೊತೆ ಕೈಜೋಡಿಸಿ ಆಡಳಿತ ರಚಿಸಿದೆ.




