ಬಿಹಾರ ಚುನಾವಣೆಗೆ ಇನ್ನು ಕೆಲವೇ ವಾರಗಳಿವೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಸೇರಿ ಒಟ್ಟು 11 ನಾಯಕರುಗಳನ್ನು ಪಕ್ಷದಿಂದ ಉಚ್ಚಾಟಿಸಿದೆ.
ಈ ಉಚ್ಚಾಟಿತರು ಜೆಡಿಯುನ ಪ್ರಾಥಮಿಕ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಚಂದನ್ ಕುಮಾರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಶನಿವಾರ ಸಂಜೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಕಂಡುಬಂದ ನಂತರ 11 ನಾಯಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಸಾರ್ವಜನಿಕ ಸಭೆ ಆಯೋಜಿಸಿದ ನಿತೀಶ್ ಕುಮಾರ್ ಪುತ್ರ ನಿಶಾಂತ್
ಮಾಜಿ ಸಚಿವ ಶೈಲೇಶ್ ಕುಮಾರ್, ಮಾಜಿ ಶಾಸಕರಾದ ಶ್ಯಾಮ್ ಬಹದ್ದೂರ್ ಸಿಂಗ್ ಮತ್ತು ಸುದರ್ಶನ್ ಕುಮಾರ್, ಮಾಜಿ ಎಂಎಲ್ಸಿಗಳಾದ ಸಂಜಯ್ ಪ್ರಸಾದ್ ಮತ್ತು ರಣವಿಜಯ್ ಸಿಂಗ್ ಉಚ್ಚಾಟಿತರಾದವರು.
ಈ ಉಚ್ಚಾಟಿತ ನಾಯಕರು ಪಕ್ಷದ ಅಧಿಕೃತವಾಗಿ ಘೋಷಿಸಲಾದ ಅಭ್ಯರ್ಥಿಗಳು ಮತ್ತು ಇತರ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುತ್ತಿದ್ದರು. ಅವರು ಸಿದ್ಧಾಂತವನ್ನು ಧಿಕ್ಕರಿಸುತ್ತಿದ್ದರು ಎಂದು ಹೇಳಲಾಗಿದೆ.
243 ಸದಸ್ಯರ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿವೆ.





