ಭವಿಷ್ಯದಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಚೆನ್ನೈನಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಜೊತೆ ಆಪ್ತ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು.
“ಭವಿಷ್ಯದಲ್ಲಿ ತಮಿಳುನಾಡು ಬಿಜೆಪಿ ನಾಯಕರೊಬ್ಬರನ್ನು ಪ್ರಧಾನ ಮಂತ್ರಿ ಮಾಡಲಾಗುವುದು. ಈ ಹಿಂದೆ ಕೂಡ ತಮಿಳರಿಗೆ ಪ್ರಧಾನ ಮಂತ್ರಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಡಿಎಂಕೆ ಅದನ್ನು ತಪ್ಪಿಸಿತು” ಎಂದು ಅವರು ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಕನಿಷ್ಠ 20 ಸೀಟುಗಳು ಗೆಲ್ಲುವಂತೆ ಮಾಡಬೇಕು ಎಂದು ಅಮಿತ್ ಶಾ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಈ ನಡುವೆ ವೆಲ್ಲೂರಿನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, “ರಾಜ್ಯದ ಜನತೆ ಎನ್ಡಿಎಯಿಂದ ಕನಿಷ್ಠ 25 ಸಂಸದರನ್ನು ಗೆಲ್ಲಿಸಬೇಕು. ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಪ್ರತಿಷ್ಠಾಪಿಸಿದ್ದಕ್ಕಾಗಿ ತಮಿಳುನಾಡು ಜನತೆ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡಲು ಎನ್ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಪದಾಧಿಕಾರಿಗಳು ಶ್ರಮಿಸಬೇಕು. ಈ ಸಂಬಂಧ ಬೂತ್ ಸಮಿತಿಗಳನ್ನು ಬಲಪಡಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ; 349 ಪರಿಹಾರ ಶಿಬಿರಗಳಲ್ಲಿ 50 ಸಾವಿರ ಮಂದಿ ವಾಸ್ತವ್ಯ
“ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದಲ್ಲಿ ಶೇ.60ರಷ್ಟು ಬೂತ್ ಮಟ್ಟದ ಕೆಲಸಗಳು ಪೂರ್ಣಗೊಂಡಿದ್ದು, ಉಳಿದ ಶೇ.40 ರಷ್ಟು ಕೆಲಸಗಳನ್ನು ಸೆಪ್ಟಂಬರ್ ವೇಳೆಗೆ ಪೂರ್ಣಗೊಳಿಸಬೇಕು. ದಕ್ಷಿಣ ಚೆನ್ನೈ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಮಟ್ಟದಲ್ಲಿ ಶ್ರಮಿಸಬೇಕು” ಎಂದು ಅಮಿತ್ ಶಾ ಕಾರ್ಯಕರ್ತರಿಗೆ ಕರೆ ನೀಡಿದರು.
“ನಾನು ಚೆನ್ನೈಗೆ ಆಗಮಿಸಿದಾಗ ವಿಮಾನ ನಿಲ್ದಾಣದ ಹೊರಗಿದ್ದ ರಸ್ತೆಯ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ವಿದ್ಯುತ್ ವ್ಯತ್ಯಯ ಆಗುತ್ತಿರುವುದು ನನಗೆ ಹೊಸದೇನಲ್ಲ. ಇದು ತಮಿಳುನಾಡು ಅಂಧಕಾರದಲ್ಲಿದೆ ಎಂಬುದನ್ನು ತೋರಿಸುತ್ತದೆ. ನಾವು ಕತ್ತಲೆಯಲ್ಲಿರುವ ತಮಿಳುನಾಡಿಗೆ ಬೆಳಕನ್ನು ತರುತ್ತೇವೆ” ಎಂದು ಅವರು ಹೇಳಿದರು.





