ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳು ಸುಮಾರು 12,000 ಕೋಟಿ ರೂ. ದೇಣಿಗೆ ಪಡೆದಿವೆ ಎಂಬುದು ಇತ್ತೀಚೆಗೆ ಬಹಿರಂಗವಾಗಿದೆ. ಈ ನಡುವೆ, ಚುನಾವಣಾ ಬಾಂಡ್ಗಳ ಹೊರತು ಪಡಿಸಿ, ಕಳೆದ 10 ವರ್ಷಗಳಲ್ಲಿ ಪಕ್ಷಗಳು 7,726 ಕೋಟಿ ರೂ. ದೇಣಿಗೆ ಪಡೆದಿವೆ ಎಂದು ವರದಿಯಾಗಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಚುನಾವಣಾ ಬಾಂಡ್ ಹೊರತುಪಡಿಸಿ, ಪಕ್ಷಗಳು 2013-23ರ ನಡುವೆ 7,726 ಕೋಟಿ ರೂ. ದೇಣಿಗೆ ಪಡೆದಿವೆ. ಈ ಪೈಕಿ, ಸುಮಾರು 5,000 ಕೋಟಿ ರೂ. (64.7%) ಹಣವನ್ನು ಬಿಜೆಪಿಯೇ ಪಡೆದಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ (10.7%), ಭಾರತ ರಾಷ್ಟ್ರ ಸಮಿತಿ (3.3%) ಹಾಗೂ ಆಮ್ ಆದ್ಮಿ ಪಕ್ಷ (3.1%) ದೇಣಿಗೆ ಪಡೆದಿವೆ ಎಂದು ಬಿಸಿನೆಸ್ಲೈನ್ ವರದಿ ಮಾಡಿದೆ.
ವರದಿಯ ಪ್ರಕಾರ, ಒಟ್ಟು ದೇಣಿಗೆಯ ದೊಡ್ಡ ಭಾಗವನ್ನು ರಾಜಕೀಯ ನಿಧಿಯ ಪಾರದರ್ಶಕ ವಿಧಾನಗಳ ಮೂಲಕ ಪಕ್ಷಗಳು ಪಡೆದಿವೆ.
2018ರಲ್ಲಿ ಕೇಂದ್ರ ಸರ್ಕಾರವು ಚುನಾವಣಾ ಬಾಂಡ್ಗಳ ಯೋಜನೆಯನ್ನು ಪರಿಚಯಿಸುವ ಮೊದಲು, 2003ರಲ್ಲಿ ಇದೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ರಾಜಕೀಯ ಹಣಕಾಸು ಕಾನೂನುಗಳ ಪ್ರಕಾರ, 20,000 ರೂ.ಗಿಂತ ಹೆಚ್ಚಿನ ದೇಣಿಗೆ ಪಡೆದರೆ, ಪಕ್ಷಗಳು ಆ ದೇಣಿಗೆಯ ಮಾಹಿತಿಯನ್ನು ಘೋಷಿಸಬೇಕಿತ್ತು.
ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯು 100% ತೆರಿಗೆ ವಿನಾಯತಿಯನ್ನು ಹೊಂದಿರುತ್ತಿತ್ತು. ಈ ದೇಣಿಗೆಯು ವರ್ಷಗಳು ಕಳೆದಂತೆ ಏರಿಕೆಯನ್ನು ಕಂಡಿತ್ತು. 2014ರ ಆರ್ಥಿಕ ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 309 ಕೋಟಿ ರೂ. ದೇಣಿಗೆ ದೊರೆತಿದ್ದರೆ, 2020ರ ವರ್ಷದಲ್ಲಿ 1,247 ಕೋಟಿ ರೂ. ಆಗಿತ್ತು ಆದಾಗ್ಯೂ, 2023ರ ಆರ್ಥಿಕ ವರ್ಷದಲ್ಲಿ ಈ ದೇಣಿಗೆಯ ಮೊತ್ತವು 1,101 ಕೋಟಿ ರೂ.ಗೆ ಸ್ವಲ್ಪ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳು ಹೆಚ್ಚಿನ ದೇಣಿಗೆ ನೀಡಿವೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ (ಪಿಇಟಿ) ನಂತಹ ಕಂಪನಿಗಳು ದೇಣಿಗೆ ನೀಡಿರುವ ಪ್ರಮುಖ ಕಂಪನಿಗಳಾಗಿವೆ. ಈ ಕಂಪನಿಯು 2023ರ ಆರ್ಥಿಕ ವರ್ಷದಲ್ಲಿ ಬಿಜೆಪಿಗೆ 256 ಕೋಟಿ ರೂ. ಮತ್ತು ಭಾರತ ರಾಷ್ಟ್ರ ಸಮಿತಿಗೆ 90 ಕೋಟಿ ರೂ. ದೇಣಿಗೆ ನೀಡಿದೆ. ಇದೇ ವರ್ಷ, M/S MKJ ಎಂಟರ್ಪ್ರೈಸಸ್ ಲಿಮಿಟೆಡ್ ಕಂಪನಿಯು ಕಾಂಗ್ರೆಸ್ಗೆ 45 ಕೋಟಿ ರೂ. ನೀಡಿದೆ. ಬಿ.ಜಿ ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಬಿಜೆಪಿಗೆ 35 ಕೋಟಿ ರೂ. ದೇಣಿಗೆ ನೀಡಿದೆ ಎಂದು ಬಿಸಿನೆಸ್ಲೈನ್ ವರದಿ ಮಾಡಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ (ಎಡಿಆರ್) ಮುಖ್ಯಸ್ಥ ಅನಿಲ್ ವರ್ಮಾ ಅವರು ಭಾರತದಲ್ಲಿ ಪಾರದರ್ಶಕ ರಾಜಕೀಯ ದೇಣಿಗೆಗಳ ಪರಿವರ್ತನೆ ಬಗ್ಗೆ ವಿವರಿಸಿದ್ದಾರೆ. “ಭಾರತದಲ್ಲಿ ಪಕ್ಷ ರಾಜಕೀಯವು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ. ಇದು ಚುನಾವಣೆಗಳಲ್ಲಿ ಪಕ್ಷದ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗೆ ಹೆಚ್ಚುತ್ತಿರುವ ವೆಚ್ಚಗಳನ್ನು ಪೂರೈಸಲು, ಪಕ್ಷಗಳು ಹೆಚ್ಚಾಗಿ ಕಾರ್ಪೊರೇಟ್ ವಲಯದ ಮೇಲೆ ಅವಲಂಬಿತವಾಗಿವೆ. ಇದು ಅಪಾರದರ್ಶಕ ನಿಧಿ ಹಾಗೂ ಕೊಡು-ತೆಗೆದು ವಿಧಾನದ ಬೆಳವಣಿಗೆಗೆ ಕಾರಣವಾಗಿದೆ. ಯಾವುದೇ ರಾಜಕೀಯ ಪಕ್ಷವು ಅಧಿಕಾರದಲ್ಲಿದ್ದರೂ, ಅವರು ತಮ್ಮ ಅನುಕೂಲಕ್ಕಾಗಿ ಕೊಡು-ತೆಗೆದು ವಿಧಾನವನ್ನು ಅನುಸರಿಸುತ್ತಾರೆ” ಎಂದು ಹೇಳಿದ್ದಾರೆ.
ಆರು ರಾಷ್ಟ್ರೀಯ ಪಕ್ಷಗಳು ಸ್ವೀಕರಿಸಿದ ಸುಮಾರು 75% ಹಣವು 20,000 ರೂ. ಮಿತಿಗಿಂತ ಕಡಿಮೆ ಇರುವ ಅನಾಮಧೇಯ ದೇಣಿಗೆಗಳ ಮೂಲಕ ಬಂದಿದೆ ಎಂಬುದನ್ನು ವರದಿಯು ಹೈಲೈಟ್ ಮಾಡಿದೆ.




