ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದು ಈಗ ಆಮ್ ಆದ್ಮಿ ಪಕ್ಷದ (ಎಎಪಿ) ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಸುನೀತಾ ಕೇಜ್ರಿವಾಲ್ ಅವರು ಕಳೆದ ತಿಂಗಳು ಇಂಡಿಯಾ ಒಕ್ಕೂಟದ ರ್ಯಾಲಿಯಲ್ಲಿ ಖಡಕ್ ಭಾಷಣದೊಂದಿಗೆ ರಾಜಕೀಯ ರಣಾಂಗಣಕ್ಕೆ ಪ್ರವೇಶಿಸಿದ್ದು ಈಗ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಎಎಪಿ ಪ್ರಚಾರಕರಾಗಿದ್ದಾರೆ.
ಎಎಪಿಯ ಪೂರ್ವ ದೆಹಲಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಬೆಂಬಲಿಸಿ ಸುನೀತಾ ಕೇಜ್ರಿವಾಲ್ ಇಂದು (ಏಪ್ರಿಲ್ 27) ರಾಷ್ಟ್ರ ರಾಜಧಾನಿಯಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
ಇದನ್ನು ಓದಿದ್ದೀರಾ? ‘ನನ್ನ ಪತಿಯ ಹತ್ಯೆಗೆ ಸಂಚು’: ದೆಹಲಿ ಸಚಿವರ ನಂತರ ಕೇಜ್ರಿವಾಲ್ ಪತ್ನಿ ಆರೋಪ
“ಅರವಿಂದ್ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ, ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಕೇಜ್ರಿವಾಲ್ರಿಗಾಗಿ ಜನರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಎಎಪಿ ಅಭ್ಯರ್ಥಿಗಳಿಗೆ ಮತಯಾಚನೆ ಮಾಡಲು ಪ್ರಚಾರ ನಡೆಸಲಿದ್ದಾರೆ. ಅವರು ದೆಹಲಿ, ಪಂಜಾಬ್, ಗುಜರಾತ್ ಮತ್ತು ಹರಿಯಾಣದ ಜನತೆಯಿಂದ ಆಶೀರ್ವಾದ ಪಡೆಯಲಿದ್ದಾರೆ” ದೆಹಲಿ ಸಚಿವೆ ಅತಿಶಿ ಘೋಷಿಸಿದ್ದಾರೆ.
ಮಾರ್ಚ್ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಅದಾದ ಬಳಿಕ ಎಎಪಿಯ ಪ್ರಚಾರಕ್ಕೆ ಈಗ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಚಾಲನೆ ನೀಡಲಿದ್ದಾರೆ. ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
“ಪ್ರಸ್ತುತ ಪಕ್ಷದಲ್ಲಿ ಒಗ್ಗಟ್ಟು ಹೆಚ್ಚಿಸಲು ಕೇಜ್ರಿವಾಲ್ ಅವರ ಪತ್ನಿ ಅತ್ಯುತ್ತಮ ವ್ಯಕ್ತಿ. ಅವರ ಉಪಸ್ಥಿತಿಯು ಪಕ್ಷದ ಕಾರ್ಯಕರ್ತರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ” ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ತಿಹಾರ್ ಜೈಲಿನಿಂದಲೇ ಶಾಸಕರಿಗೆ ಕೇಜ್ರಿವಾಲ್ ನಿರ್ದೇಶನ: ಜನರ ಸಮಸ್ಯೆ ಪರಿಹರಿಸಲು ಸೂಚನೆ
ಸುನೀತಾ ಕೇಜ್ರಿವಾಲ್ ಅವರು ಕಳೆದ ತಿಂಗಳು ದೆಹಲಿ ಮತ್ತು ರಾಂಚಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ವಿಪಕ್ಷಗಳು ಈ ರ್ಯಾಲಿಯಲ್ಲಿ ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕಿರುಕುಳ ನೀಡಲು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಿಜೆಪಿಯ ಮೇಲೆ ತೀವ್ರ ವಾಗ್ದಾಳಿ ನಡೆಸಿವೆ.
ಸುನೀತಾ ಕೇಜ್ರಿವಾಲ್ ಅವರು ಈವರೆಗೆ ಮೂರು ಡಿಜಿಟಲ್ ಮೀಡಿಯಾ ಬ್ರೀಫಿಂಗ್ಗಳನ್ನು ನಡೆಸಿದ್ದಾರೆ. ಮುಖ್ಯವಾಗಿ ಅರವಿಂದ್ ಕೇಜ್ರಿವಾಲ್ ಅವರ ಸಂದೇಶಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ತಿಂಗಳು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ಯಾವುದೇ ಕಾನೂನು ತಡೆಯುವುದಿಲ್ಲ ಎಂದು ಎಎಪಿ ಹೇಳಿದ್ದು, ಕೇಜ್ರಿವಾಲ್ ಇಂದಿಗೂ ಮುಖ್ಯಮಂತ್ರಿಯಾಗಿಯೇ ಉಳಿದಿದ್ದಾರೆ.
ಇದನ್ನು ಓದಿದ್ದೀರಾ? ಸುಪ್ರೀಂ ಕೋರ್ಟ್ನಲ್ಲಿ ಕೇಜ್ರಿವಾಲ್ ಬಂಧನ ಸಮರ್ಥಿಸಿಕೊಂಡ ಇಡಿ; ಅಫಿಡವಿಟ್ ಸಲ್ಲಿಕೆ
ಇನ್ನು ಸುನೀತಾ ಕೇಜ್ರಿವಾಲ್ ಅವರು ಮಾಜಿ ಭಾರತೀಯ ಕಂದಾಯ ಸೇವೆಗಳ (ಐಆರ್ಎಸ್) ಅಧಿಕಾರಿಯಾಗಿದ್ದು, ಅವರು 22 ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಭೋಪಾಲ್ನಲ್ಲಿ ನಡೆದ ತರಬೇತಿ ಕಾರ್ಯಕ್ರಮದ ವೇಳೆ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು ಇಬ್ಬರು 1995ರಲ್ಲಿ ವಿವಾಹವಾಗಿದ್ದಾರೆ.
ಸುನೀತಾ ಅವರು 1994 ರ ಬ್ಯಾಚ್ನವರಾಗಿದ್ದರೆ, ಅರವಿಂದ್ ಕೇಜ್ರಿವಾಲ್ 1995 ಬ್ಯಾಚ್ ಅಧಿಕಾರಿಯಾಗಿದ್ದಾರೆ. ಸುನೀತಾ ಅವರು 2016 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಕೊನೆಯದಾಗಿ ದೆಹಲಿಯ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಆದಾಯ ತೆರಿಗೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.





