ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಹಾಗೂ ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕರು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಶರ್ಮಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್ ದೂರನ್ನೂ ಕಾಂಗ್ರೆಸ್ ದಾಖಲಿಸಿದೆ. ಈ ಬೆನ್ನಲ್ಲೇ, ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಶರ್ಮಾ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿಸಿರುವ ಸಿಎಂ ಶರ್ಮಾ, “ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನನಷ್ಟ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಹಾಗೂ ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಹೇಳಿದ್ದಾರೆ.
ಕಳೆದ ಎರಡು-ಮೂರು ದಿನಗಳ ಹಿಂದೆ, ಶರ್ಮಾ ಅವರು ಮುಸ್ಲಿಮರಿಗೆ ರೈಫಲ್ ಗುರಿಯಿಟ್ಟಿರುವ ಎಐ ರಚಿತ ವಿಡಿಯೋವನ್ನು ಅಸ್ಸಾಂ ಬಿಜೆಪಿ ಹಂಚಿಕೊಂಡಿತ್ತು. ಇದು, ಕೋಮು ನರಮೇಧಕ್ಕೆ ಕರೆಕೊಡುವಂತಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಅಳಿಸಿಹಾಕಿದೆ. ಆ ವಿಡಿಯೋ ಕಾರಣಕ್ಕಾಗಿ, ಕಾಂಗ್ರೆಸ್ ಶಾಸಕರಾದ ಸಿಬಮೋನಿ ಬೋರಾ ಮತ್ತು ದಿಗಂತ ಬರ್ಮನ್ ಅವರು ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





