ನಮ್ಮೂರು ಶೃಂಗೇರಿ ತಾಲೂಕಿನ ಗಡಿಯಂಚಿನ ಊರು. ಪಕ್ಕದ ಗುಡ್ಡ ಹತ್ತಿ ಪಕ್ಕಕ್ಕೆ ಇಳಿದರೆ ಕೊಪ್ಪ ತಾಲೂಕಿನ ಹುಲ್ತಾಳು. ಇಲ್ಲಿಯ ವರೆಗೂ ನಮ್ಮೂರು ಮತ್ತು ಹುಲ್ತಾಳು ಸುತ್ತ ಮುತ್ತದ ಗುಡ್ಡಗಳಲ್ಲಿ ಅಕೇಶಿಯಾ ನೆಡುತೋಪು ಇಲ್ಲ. ಕಣಿವೆಗಳಲ್ಲಿ ದಟ್ಟ ಕಾಡು. ಗುಡ್ಡದ ಮೇಲೆ ಕುರುಚಲು ಕಾಡು ಮದ್ಯೆ ಚಿಕ್ಕ ಚಿಕ್ಕ ಬಯಲುಗಳ ಸಹಜ ಅರಣ್ಯ. ಅಲ್ಲಿ ಬೆಮ್ಮಾರ್ಲು, ಕರ್ಜಿ, ಈಚಲು, ವಾಯುವಿಳಂಗ, ಕಬ್ಳಿ ಹೀಗೆ ಹಲವಾರು ಜಾತಿಯ ಹಣ್ಣುಗಳ ಮುಳ್ಳು ಕಂಟಿಗಳು. ದೂರ ದೂರದಲ್ಲಿ ನೀರ್ಲು, ಕುನ್ನೀರ್ಲು, ಬಿಳಚಿ,ಸಳ್ಳೆ, ಮತ್ತಿ, ಗುಡ್ಡೆಗೇರು, ಹುಲುವೆ ಮುಂತಾದ ಮರಗಳು.
ಅರಣ್ಯ ಇಲಾಖೆ ಈ ಸಹಜ ಕಾಡಿನಲ್ಲಿ ಗಿಡ ನೆಡುವ ಯೋಜನೆಯಡಿ ಗುಡ್ಡದ ತುಂಬಾ ಗುಂಡಿ ತೋಡಲಾರಂಭಿಸಿದೆ. ಕಳೆದ ತಿಂಗಳು ಯಂತ್ರದ ಮೂಲಕ ಗುಂಡಿ ತೋಡುತ್ತಿದ್ದಾಗ ಸ್ಥಳೀಯರ ವಿರೋಧದಿಂದಾಗಿ ಕೆಲಸ ನಿಲ್ಲಿಸಿದ್ದರು. ನಾಲ್ಕೈದು ದಿನಗಳ ಹಿಂದೆ ಹುಲ್ತಾಳಿನ ಮತ್ತೊಂದು ಬದಿಯಲ್ಲಿರುವ ಬಂಗಾಡಿ ಎಂಬ ಊರಿನ ಸಮೀಪ ಕಾಡಿನಲ್ಲಿ ಟೆಂಟ್ ಹಾಕಿ ಕಾರ್ಮಿಕರ ಮೂಲಕ ಗುಂಡಿ ತೋಡಿಸಲು ಪ್ರಾರಂಭಿಸಿದ್ದರು. ಜನವರಿ 30ರಂದು ಸ್ಥಳೀಯರು ಪ್ರತಿಭಟಿಸಿದರು. ಆಗ ನಡೆದ ಮಾತಿನ ಚಕಮಕಿಯಲ್ಲಿ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ನಿಮ್ಮ ಸಾಗುವಳಿ ಜಮೀನುಗಳಿಗೆ ದಾಖಲೆಗಳಿಲ್ಲ, ನೀವು ಗಿಡ ನೆಡಲು ಅಡ್ಡಿ ಪಡಿಸಿದರೆ ನಿಮ್ಮ ಸಾಗುವಳಿ ಮಾಡಿರುವ ಜಾಗಗಳನ್ನೂ ತೆರವು ಮಾಡಬೇಕಾಗುತ್ತೆ ಅಂತ ಬೆದರಿಕೆ ಹಾಕಿದ್ದರು. ಜನವರಿ 31ರಂದು ಅರಣ್ಯ ಇಲಾಖೆ ಟೆಂಟು ಹಾಕಿರುವ ಜಾಗದಲ್ಲಿಯೇ ಸತ್ಯಾಗ್ರಹ ನಡೆಸುವುದೆಂದು ಸ್ಥಳೀಯ ಜನರು ತೀರ್ಮಾನಿಸಿದರು.

ಅದರಂತೆ ಬೆಳಿಗ್ಗೆ 9 ಗಂಟೆಗೆ ಸ್ಥಳೀಯ ಜನರು ಒಟ್ಟಾಗಿ ಟೆಂಟ್ ಹಾಕಿದ್ದ ಜಾಗ ತಲುಪುವಷ್ಟರಲ್ಲಿ ಅಲ್ಲಿದ್ದ ಕಾರ್ಮಿಕರೆಲ್ಲಾ ಹೊರಟುಹೋಗಿದ್ದರು. ಇಲಾಖೆ ಸದ್ಯಕ್ಕೆ ಕೆಲಸ ನಿಲ್ಲಿಸಿದೆ. ಅಲ್ಲಿಯೇ ಸಾಂಕೇತಿಕವಾಗಿ ಒಂದು ದಿನದ ಸತ್ಯಾಗ್ರಹ ನಡೆಸಿದ ಸ್ಥಳೀಯ ಜನರು ಸದ್ಯಕ್ಕೆ ಸತ್ಯಾಗ್ರಹ ನಿಲ್ಲಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ:
*ಇಲಾಖೆ ಗಿಡ ನೆಡಲು ಉದ್ದೇಶಿಸಿರುವ ಜಾಗ ಸಹಜ ಕಾಡೇ ಆಗಿದ್ದು ಅಲ್ಲಿಯದೇ ಆದ ಸಸ್ಯ ವೈವಿಧ್ಯತೆಯನ್ನು ಹೊಂದಿದೆ.
*ಇಂತಹ ಕುರುಚಲು ಕಾಡುಗಳು ಹಲವಾರು ಜಾತಿಯ ಸರೀಸೃಪಗಳು, ಸಸ್ತನಿಗಳು ಮತ್ತು ಕೀಟಗಳನ್ನು ಹೊಂದಿರುವ ಜೀವವೈವಿಧ್ಯ ತಾಣವಾಗಿದೆ.
*ವಾರ್ಷಿಕವಾಗಿ 4000 ಸೆಂ.ಮೀಟರುಗಿಂತಲೂ ಅಧಿಕ ಮಳೆಯಾಗುವ ಗುಡ್ಡಗಳ ಇಳಿಜಾರಿನಲ್ಲಿ ಮಣ್ಣು ಸಡಿಲಗೊಳಿಸಿದಲ್ಲಿ ಮಳೆಗಾಲದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಸಮೀಪದ ಕಣಿವೆಗಳ ಸರಲುಗಳಲ್ಲಿ ತುಂಬುತ್ತದೆ. ಅದು ಬೇಸಿಗೆಯ ಸರಲುಗಳ ನೀರಿನ ಹರಿವಿನ ಮೇಲೆ ಪ್ರಭಾವ ಬೀರುತ್ತದೆ.
*ಗುಡ್ಡಗಳ ನಡುವಿನ ಸರಲುಗಳು ಅಪಾರ ಜೀವವೈವಿಧ್ಯತೆಯನ್ನು ಪೋಷಿಸುತ್ತವೆ.
*ಸ್ಥಳೀಯ ರೈತ, ಕೃಷಿ ಕಾರ್ಮಿಕರು ತಮ್ಮ ಜೀವನಕ್ಕಾಗಿ ಮಾಡಿಕೊಂಡಿರುವ ಸಾಗುವಳಿ ಭೂಮಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಇಂತಹ ನಡೆಗಳು ಸ್ಥಳೀಯರಲ್ಲಿ ಇಲಾಖೆ ತಮ್ಮ ಬದುಕನ್ನು ಆಕ್ರಮಿಸುತ್ತಿರುವ ಭಾವನೆ ಮೂಡಿಸುತ್ತಿದೆ. ಅದು ಅರಣ್ಯ ಇಲಾಖೆ ಮತ್ತು ಸ್ಥಳೀಯ ಜನರ ನಡುವಿನ ಸಂಘರ್ಷವನ್ನು ಹೆಚ್ಚಿಸುತ್ತದೆ.
*ಸ್ಥಳೀಯ ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದ ಇಲಾಖೆಯ ಇಂತಹ ಏಕಪಕ್ಷೀಯ ನಡೆಗಳು, ಸ್ಥಳೀಯ ಜನರನ್ನು ಒಳಗೊಂಡು ಪರಿಸರ ಸಂರಕ್ಷಣಾ ಯೋಜನೆಗಳನ್ನು ರೂಪಿಸಬೇಕೆಂಬ ಆಶಯಗಳಿಗೆ ವಿರುದ್ಧವಾಗಿದೆ.

ಅರಣ್ಯ ಇಲಾಖೆ ಗುಂಡಿ ತೋಡುವ ಕೆಲಸವನ್ನು ನಿಲ್ಲಿಸಿದೆ. ಆದರೆ, ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳೀಯ ಜನರಿಗೆ ಆ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಇಲಾಖೆಯ ಯಾವ ಅಧಿಕಾರಿಗಳೂ ಭೇಟಿ ನೀಡಿಲ್ಲ, ಸ್ಥಳೀಯ ಜನರು ಸಧ್ಯಕ್ಕೆ ಸತ್ಯಾಗ್ರಹ ಹಿಂಪಡೆದಿದ್ದಾರೆ. ಆದರೆ ಇಲಾಖೆ ಮತ್ತೆ ಕೆಲಸ ಆರಂಭಿಸಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರಿಂದ ಸಂಕೇತಿಕಾ ಉಪವಾಸ ಧರಣಿ
ಆದ್ದರಿಂದ ಅರಣ್ಯ ಇಲಾಖೆಯು ಕಾಡಿನಲ್ಲಿ ಗಿಡ ನೆಡುವ ಇಂತಹ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ, ಸ್ಥಳೀಯ ಜನ ಸಮುದಾಯಗಳನ್ನು ಒಳಗೊಳ್ಳುವ ಪರಿಸರ ಸಂರಕ್ಷಣಾ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.
ವರದಿ: ಗುರುಮೂರ್ತಿ ಜೋಗಿಬೈಲು





