ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಸೇರುತ್ತಿರುವುದಾಗಿ ಭಾನುವಾರ ಹೇಳಿದ್ದಾರೆ.
“ಆಡಳಿತ ಪಕ್ಷದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಹಲವಾರು ಬಾರಿ ರಾಜಕೀಯಕ್ಕೆ ಬಂದು ಹೋರಾಟ ಮಾಡುವಂತೆ ನನಗೆ ಸವಾಲು ಹಾಕಿದ್ದಾರೆ. ಹಾಗಾಗಿ, ಯಾಕೆ ರಾಜಕೀಯಕ್ಕೆ ಬರಬಾರದೆಂದು ಯೋಚಿಸಿದ್ದೇನೆ. ರಾಜಕೀಯಕ್ಕೆ ಸೇರುತ್ತೇನೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಕಲ್ಕತ್ತಾ ಹೈಕೋರ್ಟ್ನಲ್ಲಿ ಸೋಮವಾರ (ಮಾರ್ಚ್ 4) ತಮ್ಮ ಕೊನೆಯ ದಿನವಾಗಲಿದೆ. ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಕಳುಹಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿರುವ ಅವರು, ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದನ್ನು ತಿಳಿಸಿಲ್ಲ.
ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿಯನ್ನು ಟೀಕಿಸಿದ ಅವರು, “ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಮಗೆ ನ್ಯಾಯಾಲಯದ ಸಭಾಂಗಣದಿಂದ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.
“ಬಂಗಾಳಿಯಾಗಿ ನಾನು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೊರೆಗಳಾಗಿ ಹೊರಹೊಮ್ಮಿದವರು ರಾಜ್ಯಕ್ಕೆ ಪ್ರಯೋಜನವಾಗುವಂತೆ ಕಾಣುತ್ತಿಲ್ಲ. ಅವರ ಸವಾಲು ಸ್ವೀಕರಿಸಿ ಮಂಗಳವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ಪೀಠದಲ್ಲಿ ಸಾಕಷ್ಟು ಪ್ರಕರಣಗಳಿರುವುದರಿಂದ ಸೋಮವಾರ ನಾನು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ” ಎಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ಅಭಿಜಿತ್ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ದೇಬಂಗ್ಶು ಭಟ್ಟಾಚಾರ್ಯ, “ಅಭಿಜಿತ್ ಅವರು ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ನಾವು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇವೆ. ನಮ್ಮನ್ನ ಹೇಳಿಕೆ ಸರಿ ಎಂಬುದನ್ನು ಇಂದು ಸಾಬೀತು ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೋದಿಯ ‘ದ್ರೋಹದ ಗ್ಯಾರಂಟಿ’; ರೈಲ್ವೆ ಪಾಲಿಸಿ ವಿರುದ್ಧ ರಾಹುಲ್ ಕಿಡಿ
ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ರಾಜಕೀಯ ಸೇರುವ ಅಭಿಜಿತ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಅಭಿಜಿತ್ ಗಂಗೋಪಾಧ್ಯಾಯ ಅವರಂತಹವರು ರಾಜಕೀಯಕ್ಕೆ ಸೇರುವುದು ದೇಶದ ಪರವಾಗಿಯೇ ಇದೆ. ಬಿಜೆಪಿ ಅವರ ಸ್ವಾಭಾವಿಕ ಆಯ್ಕೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಅಭಿಜಿತ್ ಅವರನ್ನು ತಮ್ಮ ಪಕ್ಷ ಸ್ವಾಗತಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಹೇಳಿದ್ದಾರೆ. “ಅಭಿಜಿತ್ ಭ್ರಷ್ಟಾಚಾರದ ವಿರುದ್ಧದ ಹೋರಾಟಗಾರರಾಗಿದ್ದಾರೆ. ಅವರು ಕಾಂಗ್ರೆಸ್ ಸೇರಲು ಬಯಸಿದರೆ, ನಾವು ಅವರಿಗೆ ಆತ್ಮೀಯ ಸ್ವಾಗತ ನೀಡುತ್ತೇವೆ. ಅವರೊಬ್ಬ ಹೋರಾಟಗಾರ. ಅವರು ಬಿಜೆಪಿಗೆ ಸೇರಿದರೆ, ಸೈದ್ಧಾಂತಿಕವಾಗಿ ನಾವು ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಅಲ್ಲದೆ, ಈ ಹಿಂದೆಯೂ ಅಭಿಜಿತ್ ಬಗ್ಗೆ ಮಾತನಾಡಿದ್ದ ಚೌಧರಿ, “ಅಭಿಜಿತ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಬೇಕು” ಎಂದು ಹೇಳಿದ್ದರು.




