ಕರ್ನಾಟಕದಲ್ಲಿ ಸಚಿವ ಸಂಪುಟ ಪುನರ್ರಚನೆಗೆ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರವೇ ಸಚಿವ ಸಂಪುಟ ಮರುರಚನೆಯಾಗಲಿದೆ ಎಂದು ದೆಹಲಿಯ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪೂರ್ವಯೋಜನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶನಿವಾರ) ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿಯ ವೇಳೆ, ರಾಜ್ಯ ಸಚಿವ ಸಂಪುಟ ಪುನರ್ರಚನೆಯ ಕುರಿತು ಚರ್ಚೆ ನಡೆದಿದೆ. ಸಂಪುಟ ಪುನರ್ರಚನೆಗೆ ರಾಹುಲ್ ಗಾಂಧಿ ಸಮ್ಮತಿ ನೀಡಿದ್ದಾರೆ. ಆದಾಗ್ಯೂ, ಸಂಪುಟಕ್ಕೆ ಸೇರ್ಪಡೆ ಮತ್ತು ಕೈಬಿಡುವ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜನರಲ್ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲು ಎರಡನೇ ಸುತ್ತಿನ ಸಭೆ ನಿಗದಿಯಾಗಿದೆ. ಅಂದು, ಮುಂದಿನ ಸಂಪುಟದಲ್ಲಿ ಯಾರು ಇರಲಿದ್ದಾರೆ, ಯಾರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ನಿರ್ಧಾರವಾಗಲಿದೆ.
ಈಗಾಗಲೇ, ಸೋಮವಾರ (ನ.17) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಿದ್ದರಾಮಯ್ಯ ಅವರ ಸಭೆ ನಿಗದಿಯಾಗಿದೆ. ಇಂದು ರಾಜ್ಯಕ್ಕೆ ಮರಳಲಿರುವ ಸಿದ್ದರಾಮಯ್ಯ ಅವರು ಸೋಮವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಅಂದು, ಮೋದಿ ಜೊತೆಗಿನ ಸಭೆಯ ಬಳಿಕ, ಕಾಂಗ್ರೆಸ್ ಹೈಕಮಾಂಡ್ಅನ್ನೂ ಸಿದ್ದರಾಮಯ್ಯ ಅವರು ಭೇಟಿ ಮಾಡಲಿದ್ದು, ಅಂದೇ ಸಚಿವ ಸಂಪುಟದ ಭವಿಷ್ಯ ನಿರ್ಧರವಾಗುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಅವರ ಭೇಟಿ ಮತ್ತು ಸಚಿವ ಸಂಪುಟ ಪುನರ್ರಚನೆಗೆ ಸಿಕ್ಕ ಸಮ್ಮತಿಯು, ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ವದಂತಿಗೆ ತೆರೆ ಎಳೆದಿದೆ. ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆಯಾಗಲೀ, ನವೆಂಬರ್ ಕ್ರಾಂತಿಯಾಗಲೀ ನಡೆಯುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.




