1940 – ರಾಮ್ಗಢ: 1940ರಲ್ಲಿ ಅವಿಭಜಿತ ಬಿಹಾರದ ರಾಮಗಢದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಸೇರುತ್ತದೆ. ಮೌಲಾನಾ ಅಬುಲ್ ಕಲಾಂ ಆಜಾದ್ ಅಧ್ಯಕ್ಷತೆಯಲ್ಲಿ ನಡೆದ ಈ ಅಧಿವೇಶನವು, ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರೂಪಿಸಲು ಮತ್ತು ಅಂಗೀಕರಿಸಲು ಸಂವಿಧಾನ ಸಭೆಯ ರಚನೆಗೆ ಕಾಂಗ್ರೆಸ್ ಚಿತಂನೆ ನಡೆಸಿತ್ತು.
2025 – ಪಾಟ್ನಾ: ಇದೇ ವರ್ಷದ ಸೆಪ್ಟೆಂಬರ್ 24ರಂದು ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿ ಸಭೆಯನ್ನು ಮತ್ತೆ ಬಿಹಾರದಲ್ಲಿ ನಡೆಸಿದೆ. ರಾಮಗಢ ಮತ್ತು ಪಾಟ್ನಾ ಸಭೆಗಳ ನಡುವಿನ 85 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಆಗ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಕಾಂಗ್ರೆಸ್, ಈಗ ಕೇಂದ್ರದಲ್ಲಿ ವಿರೋಧ ಪಕ್ಷಗಳನ್ನು ಮುನ್ನಡೆಸುತ್ತಿದೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ.
ಸೆ.24ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ನೇತಾರರಿರುವ ಸಿಡಬ್ಲ್ಯೂಸಿ ಸಭೆಯು ಪಾಟ್ನಾದ ಸದಾಕತ್ ಆಶ್ರಮದಲ್ಲಿ ಸಭೆ ಸೇರಿದ್ದರು. ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ನಾಯಕತ್ವವು ಪಾಟ್ನಾದಲ್ಲಿ ಸಭೆ ಸೇರಿತ್ತು.
ಸಿಡಬ್ಲ್ಯೂಸಿ ಸಭೆಗೆ ಸದಾಕತ್ ಆಶ್ರಮವನ್ನು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪಾತ್ರವನ್ನು ಪ್ರದರ್ಶಿಸುವ ಪ್ರಯತ್ನದ ಭಾಗವೂ ಆಗಿತ್ತು. ಈಗ ರಾಜ್ಯ ಕಾಂಗ್ರೆಸ್ ಕಚೇರಿ ಮತ್ತು ವಸ್ತುಸಂಗ್ರಹಾಲಯವನ್ನು ಹೊಂದಿರುವ ಸದಾಕತ್ ಆಶ್ರಮವು ಒಂದು ಕಾಲದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಡಾ. ರಾಜೇಂದ್ರ ಪ್ರಸಾದ್ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಸಭೆಗಳ ಪ್ರಮುಖ ಸ್ಥಳವಾಗಿತ್ತು. ಈಗ ಕಾಂಗ್ರೆಸ್ ನಾಯಕರು ‘ಫ್ಯಾಸಿಸ್ಟ್ ಆಡಳಿತದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ’ದ ಬಗ್ಗೆ ಮಾತನಾಡುತ್ತಿರುವಾಗ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು, ತನ್ನ ಇತಿಹಾಸದ ಪುಟವನ್ನು ತಿರುವಿಹಾಕಿತ್ತು.
ಅದರ ಭಾಗವಾಗಿಯೇ, ಸಭೆಯ ಆರಂಭದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಿಡಬ್ಲ್ಯೂಸಿ ಪ್ರಮುಖ ನಿರ್ಧಾರವನ್ನು ಹೇಗೆ ತೆಗೆದುಕೊಂಡಿತ್ತು ಎಂಬುದನ್ನು ವಿವರಿಸಿದ್ದರು.
“1940ರ ಮಾರ್ಚ್ನಲ್ಲಿ ನಡೆದ ರಾಮಗಢದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ತನ್ನ ಹೆಗ್ಗುರುತಾದ ನಿರ್ಣಯಗಳನ್ನು ಅಂಗೀಕರಿಸಿತು. ಅದು ಮೊದಲ ಬಾರಿಗೆ, ಸ್ವಾತಂತ್ರ್ಯ ಮತ್ತು ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರೂಪಿಸಲು ಮತ್ತು ಅಂಗೀಕರಿಸಲು ‘ಸಂವಿಧಾನ ಸಭೆ’ಯ ರಚನೆಯನ್ನು ಔಪಚಾರಿಕವಾಗಿ ಕಾರ್ಯಬದ್ಧಗೊಳಿಸಿತು. ಆನಂತರ, 1949ರ ನವೆಂಬರ್ 26 ರಂದು ಅಂಗೀಕರಿಸಲ್ಪಟ್ಟ ಮತ್ತು 1950ರ ಜನವರಿ 26 ರಂದು ಜಾರಿಗೆ ಬಂದ ಸಂವಿಧಾನವನ್ನು ಇಂದು ಸಂವಿಧಾನದ ಶತಮಾನೋತ್ಸವ ಆಚರಿಸುತ್ತಿರುವವರೇ ವಿರೋಧಿಸಿದ್ದರು” ಎಂದು ಜೈರಾಮ್ ರಮೇಶ್ ವಿವರಿಸಿದ್ದರು. ಆರ್ಎಸ್ಎಸ್/ಬಿಜೆಪಿಯನ್ನು ಟೀಕಿಸಿದ್ದರು.
ಸ್ವಾತಂತ್ರ್ಯ ನಂತರದಲ್ಲಿ 34 ವರ್ಷಗಳ ಕಾಲ ಬಿಹಾರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿ, ಆಡಳಿತ ನಡೆಸಿತ್ತು. ಆದರೆ, ಈಗ ತನ್ನ ಗೆಲುವಿಗಾಗಿ ಮಿತ್ರಪಕ್ಷವನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿದೆ. ಆರ್ಜೆಡಿ ಮೇಲೆ ಅವಲಂಬಿತವಾಗಿದೆ.
ಪ್ರಸ್ತುತ ಬಿಹಾರ ಚುನಾವಣೆಯಲ್ಲಿ ಮತದಾರರನ್ನು ವಂಚಿಸಲಾಗಿದೆ. ಎಸ್ಐಆರ್ ಮೂಲಕ ವಿಪಕ್ಷಗಳ ಮತದಾರರನ್ನು ಹೊರಹಾಕುವ ಕುತಂತ್ರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಚುನಾವಣೆಯ ಸಮಯದಲ್ಲಿ ತನ್ನನ್ನು ತಾನು ಮತ್ತಷ್ಟು ಸಜ್ಜುಗೊಳಿಸಿಕೊಳ್ಳಲು ಎದುರು ನೋಡುತ್ತಿತ್ತು. ಚುನಾವಣೆಗೂ ಮುನ್ನ ತನ್ನ ಬಲವನ್ನು ಪ್ರದರ್ಶಿಸುವ ಗುರಿಯೊಂದಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ, ಮತದಾರರ ಅಧಿಕಾರ ಯಾತ್ರೆ ನಡೆಸಿತ್ತು. ಜೊತೆಗೆ, ಪಾಟ್ನಾದಲ್ಲಿ ಸಿಡಬ್ಲ್ಯೂಸಿ ಸಭೆ ಸೇರಿತ್ತು.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
ಪಾಟ್ನಾದ ಸಭೆಯು ಕಾಂಗ್ರೆಸ್ನ ತೆಲಂಗಾಣ ಚುನಾವಣೆ ಸಂದರ್ಭದ ತಂತ್ರದ ಭಾಗವಾಗಿತ್ತು. ತೆಲಂಗಾಣ ಚುನಾವಣೆಗೆ ಸ್ವಲ್ಪ ಮೊದಲು, 2023ರ ಸೆಪ್ಟೆಂಬರ್ 16ರಂದು ಹೈದರಾಬಾದ್ನಲ್ಲಿ ಕಾಂಗ್ರೆಸ್ ವರಿಷ್ಠರು ಸಭೆ ನಡೆಸಿದ್ದರು. ತೆಲಂಗಾಣದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯು ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಿಸಿತ್ತು. ಪರಿಣಾಮವಾಗಿ, ತೆಲಂಗಾಣದಲ್ಲಿ ಪಕ್ಷವು ಅದ್ಭುತವಾಗಿ ಜಯ ಸಾಧಿಸಿತು ಎಂಬುದನ್ನು ಕಾಂಗ್ರೆಸ್ ನಂಬಿದೆ. ಅದೇ ರೀತಿ, ಪಾಟ್ನಾದಲ್ಲಿ ಸಭೆ ನಡೆಸುವುದು ಕಾಂಗ್ರೆಸ್ಗೆ ಬಲ ತಂದುಕೊಡುತ್ತದೆ ಎಂದು ಕಾಂಗ್ರೆಸ್ ಭಾವಿಸಿತ್ತು.
ಈಗ, ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಬಿಹಾರ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನ ನಡೆದಿದೆ. ಮತದಾನ ನಡೆದ 121 ಸ್ಥಾನಗಳಲ್ಲಿ ಒಟ್ಟು 65% ಮತದಾರರು ಮತ ಚಲಾಯಿಸಿದ್ದಾರೆ. ಇದು, ಕಾಂಗ್ರೆಸ್ ಭಾಗವಾಗಿರುವ ಮಹಾಘಟಬಂಧನ್ ಗೆಲುವಿಗೆ ನೆರವಾಗುವ ಸಾಧ್ಯತೆಗಳಿವೆ. ಯಾಕೆಂದರೆ, ದಾಖಲೆಯ ಮತದಾನವು ಆಡಳಿತ ವಿರೋಧಿ ಅಲೆಯಿಂದ ಬರುತ್ತವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಆದಾಗ್ಯೂ, 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 19 ಸ್ಥಾನಗಳನ್ನು ಗೆದ್ದಿತು. ಈ ಬಾರಿ, ಕಾಂಗ್ರೆಸ್ 60 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಸ್ಪರ್ಧೆಯ ಸೀಟುಗಳ ಸಂಖ್ಯೆ ಕಡಿಮೆಯಾಗಿದ್ದರೂ, ಗೆಲುವಿನ ಸ್ಥಾನಗಳು ಹೆಚ್ಚಲಿವೆ ಎಂಬ ವಿಶ್ವಾಸ ಕಾಂಗ್ರೆಸ್ನಲ್ಲಿದೆ.




