ಬಿಹಾರದ ಎರಡನೇ ಮತ್ತು ಕೊನೆಯ ಹಂತದ ಚುನಾವಣೆಯು ಮಂಗಳವಾರ ನಡೆಯಲಿದ್ದು, ಎನ್ಡಿಎ ಒಕ್ಕೂಟ, ವಿಪಕ್ಷಗಳ ಮಹಾಘಟಬಂಧನ್ ಚುನಾವಣೆಗೆ ಸಜ್ಜಾಗಿದೆ. ಬಿಹಾರದ 20 ಜಿಲ್ಲೆಗಳ 122 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 6ರಂದು 121 ಸ್ಥಾನಗಳಿಗೆ ಈಗಾಗಲೇ ಮತದಾನ ನಡೆದಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಇನ್ನು ನೇಪಾಳ ಮಾತ್ರವಲ್ಲದೆ ಮೂರು ವಿಭಿನ್ನ ರಾಜ್ಯಗಳ ಗಡಿಯನ್ನು ಹೊಂದಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ 1,625 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? 2 ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ, ನ.14 ಕ್ಕೆ ಮತ ಎಣಿಕೆ
ಔರಂಗಾಬಾದ್ನಂತಹ ವಿಧಾನಸಭಾ ಕ್ಷೇತ್ರಗಳು ಪಶ್ಚಿಮದಲ್ಲಿ ಉತ್ತರ ಪ್ರದೇಶದ ಗಡಿಯನ್ನು ಹಂಚಿಕೊಂಡರೆ, ಮಾವೋವಾದಿ ನಾಯಕರು ಹೆಚ್ಚಾಗಿರುವ ಗಯಾ ದಕ್ಷಿಣ ಬಿಹಾರದ ಜಾರ್ಖಂಡ್ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಿಶನ್ಗಂಜ್ ಮತ್ತು ಅರಾರಿಯಾ ಪೂರ್ವದಲ್ಲಿ ಪಶ್ಚಿಮ ಬಂಗಾಳದೊಂದಿಗೆ ಗಡಿಯನ್ನು ಹಂಚಿಕೊಂಡರೆ, ಚಂಪಾರಣ್ನ ಪ್ರದೇಶವು ಉತ್ತರದಲ್ಲಿ ನೇಪಾಳದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. “ಮಂಗಳವಾರ ಸಂಜೆ 6 ಗಂಟೆಯೊಳಗೆ ಮತದಾನ ಮುಗಿಯುವವರೆಗೆ ಗಡಿಗಳನ್ನು ಮುಚ್ಚಲು ನಿಖರವಾಗಿ ಇದೇ ಕಾರಣ” ಎಂದು ಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಹೇಳಿದರು.
ಮಹಾಘಟಬಂಧನ್ ಕತಿಹಾರ್, ಅರಾರಿಯಾ, ಪೂರ್ಣಿಯಾ ಮತ್ತು ಕಿಶನ್ಗಂಜ್ನಂತಹ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಅಸಾದುದ್ದೀನ್ ಓವೈಸಿ ಅವರ AIMIM ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ತಮ್ಮ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಭಾನುವಾರ ಕೊನೆಯ ಪ್ರಚಾರವನ್ನು ನಡೆಸಿದ್ದಾರೆ.
ಹಿರಿಯ ಜೆಡಿಯು ನಾಯಕ ಮತ್ತು ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ನಾಳೆ ಕಣದಲ್ಲಿದ್ದಾರೆ. ಅವರು ಸತತ ಎಂಟನೇ ಅವರಿಗೆ ಸುಪೌಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಪ್ರೇಮ್ ಕುಮಾರ್ 1990ರಿಂದ ಶಾಸಕರಾಗಿರುವ ಗಯಾ ಟೌನ್ ಕ್ಷೇತ್ರದಲ್ಲಿ ಎಂಟನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿಯ ರೇಣು ದೇವಿ (ಬೆಟ್ಟಿಯಾ) ಮತ್ತು ನೀರಜ್ ಕುಮಾರ್ ಸಿಂಗ್ ‘ಬಬ್ಲು’ (ಛತ್ತಾಪುರ), ಮತ್ತು ಜೆಡಿಯುನ ಲೆಶಿ ಸಿಂಗ್ (ಧಮ್ದಹಾ), ಶೀಲಾ ಮಂಡಲ್ (ಫುಲ್ಪರಸ್), ಮತ್ತು ಜಮಾ ಖಾನ್ (ಚೈನ್ಪುರ) ಕಣದಲ್ಲಿರುವ ಇತರ ಸಚಿವರುಗಳು.
ಮಾಜಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಕತಿಹಾರ್ನಿಂದ ಸ್ಪರ್ಧಿಸುತ್ತಿದ್ದು, ಸತತ ಐದನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕತಿಹಾರ್ ಬಲರಾಂಪುರ ಮತ್ತು ಕಡ್ವಾದಲ್ಲಿಯೂ ಭಾರಿ ಸ್ಪರ್ಧೆ ಇರಲಿದೆ. ಸಿಪಿಐ (ಎಂಎಲ್) ಲಿಬರೇಶನ್ನ ಮೆಹಬೂಬ್ ಆಲಂ ಮತ್ತು ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಸತತ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ.





