ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶ ಅಂತಿಮಗೊಂಡಿದೆ. ಈ ಬಗ್ಗೆ ಜೆಡಿಯು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ. ಅಂದೇ, ಪಕ್ಷದಲ್ಲಿ ಅವರು ನಿಭಾಯಿಸುವ ಜವಾಬ್ದಾರಿಯ ಕುರಿತೂ ಮಾಹಿತಿ ನೀಡಲಾಗುತ್ತದೆ ಎಂದು ಬಿಹಾರ ಸಚಿವ ಶ್ರವಣ್ ಕುಮಾರ್ ತಿಳಿಸಿದ್ದಾರೆ.
ಜೆಡಿಯು ಪಕ್ಷದ ಹಿರಿಯ ನಾಯಕರಾಗಿರುವ ಶ್ರವಣ್ ಕುಮಾರ್, “ನಿಶಾಂತ್ ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುವುದು” ಎಂದು ಹೇಳಿದ್ದಾರೆ.
“ನಿಶಾಂತ್ ಕುಮಾರ್ ಅವರು ಸಕ್ರಿಯ ರಾಜಕೀಯಕ್ಕೆ ಸೇರುವುದು ಈಗ ಅಂತಿಮಗೊಂಡಿದೆ. ಪಕ್ಷವು ಒಂದು ಅಥವಾ ಎರಡು ದಿನಗಳಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಿದೆ. ನಿಶಾಂತ್ ಅವರು ರಾಜಕೀಯಕ್ಕೆ ಬರಬೇಕೆಂದು ಪಕ್ಷದ ಕಾರ್ಯಕರ್ತರು ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಹೋಳಿ ಹಬ್ಬದ ಮುನ್ನವೇ ಈ ನಿರ್ಧಾರ ಹೊರಬಂದಿರುವುದು ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಸಂಭ್ರಮ ಮೂಡಿಸಿದೆ” ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ಪಕ್ಷದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗುವುದು. ಅವರು ಯಾವ ನಿರ್ದಿಷ್ಟ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದು ಒಂದೆರಡು ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದು ಸಚಿವರು ಸೇರಿಸಿದ್ದಾರೆ.
ನಿಶಾಂತ್ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರವಣ್ ಕುಮಾರ್, “ಏನು ಬೇಕಾದರೂ ಆಗಬಹುದು” ಎಂದಿದ್ದಾರೆ.




