ನೂತನ ನಿಯಮಗಳನ್ನು ಒಳಗೊಂಡ ಯುಜಿಸಿ ಕಾಯ್ದೆ ಜಾರಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ಅನ್ನು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಟೀಕಿಸಿದ ಸಿಪಿಐ (ಎಂಎಲ್) ಶಾಸಕ ಸಂದೀಪ್ ಸೌರಭ್, “ಇದು ಬ್ರಾಹ್ಮಣ್ಯ ಮನಸ್ಥಿತಿ” ಎಂದು ಹೇಳಿದ್ದಾರೆ. ಈ ಪದ ಪ್ರಯೋಗಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನಂತರ ಸ್ಪೀಕರ್ ಪ್ರೇಮ್ ಕುಮಾರ್ ಪದವನ್ನು ಕಲಾಪದ ನಡವಳಿಗಳಿಂದ ತೆಗೆದುಹಾಕಿದರು.
ಮುಂದೂಡಿಕೆ ನಿರ್ಣಯದ ವೇಳೆ ಯುಜಿಸಿ ನಿಯಮದ ವಿಚಾರವನ್ನು ಎತ್ತಿದ ಎಡಪಕ್ಷದ ನಾಯಕ ಸಂದೀಪ್ ಸೌರಭ್ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸಲು ಯುಜಿಸಿ ಸಮಾನತೆಯ ಕಾಯ್ದೆಯನ್ನು ಜಾರಿಗೆ ತರುವಂತೆ ಬಿಹಾರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಜಾತಿ ಪೂರ್ವಾಗ್ರಹವನ್ನು ತೊಡೆದುಹಾಕಲು ಮತ್ತು ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಂತಹ ಚೌಕಟ್ಟು ಅತ್ಯಗತ್ಯ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸನಾತನ ಧರ್ಮದ ಆತ್ಮವೇ ಬ್ರಾಹ್ಮಣ್ಯ
ಹಾಗೆಯೇ ಈ ಸಂದರ್ಭದಲ್ಲಿ “ಬಿಹಾರ ಮತ್ತು ದೇಶಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ” ಎಂದು ಸಿಪಿಐ (ಎಂಎಲ್) ಶಾಸಕರು, 2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲಾ ಸಾವು, 2019ರಲ್ಲಿ ಮುಂಬೈನಲ್ಲಿ ವೈದ್ಯಕೀಯ ವಿದ್ಯಾರ್ಥಿ ಪಾಯಲ್ ಪ್ರಕರಣ ಮತ್ತು 2023ರಲ್ಲಿ ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಸಾವು ಪ್ರಕರಣಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
“ಇವು ಜಾತಿ ತಾರತಮ್ಯ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಸಾಂಸ್ಥಿಕ ಹತ್ಯೆಗಳ ಉದಾಹರಣೆಗಳಾಗಿವೆ. ಯುಜಿಸಿ ಸುಪ್ರೀಂ ಕೋರ್ಟ್ ಮತ್ತು ಸಂಸದೀಯ ಸಮಿತಿಗೆ ಸಲ್ಲಿಸಿದ ವರದಿಯ ಪ್ರಕಾರ, 2019 ಮತ್ತು 2024 ರ ನಡುವೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಕಿರುಕುಳದ ಘಟನೆಗಳು ಶೇಕಡ 118ರಷ್ಟು ಹೆಚ್ಚಾಗಿದೆ. ಬ್ರಾಹ್ಮಣ್ಯ ಮನಸ್ಥಿತಿ ಹೊಂದಿರುವವರು ಪ್ರತಿಭಟನೆ ನಡೆಸಿದ ನಂತರ ಸುಪ್ರೀಂ ಕೋರ್ಟ್ ಯುಜಿಸಿ ನಿಯಮಗಳಿಗೆ ತಡೆ ನೀಡಿದೆ” ಎಂದು ಆರೋಪಿಸಿದ್ದಾರೆ.
ಸಿಪಿಐ (ಎಂಎಲ್) ಸದಸ್ಯರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸದಸ್ಯ ವಿಜಯ್ ಕುಮಾರ್ ಸಿನ್ಹಾ, “ವಿರೋಧ ಪಕ್ಷಗಳು ಜಾತಿವಾದದ ವಿಷವನ್ನು ತುಂಬಲು ಮತ್ತು ರಾಷ್ಟ್ರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಇಂತಹ ಪದಗಳನ್ನು ಏಕೆ ಬಳಸಲಾಗುತ್ತಿದೆ? ಅದು ನಿಮ್ಮ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಆರೋಪಿಸಿದರು. ಹಾಗೆಯೇ, “ಸರ್ಕಾರವು ಪ್ರತಿಯೊಂದು ಸಮುದಾಯವನ್ನು ಗೌರವಿಸುತ್ತದೆ ಮತ್ತು ವಿಭಜಕ ಭಾಷೆಯನ್ನು ಬೆಂಬಲಿಸುವುದಿಲ್ಲ” ಎಂದರು. ಇನ್ನು ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಮುಜಫರ್ಪುರದ ತಾಂತ್ರಿಕ ಕಾಲೇಜಿನಲ್ಲಿದ್ದಾಗ ರ್ಯಾಗಿಂಗ್ (Ragging) ಎದುರಿಸುತ್ತಿದ್ದೆ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ.
ಗದ್ದಲ ಹೆಚ್ಚುತ್ತಿದ್ದಂತೆ, ಸ್ಪೀಕರ್ ಪ್ರೇಮ್ ಕುಮಾರ್ ಮಧ್ಯಪ್ರವೇಶಿಸಿ ‘ಬ್ರಾಹ್ಮಣ್ಯ’ ಎಂಬ ಪದವನ್ನು ಕಲಾಪದ ನಡವಳಿಗಳಿಂದ ತೆಗೆದುಹಾಕಿದರು.
ಇದನ್ನು ಓದಿದ್ದೀರಾ? ವಚನಯಾನ | ಬ್ರಾಹ್ಮಣ್ಯ ಮತ್ತು ಮಡಿವಂತಿಕೆ
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮಗಳು ಮತ್ತು ಕಾಯ್ದೆ ತಿದ್ದುಪಡಿ ತಂದಿದೆ. ಈ ನಿಯಮಗಳು ಕೇವಲ ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ವಿರುದ್ಧದ ತಾರತಮ್ಯವನ್ನು ಮಾತ್ರ ಪರಿಗಣಿಸುತ್ತವೆ; ಸಾಮಾನ್ಯ ವರ್ಗದ (General Category) ವಿದ್ಯಾರ್ಥಿಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ನೀಡಿರುವ ದತ್ತಾಂಶಗಳ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯದ ದೂರುಗಳ ಸಂಖ್ಯೆಯಲ್ಲಿ ಕಳೆದ ಐದು ವರ್ಷಗಳಲ್ಲಿ 118.4% ಹೆಚ್ಚಳ ಕಂಡುಬಂದಿದೆ. ಹೆಚ್ಚಿನ ದೂರುಗಳು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಂದ ದಾಖಲಾಗಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಭವಿಸಿದ 98 ವಿದ್ಯಾರ್ಥಿ ಆತ್ಮಹತ್ಯೆಗಳಲ್ಲಿ ಬಹುಪಾಲು ವಿದ್ಯಾರ್ಥಿಗಳು ದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಈ ಆಧಾರದಲ್ಲಿ ಹೊಸ ಯುಜಿಸಿ ನಿಯಮ ಜಾರಿ ಮಾಡಲಾಗುತ್ತಿದೆ. ಆದರೆ ಸದ್ಯ ಈ ನಿಯಮ ರಾಜಕೀಯವಾಗಿ ಬಳಕೆಯಾಗುತ್ತಿದ್ದು, ಬಿಜೆಪಿಗರು ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳಲು ಮೇಲ್ಜಾತಿ ಎನಿಸಿಕೊಂಡವರ ಪರವಾಗಿ ನಿಲ್ಲುವಂತಾಗಿದೆ.





