ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಸಿನ್ಹಾ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಪ್ರಶ್ನಿಸಿದ್ದಾರೆ.
ಪಟನಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಾದವ್, “ವಿಜಯ್ ಕುಮಾರ್ ಸಿನ್ಹಾ ಎರಡು ವಿಭಿನ್ನ ಜಿಲ್ಲೆಗಳ ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರಗಳ ಮತದಾರರಾಗಿದ್ದಾರೆ. ಪಟನಾ ಜಿಲ್ಲೆಯಲ್ಲಿ ಲಖಿಸರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಹೆಸರು ಇದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ, ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ: ಕನ್ಹಯ್ಯಾ ಕುಮಾರ್
“ಅವರು ಎರಡು ವಿಭಿನ್ನ ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಕಾರ್ಡ್ಗಳನ್ನು ಹೊಂದಿದ್ದಾರೆ. ಆಶ್ಚರ್ಯಕರವಾಗಿ, ಬಿಹಾರದಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (SIR) ಮಾಡಿದ ನಂತರ ಇದು ಸಂಭವಿಸಿದೆ. ಇದೀಗ ಯಾರನ್ನು ಹೊಣೆಗಾರರನ್ನಾಗಿಸುವುದು? ಸ್ವತಃ ಸಿನ್ಹಾ ಅವರನ್ನೇ ಅಥವಾ ಚುನಾವಣಾ ಆಯೋಗವನ್ನೇ? ಸಿನ್ಹಾ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ? ಅವರು ಯಾವಾಗ ಹುದ್ದೆಗೆ ರಾಜೀನಾಮೆ ನೀಡುತ್ತಾರೆ” ಎಂದು ತೇಜಸ್ವಿ ಯಾದವ್ ಕೇಳಿದ್ದಾರೆ.
ಇನ್ನು ಯಾದವ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿನ್ಹಾ, “ಈ ಹಿಂದೆ, ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು. 2024ರ ಏಪ್ರಿಲ್ನಲ್ಲಿ ನಾನು ಲಖಿಸರೈನಿಂದ ನನ್ನ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಿದ್ದೆ. ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಹೆಸರುಗಳನ್ನು ಬಂಕಿಪುರದಿಂದ ತೆಗೆದುಹಾಕಲು ನಾನು ಒಂದು ಫಾರ್ಮ್ ಅನ್ನು ಸಹ ಭರ್ತಿ ಮಾಡಿದ್ದೇನೆ. ನನ್ನ ಬಳಿ ಪುರಾವೆಗಳಿವೆ. ಕೆಲವು ಕಾರಣಗಳಿಂದ, ನನ್ನ ಹೆಸರನ್ನು ಬಂಕಿಪುರದಿಂದ ತೆಗೆದುಹಾಕಲಾಗಿಲ್ಲ ಮತ್ತು ಅದು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ” ಎಂದಿದ್ದಾರೆ.
है मोदी जी के खासमखास बिहार के उपमुख्यमंत्री श्री विजय सिन्हा
— Tejashwi Yadav (@yadavtejashwi) August 10, 2025
👉 ये दो अलग-अलग जिलों की दो अलग-अलग विधानसभा क्षेत्रों के दो अलग-अलग जगह के मतदाता हैं। लखीसराय जिले के लखीसराय विधानसभा क्षेत्र से और पटना जिले की बांकीपुर, विधानसभा निर्वाचन क्षेत्र से।
👉 इनके पास दो दो अलग-अलग… pic.twitter.com/E38JXb9nzO
“ಬಂಕಿಪುರದಲ್ಲಿ ನನ್ನ ಹೆಸರನ್ನು ತೆಗೆದುಹಾಕಲು ನಾನು ಬೂತ್ ಮಟ್ಟದ ಅಧಿಕಾರಿಗೆ ಕರೆ ಮಾಡಿ ಲಿಖಿತ ಅರ್ಜಿಯನ್ನು ಸಲ್ಲಿಸಿದೆ, ರಶೀದಿಯನ್ನು ತೆಗೆದುಕೊಂಡೆ. ನನ್ನ ಬಳಿ ಎರಡೂ ದಾಖಲೆಗಳಿವೆ. ನಾನು ಒಂದು ಸ್ಥಳದಲ್ಲಿ ಮಾತ್ರ ಮತ ಚಲಾಯಿಸಿದ್ದೇನೆ” ಎಂದು ಹೇಳಿದ್ದಾರೆ.
“ಆದರೆ ಜಂಗಲ್-ರಾಜ್ ರಾಜಕುಮಾರ (ತೇಜಸ್ವಿ) ತಪ್ಪು ಸಂಗತಿಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ, ಆಗಸ್ಟ್ 1ರಂದು ಬಿಡುಗಡೆಯಾದ ಹೊಸ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಆರೋಪಿಸಿದ್ದಾರೆ. ಹಾಗೆಯೇ ತಮ್ಮ EPIC ಸಂಖ್ಯೆಯನ್ನು ಬದಲಾಯಿಸಲಾಗಿದೆ ಎಂದೂ ದೂರಿದ್ದಾರೆ. ಬೇರೆ ಮತದಾರರ ಗುರುತಿನ ಚೀಟಿ ನೀಡಿದ ಕಾರಣಕ್ಕೆ ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ. ಅದಾದ ಬಳಿಕ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಮತದಾರರ ಗುರುತಿನ ಚೀಟಿ ಸಂಖ್ಯೆ ನಕಲಿ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸಿದೆ. ಹಾಗೆಯೇ 2025ರ ಆಗಸ್ಟ್ 16ರ ಸಂಜೆ ಐದು ಗಂಟೆಯೊಳಗೆ ಪರಿಶೀಲನೆಗಾಗಿ ತಮ್ಮ ಮೂಲ ಮತದಾರರ ಫೋಟೋ ಗುರುತಿನ ಚೀಟಿ (EPIC) ಯನ್ನು ಸಲ್ಲಿಸುವಂತೆ ಇಸಿಐ ತಿಳಿಸಿದೆ. ಈ ಎಲ್ಲ ಬೆಳವಣಿಗೆ ನಡುವೆ ಬಿಹಾರ ಉಪಮುಖ್ಯಮಂತ್ರಿಯೂ ಎರಡು ಗುರುತಿನ ಚೀಟಿ ಹೊಂದಿರುವ ಬಗ್ಗೆ ತೇಜಸ್ವಿ ಯಾದವ್ ಮಾತನಾಡಿದ್ದಾರೆ.





