ಬಿಹಾರದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿವೆ. ಚುನಾವಣೆಗಾಗಿ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ. ಎನ್ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆಗೆ ಕಸರತ್ತು ನಡೆಸುತ್ತಿವೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಹೆಚ್ಚಿನ ಸ್ಥಾನಗಳಿಗಾಗಿ ಎಲ್ಜೆಪಿ ಮತ್ತು ಹಿಂದುಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಪಕ್ಷಗಳು ಪಟ್ಟು ಹಿಡಿದಿವೆ. ಬಿಜೆಪಿಗೆ ಚುನಾವಣಾ ಆರಂಭದಲ್ಲೇ ಸಂಕಷ್ಟ ಎದುರಾಗಿದೆ.
ಬಿಹಾರದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ, ಎನ್ಡಿಎಯ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ತಲಾ 100 ಸೀಟುಗಳನ್ನು ಹಂಚಿಕೊಂಡು, ಉಳಿದ 43 ಕ್ಷೇತ್ರಗಳನ್ನು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ), ಹಿಂದುಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಹಾಗೂ ರಾಷ್ಟ್ರೀಯ ಲೋಕ್ ಮೋರ್ಚಾ (ಆರ್ಎಲ್ಎಂ)ಗಳಿಗೆ ಹಂಚಲು ಮುಂದಾಗಿದ್ದವು. ಆದರೆ, ಈ ಮೂರು ಪಕ್ಷಗಳು ಬಿಜೆಪಿ-ಜೆಡಿಯು ನಿರ್ಧಾರದ ವಿರುದ್ಧ ಬಂಡಾಯ ಎದ್ದಿವೆ.
40 ಸ್ಥಾನಗಳಿಗಾಗಿ ಎಲ್ಜೆಪಿ ಪಟ್ಟು ಹಿಡಿದಿದೆ. ಇದೀಗ, ಕೇಂದ್ರ ಸಚಿವ ಜೀತನ್ ರಾಂ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷ ಕೂಡ 15 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.
ಈಗಾಗಲೇ, ತಮ್ಮ ಬೇಡಿಕೆಯಷ್ಟು ಸೀಟುಗಳನ್ನು ಕೊಡದಿದ್ದರೆ, ಎನ್ಡಿಎ ತೊರೆಯುವುದಾಗಿ ಎಲ್ಜೆಪಿ ಎಚ್ಚರಿಕೆ ನೀಡಿದೆ. ಈಗ, ಹಿಂದುಸ್ತಾನಿ ಅವಾಮಿ ಮೋರ್ಚಾ ಕೂಡ ತಮಗೆ 15 ಸ್ಥಾನಗಳನ್ನು ಬಿಟ್ಟುಕೊಡದಿದ್ದರೆ, ಎನ್ಡಿಎಯಲ್ಲಿ ಇದ್ದುಕೊಂಡೇ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | 35 ವರ್ಷಗಳಲ್ಲಿ ಲಾಲೂ-ನಿತೀಶ್ ದೋಸ್ತಿ-ಕುಸ್ತಿಯದ್ದೇ ಆಡಳಿತ
ಸೀಟು ಹಂಚಿಕೆಯ ಬಗ್ಗೆ ಟ್ವೀಟ್ ಮಾಡಿರುವ ಮಾಂಝಿ, ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕಾವ್ಯದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. “ನಾವು ಎನ್ಡಿಎ ನಾಯಕರನ್ನು ಗೌರವಿಸುತ್ತೇವೆ. ಆದರೆ, ಅವರು ನಮ್ಮನ್ನು ಅವಮಾನಿಸುತ್ತಿದ್ದಾರೆ ಎನ್ನಿಸುತ್ತಿದೆ. ನಮ್ಮ ಪಕ್ಷಕ್ಕೆ ಕೊಡಬೇಕಾದ ಗೌರವಯುತ ಸ್ಥಾನಗಳನ್ನು ಕೊಟ್ಟರೆ ಮಾತ್ರವೇ ನಮಗೂ ಮಾನ್ಯತೆ ಸಿಗುತ್ತದೆ. 15 ಸ್ಥಾನಗಳನ್ನು ನೀಡದಿದ್ದರೆ ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಎನ್ಡಿಎಯಲ್ಲಿ ಮುಂದುವರೆಯುತ್ತೇವೆ. ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವುದಿಲ್ಲ. ಆದರೆ, ನಮ್ಮ ಪಕ್ಷವನ್ನು ಗುರುತಿಸಬೇಕು ಎಂಬುದು ನನ್ನ ಬಯಕೆಯಾಗಿದೆ” ಎಂದಿದ್ದಾರೆ.
ಎನ್ಡಿಎಯಲ್ಲಿ ಸೀಟು ಹಂಚಿಕೆ ಕುರಿತು ಮಿತ್ರ ಪಕ್ಷಗಳನ್ನು ಸಮಾಧಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಮಾಂಝಿ ಅವರೊಂದಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಮತ್ತು ಜೆಡಿಯು ತಲಾ 100 ಸ್ಥಾನಗಳನ್ನು ಹಂಚಿಕೊಂಡು, ಎಲ್ಜೆಪಿಗೆ 24, ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷಕ್ಕೆ 10 ಹಾಗೂ ಆರ್ಎಲ್ಎಂಗೆ 6 ಸ್ಥಾನಗಳನ್ನು ನೀಡಲು ಚಿಂತಿಸಿವೆ.




