ಬಿಹಾರ ಚುನಾವಣಾ ಕಣ ಬಿರುಸು ಪಡೆದುಕೊಂಡಿದೆ. ವಿಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟವು ಬಿಹಾರಕ್ಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ಕುಟುಂಬಕ್ಕೂ ಸರ್ಕಾರಿ ಉದ್ಯೋಗ ಒದಗಿಸಲಾಗುತ್ತದೆ. ಬಿಹಾರವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಕೆಲಸ ಮಾಡಲಾಗುತ್ತದೆ ಎಂದು ಮೈತ್ರಿಕೂಟವು ಘೋಷಿಸಿದೆ.
ಮೈತ್ರಿಕೂಟದ ನಾಯಕರು ಪಾಟ್ನಾದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ನಮಗೆ ರಾಜ್ಯದ ಬೆಳವಣಿಗೆ ಬಗ್ಗೆ ಒಂದು ದೃಷ್ಟಿಕೋನವಿದೆ. ಈ ಪ್ರಣಾಳಿಕೆಯು ಕೇವಲ ಮಹಾಘಟಬಂಧನ್ನ ಭರವಸೆಗಳು ಮಾತ್ರವಲ್ಲ, ‘ತೇಜಸ್ವಿ ಪ್ರಾಣ್ ಪತ್ರ’ವೂ ಆಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಣಾಳಿಕೆಯ ಪ್ರಮುಖ ಅಂಶಗಳು
- ಎಲ್ಲಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲಾಗುವುದು.
- ಜನ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೂ 25 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆ ನೀಡಲಾಗುವುದು.
- ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಲ್ಲಿ ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಪ್ರಸ್ತುತ ಇರುವ 20% ಮೀಸಲಾತಿಯನ್ನು 30%ಗೆ ಹೆಚ್ಚಿಸಲಾಗುವುದು.
- ಬೋಧ್ ಗಯಾದಲ್ಲಿರುವ ಬೌದ್ಧ ದೇವಾಲಯಗಳ ನಿರ್ವಹಣೆಯನ್ನು ಬೌದ್ಧ ಸಮುದಾಯದ ಜನರಿಗೆ ಹಸ್ತಾಂತರಿಸಲಾಗುವುದು.
- ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸಹಾಯಧನ
- ಪ್ರತಿ ಮನೆಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್
- ಬಿಹಾರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿರುವ ‘ಜೀವಿಕಾ ದೀದೀಸ್’ ಅವರನ್ನು ಖಾಯಂ ಮಾಡಲು ಕ್ರಮ
- ಐಟಿ ಪಾರ್ಕ್ಗಳು, ವಿಶೇಷ ಆರ್ಥಿಕ ವಲಯಗಳು, ಡೈರಿ, ಕೃಷಿ ಆಧಾರಿತ ಕೈಗಾರಿಕೆಗಳು, ಶಿಕ್ಷಣಕ್ಕೆ ಹೆಚ್ಚು ಗಮನ
- 5 ಹೊಸ ಎಕ್ಸ್ಪ್ರೆಸ್ವೇಗಳ ನಿರ್ಮಾಣ
- ಅಧಿಕಾರಕ್ಕೆ ಬಂದ 20 ತಿಂಗಳೊಳಗೆ ಬಿಹಾರದಾದ್ಯಂತ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಮತ್ತು ಉದ್ಯೋಗ ಖಾತರಿಯ ಕುರಿತು ಹೊಸ ಕಾನೂನು ರಚನೆ.
ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದ ಎನ್ಡಿಎ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, “ನಾವು ಚುನಾವಣೆಗೆ ಮುಂಚಿತವಾಗಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದೇವೆ… ನಾವು ಇಂದು ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಎನ್ಡಿಎ ಪಕ್ಷಗಳ ಕತೆ ಏನು? ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ತಮ್ಮ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಅವರು ನಮ್ಮ ಭರವಸೆಗಳನ್ನು ನಕಲು ಮಾಡುತ್ತಾರೆ” ಎಂದು ಟೀಕಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ರಚನಾತ್ಮಕವಾಗಿ ಏನನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
243 ಸ್ಥಾನಗಳನ್ನು ಹೊಂದಿರುವ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ.




