ಬಿಹಾರದ ವಿಧಾನಸಭಾ ಚುನಾವಣೆಯ ಎಣಿಕೆ ನಡೆಯುತ್ತಿದೆ. ಆರಂಭಿಕ ಸುತ್ತುಗಳಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಮುನ್ನಡೆ ಸಾಧಿಸಿದೆ. ಮಹಾಘಟಬಂಧನ್ 2020ರ ಚುನಾವಣೆಯ ಫಲಿತಾಂಶಕ್ಕಿಂತಲೂ ಹಿಂದುಳಿದಿದೆ. ಎನ್ಡಿಎ 132 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಮಹಾಘಟಬಂಧನ್ 80 ಸ್ಥಾನಗಳಲ್ಲಿ ಮುಂದಿದೆ. ನಿತೀಶ್ ಕುಮಾರ್ ಅವರು ದಾಖಲೆಯ 5ನೇ ಬಾರಿಗೆ ಮುಖ್ಯಮಂತ್ರಿಯಾಗುವರೇ ಅಥವಾ ತೇಜಸ್ವಿ ಯಾದವ್ ಅವರು ವಿಪಕ್ಷಗಳನ್ನು ಅಧಿಕಾರದತ್ತು ತರುವರೇ ಎಂಬ ಕುತೂಹಲ ಹೆಚ್ಚಾಗಿದೆ.
ಕಳೆದ 20 ವರ್ಷಗಳಲ್ಲಿ ಅಲ್ಪಾವಧಿಗೆ ಮಾತ್ರವೇ ತೇಜಸ್ವಿ ಯಾದವ್ ಅವರ ಆರ್ಜೆಡಿ ಅಧಿಕಾರದಲ್ಲಿತ್ತು. ಅದೂ, ನಿತೀಶ್ ಅವರೊಂದಿಗಿನ ಮೈತ್ರಿ ಜೊತೆಗೆ. ಆಗಲೂ ಸರ್ಕಾರವನ್ನು ಮುನ್ನಡೆಸುವ ಅವಕಾಶ ಆರ್ಜೆಡಿಗೆ ಇರಲಿಲ್ಲ. 20 ವರ್ಷಗಳ ಸತತ ಹೋರಾಟದ ಬಳಿಕವಾದರೂ, ಈ ಬಾರಿ ಆರ್ಜೆಡಿ ನೇತೃತ್ವದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಗಳು ಚುನಾವಣಾ ಕಣದಲ್ಲಿದ್ದವು.
ಆದರೆ, ಸದ್ಯದ ಮತ ಎಣಿಕೆ ಸಂದರ್ಭದಲ್ಲಿ ಎನ್ಡಿಎ ಮುನ್ನಡೆಯಲ್ಲಿದೆ. ಇನ್ನೂ, ಹಲವು ಸುತ್ತುಗಳ ಮತ ಎಣಿಕೆ ಬಾಕಿ ಮಧ್ಯಾಹ್ನದ ವೇಳೆಗೆ ಬಿಹಾರದ ಅಧಿಕಾರ ಯಾರ ಕೈಸೇರಲಿದೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತದೆ.
ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ತಮ್ಮ ಸಾಧನೆಗಳ ಹೊರತಾಗಿ ಕೇವಲ ವಿಪಕ್ಷಗಳನ್ನು ದೂರುವುದರಲ್ಲೇ ಚುನಾಣಾ ಪ್ರಚಾರವನ್ನು ಮುಗಿಸಿದೆ. ಮಹಾಘಟನಬಂಧನ್ ಬಿಹಾರ ಅಭಿವೃದ್ಧಿ, ಮೂಲಸೌಕರ್ಯ, ನಿರುದ್ಯೋಗದ ಬಗ್ಗೆ ಹೆಚ್ಚಾಗಿ ಗಮನ ಸೆಳೆದಿದೆ. ಇದೆಲ್ಲದರ ನಡುವೆ, ಪ್ರಶಾಂತ್ ಕಿಶೋರ್ ಅವರ ಜೆಎಸ್ಪಿ ಕೂಡ ಗಮನ ಸೆಳೆದಿದೆ.
2020ರ ವಿಧಾನಸಭಾ ಚುನಾವಣೆಯಲ್ಲಿ 74 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಪ್ರಸ್ತುತ 79 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 43 ಸ್ಥನಗಳಲ್ಲಿ ಮಾತ್ರವೇ ಗೆದ್ದಿದ್ದ ಜೆಡಿಯು ಈಗ 68 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.




