ಬಿಹಾರ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. 122 ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನವು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದ ಬಹುಸಂಖ್ಯೆಯ ಸಚಿವರ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.
2ನೇ ಹಂತದ ಮತದಾನದ ಪ್ರಮುಖ 10 ಅಂಶಗಳು ಇಲ್ಲಿವೆ:
- ಬಿಹಾರದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 122 ಕ್ಷೇತ್ರಗಳಲ್ಲಿ 11 ಗಂಟೆಯ ವೇಳೆಗೆ 23.1% ಮತದಾನ ದಾಖಲಾಗಿದೆ. ಮತದಾನದ ಸಮಯದಲ್ಲಿಯೇ ಮಹಾಘಟಬಂಧನ್ ಮೈತ್ರಿಯೊಳಗೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಮೈತ್ರಿಕೂಟದ ಉಪಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ವಿಕಾಸಶೀಲ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರು ಬಿರುಕಿನ ಮಾತುಗಳನ್ನು ನಿರಾಕರಿಸಿದ್ದಾರೆ. ಮೈತ್ರಿ ಪಕ್ಷಗಳು ಒಗ್ಗಟ್ಟಿನಿಂದ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
- ಇಂದಿನ ಮತದಾನವು NDA ಮೈತ್ರಿಕೂಟದ ಸಣ್ಣ ಪಾಲುದಾರ ಪಕ್ಷಗಳಾದ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾಗಳಿಗೆ ಬಲಪರೀಕ್ಷೆ ಕಣವಾಗಿದೆ. ಎರಡೂ ಪಕ್ಷಗಳು ತಲಾ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.
- ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದ ಒಂಬತ್ತು ಸಚಿವರು 2ನೇ ಹಂತದಲ್ಲಿ ಜನರ ತೀರ್ಪು ಎದುರಿಸುತ್ತಿದ್ದಾರೆ. ಸಚಿವರಾದ ಬಿಜೇಂದ್ರ ಪ್ರಸಾದ್ ಯಾದವ್ (ಸುಪಾಲ್), ಸುಮಿತ್ ಕುಮಾರ್ ಸಿಂಗ್ (ಚಾಕೈ), ಮೊಹಮ್ಮದ್ ಜಮಾ ಖಾನ್ (ಚೈನ್ಪುರ್), ಲೇಶಿ ಸಿಂಗ್ (ಧಮ್ದಾಹಾ), ಕೃಷ್ಣ ನಂದನ್ ಪಾಸ್ವಾನ್ (ಹರ್ಸಿಧಿ), ರೇಣು ದೇವಿ (ಬೆಟ್ಟಿಯಾ), ನೀರಜ್ ಕುಮಾರ್ ಬಬ್ಲು (ಗಯಾ), ಶೀಲಾ ಮಂಡಲ್ (ಫುಲ್ಪಾರಸ್), ವಿಜಯ್ ಮಂಡಲ್ (ಸಿಕ್ತಿ), ಮತ್ತು ಜಯಂತ್ ರಾಜ್ ಕುಶ್ವಾಹ (ಅಮರ್ಪುರ್) ಕಣದಲ್ಲಿದ್ದಾರೆ.
- ಇಂದು ಮತದಾನ ನಡೆಯಲಿರುವ ಜಿಲ್ಲೆಗಳಲ್ಲಿ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸೀತಾಮರ್ಹಿ, ಮಧುಬನಿ, ಸುಪೌಲ್, ಅರಾರಿಯಾ ಮತ್ತು ಕಿಶನ್ಗಂಜ್ ಜಿಲ್ಲೆಗಳು ನೇಪಾಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ.
- ಮತದಾನ ನಡೆಯುತ್ತಿರುವ ಹಲವು ಜಿಲ್ಲೆಗಳು ಸೀಮಾಂಚಲ ಪ್ರದೇಶದ ವ್ಯಾಪ್ತಿಯಲ್ಲಿವೆ. ಇಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಗಳಿಗೆ ನಿರ್ಣಾಯಕವಾಗಿದೆ.
- ಭಾಗಲ್ಪುರ ಜಿಲ್ಲೆಯ ಕಹಲ್ಗಾಂವ್ ವಿಧಾನಸಭಾ ಸ್ಥಾನವು ಹೆಚ್ಚು ಗಮನ ಸೆಳೆದಿರುವ ಕ್ಷೇತ್ರವಾಗಿದೆ. ಇಲ್ಲಿ ಚತುಷ್ಕೋನ ಸ್ಪರ್ಧೆ ನಡೆಯುತ್ತಿದೆ. ಮಹಾಘಟಬಂಧನ್ ಮಿತ್ರಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸ್ನೇಹಪರ ಸ್ಪರ್ಧೆಯಲ್ಲಿವೆ. ಆಡಳಿತಾರೂಢ ಜೆಡಿಯು ಕೂಡ ಕಣದಲ್ಲಿದೆ. ಬಿಜೆಪಿಯ ಹಾಲಿ ಶಾಸಕ ಪವನ್ ಕುಮಾರ್ ಯಾದವ್ ಬಂಡಾಯವೆದ್ದಿದ್ದು, ಸ್ವತಂತ್ರ ಅಬ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
- ತಮ್ಮ ಕುಟುಂಬಗಳ ಭದ್ರಕೋಟೆಯಾಗಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಕುಮಾರ್, ಮಾಜಿ ವಿಧಾನಸಭಾ ಸ್ಪೀಕರ್ ಉದಯ್ ನಾರಾಯಣ್ ಚೌಧರಿ (ಆರ್ಜೆಡಿ), ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಹಾಗೂ ಸಿಪಿಐ-ಎಂಎಲ್ ಶಾಸಕಾಂಗ ಪಕ್ಷದ ನಾಯಕ ಮೆಹಬೂಬ್ ಆಲಂ ಸೇರಿದಂತೆ ಇತರ ಪ್ರಮುಖ ಅಭ್ಯರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.
- ಮಾಜಿ ಉಪಮುಖ್ಯಮಂತ್ರಿಗಳಾದ ರೇಣು ದೇವಿ (ಬೆಟ್ಟಿಯಾ) ಮತ್ತು ತರ್ಕಿಶೋರ್ ಪ್ರಸಾದ್ (ಕತಿಹಾರ್) ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರ ಭವಿಷ್ಯವೂ ಇಂದು ನಿರ್ಧಾರವಾಗಲಿದೆ.
- ಎರಡನೇ ಹಂತದ ಮತದಾನದ ವೇಳೆ ಭದ್ರತೆಯನ್ನು ಹೆಚ್ಚಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತಾ ಸೇವೆಗೆ ನಿಯೋಜಿಸಲಾಗಿದೆ.
- ಕಳೆದ ವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯವು ಐತಿಹಾಸಿಕವಾಗಿ 65%ಕ್ಕಿಂತ ಹೆಚ್ಚಿನ ಮತದಾನವನ್ನು ದಾಖಲಿಸಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ. ಅಂದೇ ಫಲಿತಾಂಶವೂ ಹೊರಬೀಳಲಿದೆ.



